ಬಂಟ್ವಾಳ: ಕುಡಿಯುವ ನೀರಿನ ಯೋಜನೆಯ ಕಾಮಗಾರಿ ಪರಿಶೀಲನೆ
ಬಂಟ್ವಾಳ, ಅ. 9: ಪುರಸಭಾ ವ್ಯಾಪ್ತಿಯ ನೇತ್ರಾವತಿ ನದಿಯನ್ನು ಮೂಲವಾಗಿರಿಸಿಕೊಂಡು ಯು.ಐ.ಡಿ.ಎಸ್.ಎಸ್.ಎಂ.ಟಿ ಯೋಜನೆಯಡಿ 57.79 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಕುಡಿಯುವ ನೀರು ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ಅವರು ಪುರಸಭಾ ವ್ಯಾಪ್ತಿಯ ಸಮಗ್ರ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ಸೋಮವಾರ ಸಂಜೆ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂದಿನ 30ವರ್ಷಗಳವರೆಗಿನ ಜನಸಂಖೆಯನ್ನು ಆಧರಿಸಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದ್ದು, ದಿನವೊಂದಕ್ಕೆ ಒಟ್ಟು 42 ಲಕ್ಷ ಲೀಟರ್ ಕುಡಿಯುವ ನೀರು ಸಂಗ್ರಹಿಸಲಾಗುತ್ತದೆ. ನೇತ್ರಾವತಿ ನದಿ ತೀರದಲ್ಲಿ ಇಂಟೆಕ್ ವೆಲ್, ಜ್ಯಾಕ್ವೆಲ್, ಕನೆಕ್ಟಿಂಗ್ ಪೈಪ್ಲೈನ್ ಅಳವಡಿಸಲಾಗಿದ್ದು, ಜಕ್ರಿಬೆಟ್ಟುವಿನಲ್ಲಿ ಜಲಶುದ್ದೀಕರಣ ಘಟಕ ಮತ್ತು ರೇಚಕ ಸ್ಥಾವರ ನಿರ್ಮಿಸಲಾಗಿದೆ. ಕಾಮಾಜೆ, ಕುರ್ಸುಗುಡ್ಡೆ, ಮೈರಾನ್ಪಾದೆ, ಉಪ್ಪುಗುಡ್ಡೆ, ಶಾಂತಿಗುಡ್ಡೆ, ಲೊರಟೆಪದವು, ಗೂಡಿನಬಳಿ ಸಹಿತ ಒಟ್ಟು 7 ಕಡೆಗಳಲ್ಲಿ ನೀರಿನ ಟ್ಯಾಂಕ್ಅನ್ನು ನಿರ್ಮಿಸಲಾಗಿದೆ ಎಂದು ವಿವರಿಸಿದ ಅವರು, ಈಗಾಗಲೇ 95 ಕಿ.ಮೀ. ಪೈಪ್ಲೈನ್ ಅಳವಡಿಸಲಾಗುತ್ತಿದ್ದು, ಈ ಪೈಕಿ 55 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದೆ. ಮಂದಕ್ಕೆ ಹೆಚ್ಚುವರಿಯಾಗಿ ಪೈಪ್ಲೈನ್ ಕಾಮಗಾರಿ ವಿಸ್ತರಿ ಸುವ ನಿಟ್ಟಿನಲ್ಲಿ ಸುಮಾರು 13 ಲಕ್ಷ ಅನುದಾನ ಕೋರಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂರ್ಭದಲ್ಲಿ ಪುರಸಭಾ ಅಧ್ಯಕ್ಷ ಪಿ.ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮುಹಮ್ಮದ್ ನಂದರಬೆಟ್ಟು, ಬುಡಾ ಅಧ್ಯಕ್ಷ ಸದಾಶಿವ ಬಂಗೇರ, ರಾಜ್ಯ ಮಾಲಿನ್ಯ ನಿಯಂತ್ರನ ಮಂಡಳಿಯ ಸದಸ್ಯ ಪಿಯೂಸ್ ಎಲ್.ರೋಡ್ರಿಗಸ್, ಪುರಸಭಾ ಸದಸ್ಯರಾದ ಪ್ರವೀಣ್ ಬಿ. ಗಂಗಾಧರ ಪೂಜಾರಿ, ಜಗದೀಶ್ ಕುಂದರ್, ವಾಸುಪೂಜಾರಿ, ಶರೀಫ್ ಶಾಂತಿಯಂಗಡಿ, ವಸಂತಿ, ಚಂಚಲಾಕ್ಷಿ, ಪ್ರಭಾ ಆರ್. ಸಾಲಿಯಾನ್, ಮುಖ್ಯಾಧಿಕಾರಿ ರೇಖಾ ಜೆ. ಶೆಟ್ಟಿ, ಇಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಜಿಪಂ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಪದ್ಮಶೇಖರ್ ಜೈನ್, ಎಂ.ಸ್. ಮುಹಮ್ಮದ್, ಗೇರು ನಿಗಮ ನಿಗಮದ ಅಧ್ಯಕ್ಷ ಬಿ.ಎಚ್. ಖಾದರ್, ಅಕ್ರಮ ಸಕ್ರಮ ಸಮಿತಿಯ ಅಧ್ಯಕ್ಷ ಮಾಯಿಲಪ್ಪ ಸಾಲಿಯಾನ್, ಕರ್ನಾಟಕ ನಗರ ನೀರು ಸರಬ ರಾಜು ಮತ್ತು ಜಲಮಂಡಳಿಯ ಅಧಿಕಾರಿಗಳಾದ ಮಹದೇವಯ್ಯ, ಲಿಂಗರಾಜು, ಶೋಭಾಲಕ್ಷ್ಮೀ, ಮೆಸ್ಕಾಂ ಸಲಹಾ ಸಮಿತಿಯ ಸದಸ್ಯ ವೆಂಕಪ್ಪ ಪೂಜಾರಿ ಮತ್ತಿತರರು ಇದ್ದರು.