​ದ.ಕ.ಜಿಲ್ಲೆಯ ವಿವಿಧೆಡೆ ಬ್ಯಾರಿ ಭಾಷಾ ದಿನಾಚರಣೆ

Update: 2017-10-03 12:17 GMT

ಮಂಗಳೂರು, ಅ.3: ಕರ್ನಾಟಕ ಸರಕಾರವು 2007ರ ಅ. 3ರಂದು ಬ್ಯಾರಿ ಸಾಹಿತ್ಯ ಅಕಾಡಮಿ ಕುರಿತು ಗಜೆಟ್ ಅಧಿಸೂಚನೆ ಹೊರಡಿಸಿದ ಹಿನ್ನಲೆಯಲ್ಲಿ ಮಂಗಳವಾರ ದ.ಕ. ಜಿಲ್ಲೆಯ ವಿವಿಧೆಡೆ ಬ್ಯಾರಿ ಭಾಷಾ ದಿನ ಆಚರಿಸಲಾಯಿತು. ಕರಪತ್ರ ಬಿಡುಗಡೆ, ಕವಿಗೋಷ್ಠಿ, ರಸಪ್ರಶ್ನೆ ಕಾರ್ಯಕ್ರಮವಲ್ಲದೆ ಸಿಹಿ ತಿಂಡಿ ಹಂಚಿ ಸಂಭ್ರಮಿಸಲಾಯಿತು.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ಅಕಾಡಮಿಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಗೇರು ಅಭಿವೃದ್ದಿ ನಿಗಮದ ಅಧ್ಯಕ್ಷ ಹಾಜಿ ಬಿ.ಎಚ್.ಖಾದರ್ ವಹಿಸಿದ್ದರು.

ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹ್‌ಮಾನ್ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ಒಂದು ಮನೆಯಲ್ಲಿ ಮಗುವಿನ ಜನನ ಆದಾಗ ಮನೆ ಮಂದಿ, ಕುಟುಂಬಸ್ಥರು ಹೇಗೆ ಸಂಭ್ರಮಿಸುತ್ತಾರೋ, ಹಾಗೇ ಬ್ಯಾರಿಗಳು ಈ ದಿನವನ್ನು ಸಂಭ್ರಮಿಸಬೇಕಿದೆ. ರಾಜ್ಯ ಸರಕಾರ ಅಕಾಡಮಿಯನ್ನು ನೀಡುವ ಮೂಲಕ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿದ ಈ ದಿನವನ್ನು ಮರೆಯಲು ಸಾಧ್ಯವಿಲ್ಲ. ಬ್ಯಾರಿಗಳು ಮನೆ ಮನೆಗಳಲ್ಲಿ ಮಾತನಾಡಿದರೆ ಮಾತ್ರ ಭಾಷೆ ಉಳಿದೀತು,  ಹಾಗಾಗಿ ಸರ್ವ ಬ್ಯಾರಿಗಳು ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸಕ್ರಿಯರಾಗಬೇಕಿದೆ ಎಂದರು.

ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಸಂಶೋಧಕ ಪ್ರೊ.ಬಿ.ಎಂ. ಇಚ್ಲಂಗೋಡು, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ ಶುಭ ಹಾರೈಸಿದರು.

ಅಕಾಡಮಿಯ ಮಾಜಿ ಸದಸ್ಯರಾದ ಶರೀಫ್ ನಿರ್ಮುಂಜೆ ಸ್ವಾಗತಿಸಿದರು. ಯೂಸುಫ್ ವಕ್ತಾರ್ ವಂದಿಸಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.
 

ಬ್ಯಾರಿ ಕಲಾರಂಗ ಮಂಗಳೂರು

ಮಂಗಳೂರಿನ ಬ್ಯಾರಿ ಕಲಾರಂಗದ ವತಿಯಿಂದ ದ.ಕ.ಜಿಲ್ಲಾಧಿಕಾ ರಿ ಕಚೇರಿಯ ಮುಂದೆ ನಡೆದ ಕಾರ್ಯಕ್ರಮದಲ್ಲಿ ‘ಬ್ಯಾರಿ ಭಾಷಾ ಬಲರ್ಮೆರೊ ತೇರ್’ಗೆ ಚಾಲನೆ ನೀಡಲಾಯಿತು.

ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಬ್ಯಾರಿ ಭಾಷೆಯ ಅಭಿವೃದ್ಧಿಗೆ ಸಂಬಂಧಿಸಿ ಮಾಹಿತಿಯುಳ್ಳ ಕರಪತ್ರವನ್ನು ಬಿಡುಗಡೆ ಗೊಳಿಸಿದರು. ಬಳಿಕ ಮಾತನಾಡಿದ ಅವರು ಮಾತೃಭಾಷೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಸಾಂಸ್ಕ್ಕೃತಿಕ ರಂಗ ಶ್ರೀಮಂತವಾದರೆ ಮಾತ್ರ ಭಾಷೆ ಕೂಡ ಶ್ರೀಮಂತವಾದೀತು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಯರ್ ಕವಿತಾ ಸನಿಲ್ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯ ಮೇಲೆ ಅಭಿಮಾನ ಪಟ್ಟರೆ ಮಾತ್ರ ಭಾಷೆ ಬೆಳೆದೀತು. ಹಾಗಾಗಿ ಭಾಷೆಯ ಅವನತಿ ಆಗದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದರು.

ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಮಾಜಿ ಮೇಯರ್‌ಗಳಾದ ಕೆ. ಅಶ್ರಫ್, ಶಶಿಧರ ಹೆಗ್ಡೆ, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಎಂ. ಅಸ್ಲಂ, ಮುಸ್ಲಿಂ ಲೇಖಕರ ಸಂಘದ ಅಧ್ಯಕ್ಷ ಉಮರ್ ಯು.ಎಚ್., ಅಖಿಲ ಭಾರತ ಬ್ಯಾರಿ ಪರಿಷತ್ ಉಪಾಧ್ಯಕ್ಷ ಹಮೀದ್ ಕುದ್ರೋಳಿ, ದೇರಳಕಟ್ಟೆಯ ‘ಮೇಲ್ತೆನೆ’ಯ ಅಧ್ಯಕ್ಷ ಆಲಿಕುಂಞಿ ಪಾರೆ, ಬ್ಯಾರಿ ಬ್ರಿಗೇಡ್‌ನ ಅಧ್ಯಕ್ಷ ಅನ್ವರ್ ರೀಕೊ, ನಿಲಾವು ಕಲಾವೇದಿಕೆಯ ಅಧ್ಯಕ್ಷ ಮುಹಮ್ಮದ್ ಫೈಝ್, ಉಪಸ್ಥಿತರಿದ್ದರು.

ವಿವಿಧ ಸಂಘಟನೆ ಹಾಗೂ ಸಾಮಾಜಿಕ ಕಾರ್ಯಕರ್ತರಾದ ಹಮೀದ್ ಮಡಿಕೇರಿ, ಎನ್.ಎಸ್.ಕರೀಂ, ಯು.ಎ.ಖಾಸಿಂ ಉಳ್ಳಾಲ, ಹೈದರ್ ಪರ್ತಿಪ್ಪಾಡಿ, ಮುಹಮ್ಮದ್ ಮುಕ್ಕಚೇರಿ, ಸೇವಾದಳದ ಎಚ್. ಅಶ್ರಫ್, ರಿಯಾಝ್ ಹರೇಕಳ, ಸಿದ್ದೀಕ್ ತಲಪಾಡಿ, ಬಾವಾ ಪದರಂಗಿ, ಝಾಕಿರ ಹುಸೈನ್ ಮತ್ತಿತರರು ಪಾಲ್ಗೊಂಡಿದ್ದರು.

