ಬಜಾಲ್ ಹಲ್ಲೆ ಪ್ರಕರಣ: 9 ಮಂದಿ ಆರೋಪಿಗಳ ಬಂಧನ
ಮಂಗಳೂರು, ಅ. 9: ಬಜಾಲ್ ಪಕ್ಕಲಡ್ಕದಲ್ಲಿ ರವಿವಾರ ಇಜಾಝ್ (25) ಮತ್ತು ಅಫ್ರಿದಿ (22) ಎಂಬವರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ 9 ಮಂದಿ ಆರೋಪಿಗಳನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಶಮಿತ್ (22), ನಿತಿನ್ ಕುಮಾರ್ (27), ಸ್ಟೀವನ್ (19), ರಾಕೇಶ್ (23), ಮಿಥೇಶ್ (20), ಸುಮಂತ್ (21), ಪುನೀತ್ ಪೂಜಾರಿ (21), ಆಶಿಕ್ (21) ಮತ್ತು ಅಣ್ಣು ಯಾನೆ ಪ್ರಸಾದ್ (30) ಎಂದು ಗುರುತಿಸಲಾಗಿದೆ.
ಆರೋಪಿಗಳೆಲ್ಲರೂ ಬಜಾಲ್ ಕುಡ್ತಡ್ಕ ಪರಿಸರದ ನಿವಾಸಿಗಳು. ರವಿವಾರ ಸಂಜೆ 5 ಗಂಟೆಗೆ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿರುವುದನ್ನು ಇಜಾಝ್ ಮತ್ತು ಅಫ್ರಿದಿ ಕುಳಿತು ವೀಕ್ಷಿಸುತ್ತಿದ್ದರು. ಅಲ್ಲಿಗೆ ಬಂದ ನಿತಿನ್ ಕುಮಾರ್, ರಾಕೇಶ್, ಮಿಥೇಶ್, ಸ್ಟೀವನ್ ಮತ್ತಿತರರನ್ನು ಒಳಗೊಂಡ ತಂಡ ಅಫ್ರಿದಿಯ ಬಳಿ ದನ ಕಳವು ಪ್ರಕರಣಕ್ಕೆ ಸಂಬಂಧಿಸಿ ಪ್ರಶ್ನಿಸಿದ್ದಾರೆನ್ನಲಾಗಿದೆ. ಈ ಸಂದರ್ಭ ಮಾತಿಗೆ ಮಾತು ಬೆಳೆದು ತಂಡ ಇಜಾಝ್ ಮತ್ತು ಅಫ್ರಿದಿ ಮೇಲೆ ಹಲ್ಲೆ ನಡೆಸಿತ್ತು. ಬಳಿಕ ಅಫ್ರಿದಿ ಮನೆಯ ಕಿಟಕಿ ಗಾಜನ್ನು ತಂಡ ಪುಡಿ ಮಾಡಿತ್ತು. ಪಾರ್ಕ್ ಮಾಡಲಾಗಿದ್ದ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಗೊಳಿಸಿ ದಾಂಧಲೆ ನಡೆಸಿತ್ತು ಎಂದು ದೂರಲಾಗಿತ್ತು.