ಅಕ್ರಮ ಡಿ ನೋಟಿಫಿಕೇಶನ್ ಆರೋಪದಲ್ಲಿ ಹುರುಳಿಲ್ಲ: ವೀರಪ್ಪ ಮೊಯ್ಲಿ
Update: 2017-10-11 08:42 GMT
ಮಂಗಳೂರು, ಅ.11: ಮುಖ್ಯಮಂತ್ರಿ ಸಿದ್ದರಾಮಯ್ಯ ಅಕ್ರಮ ಡಿ ನೋಟಿಫಿಕೇಶನ್ ಮಾಡಿದ್ದಾರೆ ಎಂಬ ಬಿಜೆಪಿಯ ಆರೋಪದಲ್ಲಿ ಹುರುಳಿಲ್ಲ. ಇದು ಆಧಾರ ರಹಿತ ಆರೋಪ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.
ನಗರದ ವಿಶ್ವವಿದ್ಯಾನಿಲಯ ಕಾಲೇಜಿಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.ಸಿದ್ದರಾಮಯ್ಯವರ ಅಧಿಕಾರದ ಅವಧಿಯಲ್ಲಿ ಯಾವ ಅಕ್ರಮ ಡಿ ನೋಟಿಫಿಕೇಶನ್ ನಡೆದಿಲ್ಲ. ಬಿಜೆಪಿಯವರಿಗೆ ಸರಕಾರದ ವಿರುದ್ಧ ಟೀಕೆ ಮಾಡಲು ಬಂಡವಾಳವಿಲ್ಲದ ಕಾರಣ ಆಧಾರ ರಹಿತ, ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಆರೋಪ ಮಾಡುತ್ತಿದ್ದಾರೆ. ಇದರಿಂದ ಸರಕಾರಕ್ಕೆ ಏನು ಧಕ್ಕೆಯಾಗದು. ಮುಂದಿನ ಚುನಾವಣೆಯಲ್ಲೂ ಸಿದ್ದರಾಮಯ್ಯರ ನೇತೃತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.