ದ.ಕ. ಆಟೊಮೊಬೈಲ್ ಆ್ಯಂಡ್ ಟಯರ್ ಡೀಲರ್ಸ್ ಸಂಘದಿಂದ ಆತ್ಮಾನಾಥನ್ ರಿಗೆ ಜೀವಮಾನದ ಸಾಧಕ ಪ್ರಶಸ್ತಿ

Update: 2017-09-26 10:37 GMT

ಮಂಗಳೂರು, ಸೆ.26: ಆಟೋಮೊಬೈಲ್ ಬಿಡಿಭಾಗಗಳ ವ್ಯಾಪಾರದಲ್ಲಿ ವಿಶೇಷ ಸೇವೆಗಾಗಿ ಮದ್ರಾಸ್ ಆಟೋ ಸರ್ವಿಸ್ (ಟಿವಿಎಸ್ ಗ್ರೂಪ್)ನ ಮಾಜಿ ಪ್ರಾದೇಶಿಕ ಮ್ಯಾನೇಜರ್ ಆರ್. ಆತ್ಮಾನಾಥನ್ ಅವರಿಗೆ ದ.ಕ. ಆಟೋಮೊಬೈಲ್ ಆ್ಯಂಡ್ ಟಯರ್ ಡೀಲರ್ಸ್ ಸಂಘದ ವತಿಯಿಂದ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ನಗರದ ಪೊಂಪೈ ಚರ್ಚ್ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಂಘದ 33ನೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆರ್.ಆತ್ಮಾನಾಥನ್ 1982ರಿಂದ 1996ರವರೆಗೆ 14 ವರ್ಷಗಳ ಕಾಲ ಮಂಗಳೂರಿನಲ್ಲ್ಲಿ ಸೇವೆ ಸಲ್ಲಿಸಿದ್ದರು. ಈ ಅವಧಿಯಲ್ಲಿ ಹೊಸದಾಗಿ ರೂಪುಗೊಂಡ ಸಂಘಟನೆಗಾಗಿ ಸದಸ್ಯತ್ವವನ್ನು ಒಟ್ಟುಗೂಡಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದರು.

ಸಂಘದ ಉಪಾಧ್ಯಕ್ಷ ಕಸ್ತೂರಿ ಪ್ರಭಾಕರ್ ಪೈ, ಕಾರ್ಯದರ್ಶಿ ಕೆ.ವಿಲಾಸ್ ಕುಮಾರ್, ಖಜಾಂಚಿ ಮಾರೂರು ಶಶಿಧರ್ ಪೈ, ಜಂಟಿ ಕಾರ್ಯದರ್ಶಿ ಆರ್.ಪಿ.ಡಿಸೋಜ, ಜಂಟಿ ಖಜಾಂಚಿ ಲಕ್ಷ್ಮೀನಾರಾಯಣ ನಾಯಕ್ ಮತ್ತು ಪೋಷಕ ಕೆ.ಜಿ.ಶೆಣೈ ಸಮ್ಮುಖದಲ್ಲಿ ಪ್ರಶಸ್ತಿ ಪ್ರಧಾನ ಮಾಡಲಾಯಿತು.

ಇದೇ ವೇಳೆ ಸಂಘದ ಸದಸ್ಯರು ಅಥವಾ ಅವರ ಉದ್ಯೋಗಿಗಳ ಮಕ್ಕಳಾದ 22 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಎಸೆಸೆಲ್ಸಿ ಮತ್ತು ಪಿ.ಯು.ಸಿ ಪರೀಕ್ಷೆಗಳಲ್ಲಿ ಅವರ ಅಸಾಮಾನ್ಯ ಶೈಕ್ಷಣಿಕ ಸಾಧನೆಗಾಗಿ ಪ್ರಮಾಣಪತ್ರ ಮತ್ತು ನಗದು ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.

ವಿದ್ಯಾರ್ಥಿಗಳ ಪೈಕಿ ಸ್ವಚ್ಛ ಭಾರತ್ ಅಭಿಯಾನದ ಅಂಗವಾಗಿ ಬಿಂದೂ ಮತ್ತು ಬಿಂದಿಯಾ ಅವರಿಗೆ ತಮ್ಮ ತಾಯಿಯರೂಂದಿಗೆ ವಿಶೇಷವಾಗಿ ಗೌರವಿಸಲಾಯಿತು. ಅವರ ತಾಯಿಯರಾದ ಶೀಲಾ ಮತ್ತು ರೇವತಿ ಸಂಘದ ಸದಸ್ಯರ ಸ್ವಚ್ಛತಾ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News