ಬ್ಯಾರಿ ಕಲಾರಂಗದ ಅಧ್ಯಕ್ಷ ಅಬ್ದುಲ್ ಅಝೀಝ್ ಬೈಕಂಪಾಡಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಚಾಲಕ ಹುಸೈನ್ ಕಾಟಿಪಳ್ಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯು.ಎಚ್.ಖಾಲಿದ್ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

ಬ್ಯಾರಿ ಭಾಷಾಭಿಮಾನಿಗಳ ಬಳಗ, ಮಂಗಳೂರು

ಬ್ಯಾರಿ ಭಾಷಾಭಿಮಾನಿಗಳ ಬಳಗ ಮಂಗಳೂರು ಇದರ ವತಿಯಿಂದ ಮಂಗಳೂರಿನ ಖಾಸಗಿ ಹೊಟೇಲ್‌ನಲ್ಲಿ ಬಳಗದ ಸಂಚಾಲಕ ಜೆ.ಹುಸೈನ್ ಅವರ ಅಧ್ಯಕ್ಷತೆಯಲ್ಲಿ ಬ್ಯಾರಿ ಭಾಷಾ ದಿನ ಆಚರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ.ಮುಹಮ್ಮದ್ ಅಲಿ 20 ವರ್ಷದ ಹಿಂದೆ ಬ್ಯಾರಿ ಚಳವಳಿ ಆರಂಭಿಸಿ ದಾಗ ಕೆಲವು ಮಂದಿ ಬ್ಯಾರಿ ಭಾಷೆ ಅಳಿವಿನಂಚಿನಲ್ಲಿರುವ ಭಾಷೆ, ಇದಕ್ಕೆ ಜೀವ ತುಂಬುವ ಅಗತ್ಯವಿಲ್ಲ ಎಂದಿದ್ದರು. ಆದರೆ ಸತತ ಹೋರಾಟದ ಫಲವಾಗಿ ಸರಕಾರ ಅಕಾಡಮಿಯನ್ನು ಅಸ್ತಿತ್ವಕ್ಕೆ ತಂದಿದೆ. ಆ ಮೂಲಕ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿದೆ. ಹಾಗಾಗಿ ಬ್ಯಾರಿ ಅಳಿವಿನಂಚಿನಲ್ಲಿರುವ ಭಾಷೆ ಅಲ್ಲ, ಜೀವಂತ ಭಾಷೆ ಎಂಬುದಕ್ಕೆ ಇಂದು ಅಲ್ಲಲ್ಲಿ ನಡೆಯುವ ಕಾರ್ಯಕ್ರಮಗಳೇ ಸಾಕ್ಷಿ ಎಂದರು.

ಬ್ಯಾರಿ ಅಕಾಡಮಿಯ ನಿಕಟಪೂರ್ವ ಅಧ್ಯಕ್ಷ ಬಿ.ಎ.ಮುಹಮ್ಮದ್ ಹನೀಫ್, ಅಖಿಲ ಭಾರತ ಬ್ಯಾರಿ ಪರಿಷತ್‌ನ ಗೌರವಾಧ್ಯಕ್ಷ ಅಬ್ದುಲ್ ಮಜೀದ್‌ಸೂರಲ್ಪಾಡಿ, ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಶೀರ್ ಬೈಕಂಪಾಡಿ, ಕರ್ನಾಟಕ ಮುಸ್ಲಿಂ ಜಮಾಅತ್ ಕೌನ್ಸಿಲ್‌ನ ಜಿಲ್ಲಾಧ್ಯಕ್ಷ ಎ.ಎ.ಹೈದರ್ ಪರ್ತಿಪ್ಪಾಡಿ, ಕೋಟೆಕಾರು ಪಟ್ಟಣ ಪಂಚಾಯತ್‌ನ ಸದಸ್ಯ ಹಮೀದ್ ಮಾಡೂರು, ಮಂಗಳೂರು ತಾಪಂ ಮಾಜಿ ಸದಸ್ಯ ಎನ್.ಇ.ಮುಹಮ್ಮದ್ ಮಲ್ಲೂರು ಶುಭ ಹಾರೈಸಿದರು.

ಅಕಾಡಮಿಯ ಮಾಜಿ ಸದಸ್ಯ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾದ ಬ್ಯಾರಿ ರಸಪ್ರಶ್ನೆ ಸ್ಪರ್ಧೆಯಲ್ಲಿ ಮರಿಯಮ್ ಇಸ್ಮಾಯೀಲ್ ಪ್ರಥಮ ಮತ್ತು ಶರೀಫ್ ನಿರ್ಮುಂಜೆ ದ್ವಿತೀಯ ಬಹುಮಾನ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News