ಜಗದೀಶ್ ಕಾರಂತ ಬಂಧನ ವಿರೋಧಿಸಿ ಬಿಜೆಪಿ - ಸಂಘಪರಿವಾರದಿಂದ ಪ್ರತಿಭಟನೆ

Update: 2017-09-29 15:43 GMT

ಪುತ್ತೂರು, ಸೆ. 29: ಪುತ್ತೂರಿನಲ್ಲಿ ಕೋಮು ಪ್ರಚೋದನಾತ್ಮಕವಾಗಿ ಮಾತನಾಡಿದ ಜಗದೀಶ್ ಕಾರಂತ ಬಂಧನವನ್ನು ವಿರೋಧಿಸಿ ಪುತ್ತೂರಿನ ಬಸ್ ನಿಲ್ದಾಣದಲ್ಲಿ ಇಂದು ರಾತ್ರಿ ಬಿಜೆಪಿ ಮತ್ತು ಸಂಘಪರಿವಾರದಿಂದ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ರಾಜ್ಯ ಕಾರ್ಯದರ್ಶಿ ರಾಧಾ ಕೃಷ್ಣ ಅಡ್ಯಂತಾಯ, ಹಿಂದೂಗಳ ಪವಿತ್ರ ಗ್ರಂಥವಾದ ರಾಮಾಯಣ, ಮಹಾಭಾರತವನ್ನು ನಿಂದನೆ ಮಾಡಿದ ವೈದೇಹಿ, ಭಗವಾನ್ ಅಂತಹವರನ್ನು ಬಂಧಿಸುವ ತಾಕತ್ತಿಲ್ಲದ ಪೊಲೀಸರು ಹಿಂದೂಗಳ ಮತ್ತು ರಾಷ್ಟದ ಮೇಲೆ ಭರವಸೆ ಇಟ್ಟು ಮಾತನಾಡಿದ ಜಗದೀಶ್ ಕಾರಂತರನ್ನು ಬಂಧಿಸಿ ಹಿಂದೂಗಳ ಮೇಲೆ ದಮನ ಕಾರ್ಯ ಮುಂದುವರಿಸಿದ್ದಾರೆ. ಇವರ ಬಂಧನಕ್ಕೆ  ಹೆದರಿ ನಾವು ಹೇಡಿಗಳಂತೆ ಅಡಗಿ ಕೂರುವುದಿಲ್ಲ. ಜಾಗೃತ ಸಮಾಜ ನಿರ್ಮಾಣಕ್ಕೆ ಪ್ರತಿಬದ್ಧರಾಗಿದ್ದೇವೆ ಎಂದರು. ಕಾರಂತರನ್ನು ತಕ್ಷಣವೇ ಬಿಡುಗಡೆ ಮಾಡದಿದ್ದರೆ ರಾಜ್ಯದ್ಯಾಂತ ಪ್ರತಿಭಟನೆ ಮಾಡುವುದಾಗಿ ಅವರು ಎಚ್ಚರಿಸಿದರು.

ಬಜರಂಗದಳದ ಜಿಲ್ಲಾ ಗೋರಕ್ಷಕ್ ಪ್ರಮುಖ್ ಮುರಳಿ ಕೃಷ್ಣ ಹಸಂತಡ್ಕ ಮಾತನಾಡಿ, ಸಮಾಜದ್ರೋಹಿ ಮತ್ತು ನಂಬಿಕೆ ದ್ರೋಹಿ ಕೆಲಸದ ವಿರುದ್ಧ ಹೋರಾಟ ನಡೆಸುವ ಜಗದೀಶ್ ಕಾರಂತರ ಬಂಧಿಸುವ ಮೂಲಕ ಇಲಾಖೆ ಷಂಡತನ ಪ್ರದರ್ಶಿಸಿದೆ. ಓರ್ವ ಕಾರಂತರನ್ನು ಬಂಧಿಸಿದರೆ ಸಾವಿರಾರು ಕಾರ್ಯಕರ್ತರು ಜಗದೀಶ್ ಕಾರಂತರಂತೆ ಅನ್ಯಾಯದ ವಿರುದ್ಧ ಹೋರಾಡಲು ಸಿದ್ಧರಿದ್ದಾರೆ.  ಕಾರಂತರನ್ನು ರಾತ್ರಿಯೇ ಬಿಡುಗಡೆ ಮಾಡದಿದ್ದಾರೆ ಮುಂದೆ ನಡೆಯುವ ಅನಾಹುತಕ್ಕೆ ಸರಕಾರವೇ ಹೊಣೆ ಎಂದರು.

ಈ ಸಂದರ್ಭ ಬಿಜೆಪಿ ಮುಖಂಡರಾದ ಸತ್ಯಜಿತ್ ಸುರತ್ಕಲ್, ಜಿಲ್ಲಾಧ್ಯಕ್ಷ ಸಂಜಿವ ಮಟಂದೂರು, ಮಂಡಲ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಾಧ್ಯಕ್ಷ ಜೀವನ್ ದಜೈನ್, ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News