ಮರಳು ಸಾಗಾಟ ಟೆಂಪೊ ಢಿಕ್ಕಿ: ವಿದ್ಯಾರ್ಥಿ ಮೃತ್ಯು
ಬ್ರಹ್ಮಾವರ, ಅ.3: ಮರಳು ಸಾಗಿಸುವ ಟೆಂಪೊ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ವಿದ್ಯಾರ್ಥಿಯೊಬ್ಬ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬ್ರಹ್ಮಾವರ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬೆಳಗ್ಗೆ 9:45ರ ಸುಮಾರಿಗೆ ನಡೆದಿದೆ.
ಬಾರಕೂರು ಚೌಳಿಕೆರೆ ನಿವಾಸಿ ಕೃಷ್ಣ ಪೂಜಾರಿ ಹಾಗೂ ಸುಜಾತ ದಂಪತಿಯ ಪುತ್ರ ಅನೀಷ್(15) ಮೃತ ವಿದ್ಯಾರ್ಥಿ. ಎಸ್ಎಂಎಸ್ ಆಂಗ್ಲ ಮಾಧ್ಯಮ ಶಾಲೆಯ 9ನೆ ತರಗತಿಯ ವಿದ್ಯಾರ್ಥಿಯಾಗಿರುವ ಅನೀಷ್ ಶಾಲೆಗೆ ರಜೆ ಇದ್ದುದರಿಂದ ಶಾಲೆ ಸಮೀಪ ಇರುವ ಟ್ಯೂಶನ್ ಕ್ಲಾಸ್ಗೆ ಬಂದಿದ್ದರು.
ಬಸ್ಸಿನಿಂದ ಇಳಿದು ಶಾಲೆಯ ಕಡೆಗೆ ರಸ್ತೆ ದಾಟಲು ನಿಂತಿದ್ದ ಅನೀಷ್ಗೆ ಬ್ರಹ್ಮಾವರ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಮರಳು ಸಾಗಾಟದ 407 ಗೂಡ್ಸ್ ಟೆಂಪೊ ಢಿಕ್ಕಿ ಹೊಡೆಯಿತು. ಇದರ ಪರಿಣಾಮ ರಸ್ತೆಗೆ ಬಿದ್ದ ಅನೀಷ್ನನ್ನು ಟೆಂಪೊ ಸ್ವಲ್ಪ ದೂರ ಎಳೆದು ಕೊಂಡು ಹೋಗಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ಅಪಘಾತಕ್ಕೆ ಕಾರಣರಾಗಿರುವ ಟೆಂಪೊ ಚಾಲಕ ಕೊಪ್ಪಳದ ಮುತ್ತಪ್ಪ ಎಂಬಾತನನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಮೃತ ಅನೀಷ್, ಕೃಷ್ಣ ಪೂಜಾರಿಯ ಏಕೈಕ ಪುತ್ರ. ಕೃಷ್ಣ ಪೂಜಾರಿ ಕಾರು ಚಾಲಕರಾಗಿ ದುಡಿಯುತ್ತಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.