​ತಣ್ಣೀರುಬಾವಿ ಟ್ರೀಪಾರ್ಕ್‌ಗೆ 2 ಲಕ್ಷ ಮಂದಿ ಭೇಟಿ

Update: 2017-09-27 14:16 GMT

ಮಂಗಳೂರು, ಸೆ. 27: ಅರಣ್ಯ ಇಲಾಖೆಯು ಮಂಗಳೂರು ತಣ್ಣೀರುಬಾವಿ ಬೆಂಗರೆಯಲ್ಲಿ ನಿರ್ಮಿಸಿರುವ ಸಸ್ಯೋದ್ಯಾನ ಟ್ರೀಪಾರ್ಕ್‌ಗೆ ಕಳೆದ ಒಂದುವರೆ ವರ್ಷದಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ ಎಂದು ಮಂಗಳೂರು ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕರಿಕಲನ್ ವಿ. ತಿಳಿಸಿದ್ದಾರೆ.

ತಮ್ಮ ಕಚೇರಿಯಲ್ಲಿ ಸೋಮವಾರ ನಡೆದ ತಣ್ಣೀರುಬಾವಿ ಸಸ್ಯೋದ್ಯಾನ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

2016ರ ಏಪ್ರಿಲ್ನಿಂದ ಟ್ರೀಪಾರ್ಕ್‌ಗೆ ಸಾರ್ವಜನಿಕರ ಪ್ರವೇಶ ನೀಡಲಾಗುತ್ತಿದೆ. ಸ್ಥಳೀಯರು, ಹೊರರಾಜ್ಯದವರು, ವಿದೇಶಿಯರೂ ಸೇರಿದಂತೆ 2 ಲಕ್ಷಕ್ಕೂ ಅಧಿಕ ಮಂದಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಇದರಿಂದ ಟ್ರೀಪಾರ್ಕ್‌ಗೆ 6.40 ಲಕ್ಷ ರೂ. ಆದಾಯ ದೊರಕಿದೆ ಎಂದು ಡಾ.ಕರಿಕಲನ್ ಹೇಳಿದರು.

ಟ್ರೀಪಾರ್ಕ್‌ನಲ್ಲಿರುವ ವಿವಿಧ ಸಸ್ಯದ್ಯೋನ, ವಿರಾಮಧಾಮ, ಮಕ್ಕಳ ಆಟದ ಪ್ರದೇಶ, ಬೀಚ್, ವೀಕ್ಷಣಾ ತಾಣಗಳು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಹಲವಾರು ಸಿನಿಮಾಗಳ ಚಿತ್ರೀಕರಣವೂ ಇಲ್ಲಿ ನಡೆದಿದೆ. ಚಿಕ್ಕ-ಪುಟ್ಟ ಖಾಸಗಿ ಕಾರ್ಯಕ್ರಮ ನಡೆಸಲು ಶುಲ್ಕ ವಿಧಿಸಿ ಅವಕಾಶ ನೀಡಲಾಗುವುದು. ರಜಾದಿನಗಳಲ್ಲಿ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಈ ನಿಟ್ಟಿನಲ್ಲಿ ಟ್ರೀಪಾರ್ಕ್‌ನಲ್ಲಿ ಇನ್ನಷ್ಟು ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಡಾ. ಕರಿಕಲನ್ ತಿಳಿಸಿದರು.

ತಣ್ಣೀರುಬಾವಿ ಟ್ರೀಪಾರ್ಕನ್ನು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣವನ್ನಾಗಿ ರೂಪಿಸಲು ಸಾಕಷ್ಟು ಯೋಜನೆ ಹಾಕಿಕೊಳ್ಳಲಾಗಿದೆ. ಪಾರ್ಕಿನ ಪ್ರವೇಶದರವನ್ನು ಏರಿಸದೆ ಯಥಾಸ್ಥಿತಿಯಲ್ಲಿಡಲಾಗುವುದು. ವಿದ್ಯಾರ್ಥಿಗಳಿಗೆ, ಶಾಲಾ ಕಾಲೇಜುಗಳ ಶೈಕ್ಷಣಿಕ ಪ್ರವಾಸದಲ್ಲಿ ಆಗಮಿಸುವವರಿಗೆ ರಿಯಾಯಿತಿಯಲ್ಲಿ ಪ್ರವೇಶ ನೀಡಲಾಗುವುದು. ತುಳು ಹಾಗೂ ಪ್ರಾದೇಶಿಕ ಭಾಷೆ ಚಲನಚಿತ್ರಗಳಿಗೆ ಪ್ರತೀ ದಿನಕ್ಕೆ 5,000 ರೂ.ನಂತೆ ಶುಲ್ಕ ವಿಧಿಸಿ ಚಿತ್ರೀಕರಣಕ್ಕೆ ಅವಕಾಶ ನೀಡಲಾಗುವುದು ಎಂದು ಡಾ. ಕರಿಕಲನ್ ಹೇಳಿದರು.

ಸಸ್ಯೋದ್ಯಾನ ನಿರ್ವಹಣಾ ಸಮಿತಿಯ ಕಾರ್ಯದರ್ಶಿ ಮತ್ತು ಮಂಗಳೂರು ವಲಯ ಆರ್‌ಎಫ್‌ಒ ಶ್ರೀಧರ್ ಲೆಕ್ಕಪತ್ರಗಳನ್ನು ಮಂಡಿಸಿದರು.
ಸಮಿತಿಯ ಸದಸ್ಯರಾದ ವಾರ್ತಾಧಿಕಾರಿ ಖಾದರ್ ಶಾ, ಎಸಿಎಫ್ ಸತೀಶ್ ಕುಮಾರ್, ಮಹಾನಗರಪಾಲಿಕೆ ಜೆಇ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News