ಕೊಲ್ಲೂರು ದೇವಾಲಯದ ನೌಕರನಿಗೆ ಮಹಿಳೆಯಿಂದ ಕಪಾಳ ಮೋಕ್ಷ
ಕೊಲ್ಲೂರು, ಸೆ.26: ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ನೌಕರ ರೊಬ್ಬರಿಗೆ ಮಹಿಳೆಯೊಬ್ಬರು ಕೆನ್ನೆಗೆ ಹೊಡೆದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಳೆದ 40 ವರ್ಷಗಳಿಂದ ದೇವಸ್ಥಾನದಲ್ಲಿ ಮುಜರಾಯಿ ಇಲಾಖೆಯ ಖಾಯಂ ದೇವಕಾರಿ ನೌಕರರಾಗಿದ್ದ ದೇವಯ್ಯ ಹೆಬ್ಬಾರ್(56) ಎಂಬವರು ಸೆ.24ರಂದು ರಾತ್ರಿ 9:15ಗಂಟೆಗೆ ದೇವಸ್ಥಾನದ ಒಳ ಪ್ರಾಕಾರದಲ್ಲಿ ದೇವರ ಸೇವೆಯ ಬಲಿ ಹಾಕುತ್ತಿದ್ದಾಗ ಐಶ್ವರ್ಯ ಎಂಬವರು ದೇವಯ್ಯ ಹೆಬ್ಬಾರ್ರನ್ನು ತಡೆದು ಅವರು ಧರಿಸಿದ್ದ ಶಾಲನ್ನು ಎಳೆದು ಕೈಯಿಂದ ಎಡ ಕೆನ್ನೆಗೆ ಹೊಡೆದು ದೇವರ ಪೂಜಾ ಕಾರ್ಯ, ಕರ್ತವ್ಯಕ್ಕೆ ಅಡ್ಡಿ ಉಂಟುಮಾಡಿದ್ದಾರೆ ಎಂದು ದೂರಲಾಗಿದೆ.
ದೇವಯ್ಯ ಹೆಬ್ಬಾರ್ ರಾತ್ರಿ 8 ಗಂಟೆಗೆ ದೇವರಿಗೆ ನೈವೇದ್ಯದ ಸಮಯ ಗರ್ಭಗುಡಿ ಒಳಾಂಗಣದಲ್ಲಿರುವ ಭಕ್ತಾಧಿಗಳನ್ನು ಹೊರಗಡೆ ಕಳುಹಿಸಿದ್ದು, ಈ ವೇಳೆ ಮಗುವಿನೊಂದಿಗೆ ಅಲ್ಲೇ ಇದ್ದ ಐಶ್ವರ್ಯರನ್ನು ಕೂಡ ಹೊರ ಹೋಗುವಂತೆ ತಿಳಿಸಿದ್ದರು. ಆಗ ಐಶ್ವರ್ಯ, ದೇವಯ್ಯರಿಗೆ ಬೆದರಿಕೆ ಹಾಕಿ ಹೋಗಿದ್ದರು. ಬಳಿಕ ಬಂದು ದೇವಯ್ಯರಿಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.