ಕಾಸರಗೋಡು: ಜಿಲ್ಲೆಯಾದ್ಯಂತ ಹೋಟೆಲ್ ಬಂದ್
ಕಾಸರಗೋಡು, ಅ. 9: ಜಿಎಸ್ ಟಿ ಗೊಂದಲ ಪರಿಹರಿಸಬೇಕು, ಹೋಟೆಲ್ ಗಳ ವಿರುದ್ಧ ಅಪಪ್ರಚಾರಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಹೋಟೆಲ್ ಮಾಲಕರು ಇಂದು ಕಾಸರಗೋಡು ಜಿಲ್ಲೆಯಾದ್ಯಂತ ಹೋಟೆಲ್ ಬಂದ್ ನಡೆಸಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಧರಣಿ ನಡೆಸಿದರು.
ಆರು ಶೇಕಡಾ ಇದ್ದ ತೆರಿಗೆ ಪ್ರಮಾಣ ಜಿ ಎಸ್ ಟಿ ಜಾರಿಗೆ ಬಂದ ಬಳಿಕ 18 ಶೇಕಡಾ ವಾಗಿ ಏರಿಕೆಯಾಗಿದ್ದು ಇದನ್ನು ಪ್ರತಿಭಟಿಸಿ ಪ್ರತಿಭಟನೆ ನಡೆಯಿತು. ಧರಣಿಯನ್ನು ಶಾಸಕ ಎನ್. ಎ ನೆಲ್ಲಿಕುನ್ನು ಉದ್ಘಾಟಿಸಿದರು. ಸಂಘಟನೆಯ ರಾಜ್ಯ ಅಧ್ಯಕ್ಷ ಮೊಯ್ದೀನ್ ಕುಟ್ಟಿ ಹಾಜಿ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾಧ್ಯಕ್ಷ ಪಿ.ಸಿ. ಬಾವ, ಜಿಲ್ಲಾ ಕಾರ್ಯದರ್ಶಿ ನಾರಾಯಣ ಪೂಜಾರಿ, ರಾಜ್ಯ ಕೋಶಾಧಿಕಾರಿ ಪಿ.ಸಿ. ಪೊದುವಾಳ್, ಜಿ.ಕೆ.ಪ್ರಕಾಶ್, ಮುಹಮ್ಮದ್.ಕೆ, ಮುಹಮ್ಮದ್ ಸುಹೈಲ್, ಶ್ರೀನಿವಾಸ, ಕೆ.ಎಸ್. ಮಲ್ಯ, ಕೆ. ಸುಗತನ್, ಕೆ.ಎಚ್. ಅಬ್ದುಲ್ಲ, ಅಬ್ದುಲ್ಲ ತಾಜ್, ಮುಹಮ್ಮದ್ ಗಜಾಲಿ ಮಾತನಾಡಿದರು. ಇದಕ್ಕೆ ವಿದ್ಯಾನಗರ ಸರಕಾರಿ ಕಾಲೇಜು ಪರಿಸರದಿಂದ ಜಾಥಾ ನಡೆಯಿತು.
ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಹೋಟೆಲ್ ಗಳು ಇಂದು ಬಂದ್ ಆಗಿದ್ದವು.