ಉಡುಪಿ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಛತಾ ಅಭಿಯಾನ
ಉಡುಪಿ, ಅ.2: ಗಾಂಧಿ ಜಯಂತಿ ಅಂಗವಾಗಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಕೊಂಕಣ ರೈಲ್ವೆಯು, ಉಡುಪಿ ರೈಲ್ವೆ ಯಾತ್ರಿಕರ ಸಂಘ, ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜು, ಭಾರತ್ ಸ್ಕೌಟ್ಸ್ ಮತ್ತು ಗೈಡ್ನ ರೇಂಜರ್ಸ್ ಮತ್ತು ರೋವರ್ಸ್ ಘಟಕ, ರಾಷ್ಟ್ರೀಯ ಸೇವಾ ಯೋಜನಾ ಘಟಕ ಇವರ ಸಹಕಾರದಲ್ಲಿ ನಿಲ್ದಾಣ ಪರಿಸರದಲ್ಲಿ ಸೋಮವಾರ ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.
ಕೊಂಕಣ್ ರೈಲ್ವೆಯ ಪ್ರಾಂತೀಯ ಸಂದೇಶಗಳು ಮತ್ತು ದೂರವಾಣಿ ಅಭಯಂತರ ಸಂತೋಷ್ ಶೀಟುಕರ್ರ ಸ್ವಚ್ಚತಾ ಪ್ರತಿಜ್ಞಾ ವಿಧಿಯನ್ನು ಭೋದಿಸಿ ಮಾತನಾಡಿ, ಗಾಂಧಿ ಜಯಂತಿಯಂದು ದೇಶದ ಪ್ರಧಾನಮಂತ್ರಿಗಳ ಮಹತ್ವಾಕಾಂಕ್ಷಿ ಯೋಜನೆಯಾದ ಸ್ವಚ್ಛತಾ ಅಭಿಯಾನಕ್ಕೆ ದೇಶದ ಸಮಸ್ತ ನಾಗರಿಕರು ಕೈಜೋಡಿಸಲು ಪ್ರೇರಣೆಯಾಗುವಂತೆ ವಿದ್ಯಾರ್ಥಿ ಸಮೂಹ, ಸಂಘ ಸಂಸ್ಥೆಗಳು ನಿರಂತರ ಅಭಿಯಾನಗಳನ್ನು ಆಯೋಜಿಸಬೇಕೆಂದರು.
ಉಡುಪಿ ರೈಲ್ವೆ ಯಾತ್ರಿಕರ ಸಂಘದ ಅಧ್ಯಕ್ಷ ಆರ್.ಎಲ್.ಡಯಾಸ್ ಮಾತನಾಡಿ, ಮಕ್ಕಳು ಚಾಕಲೇಟು, ಚಿಪ್ಸ್ ಮತ್ತಿತರ ತಿಂಡಿ ತಿನಿಸುಗಳನ್ನು ತಿಂದು ಅದರ ಲಕೋಟೆಗಳನ್ನು ಬೀದಿಗೆ ಎಸೆಯದೆ ಕಿಸೆಯಲಿಟ್ಟುಕೊಂಡು ನಂತರ ಸೂಕ್ತ ಸ್ಥಳದಲ್ಲಿ ವಿಲೇವಾರಿ ಮಾಡಿ ಹಿರಿಯರಿಗೆ ಮಾದರಿಯಾಗಬೇಕು ಎಂದು ಕಿವಿ ಮಾತು ಹೇಳಿದರು.
ರೈಲ್ವೆ ಯಾತ್ರಿಕರ ಸಂಘದ ಕಾರ್ಯದರ್ಶಿ ಮಂಜುನಾಥ ಮಣಿಪಾಲ, ನಿರ್ದೇಶಕರಾದ ಪ್ರಭಾಕರ್ ಆಚಾರ್ಯ, ಜೋನ್ ರೆಬೆಲ್ಲೊ, ಡೆಸಾ ರಾಬರ್ಟ್, ಸದಾನಂದ ಅಮೀನ್ , ಸತೀಶ್ ಕದಿಕೆ, ದಿನೇಶ್ ಅಮೀನ್, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಗಳಾದ ವಿದ್ಯಾ ಡಿ, ವಿದ್ಯಾ ಕೆ ಯು, ಕೊಂಕಣ್ ರೈಲ್ವೆಯ ಕಮರ್ಷಿಯಲ್ ಸೂಪರ್ ವೈಸರ್ಗಳಾದ ಸತೀಶ್ ಹೆಗ್ಡೆ, ರಮೇಶ್ ಶೆಟ್ಟಿ, ವಿಭಾಗ ಅಭಯಂತರ ಥಾಮಸ್, ಚಂದ್ರನ್, ಮೀಸಲು ಪೊಲೀಸ್ ಪಡೆಯ ನಿರೀಕ್ಷಕ ಶಿವರಾಂ ರಾಥೋಡ್, ಸಂತೋಷ್ ಜಿ., ಲೆಕ್ಕಪರಿಶೋಧಕ ಚಿಕ್ಕಯ್ಯ ದೇವಾಡಿಗ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.