ಬಂಟಕಲ್: ಉದ್ಯಮ ಶೀಲತಾ ಕಾರ್ಯಾಗಾರ
ಶಿರ್ವ, ಅ.11: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಅಹ್ಮದಾಬಾದಿನ ಉದ್ಯಮಶೀಲತಾ ಅಭಿವೃದ್ಧಿ ಸಂಸ್ಥೆ ಮತ್ತು ಬಂಟ ಕಲ್ ಶ್ರೀಮಧ್ವ ವಾದಿರಾಜ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಮ್ಯಾನೇಜ್ಮೆಂಟ್ನ ಉದ್ಯಮಶೀಲತಾ ಅಭಿವೃದ್ಧಿ ಘಟಕದ ವತಿಯಿಂದ ಮೂರು ದಿನಗಳ ಉದ್ಯಮಶೀಲತಾ ತಿಳುವಳಿಕೆ ಶಿಬಿರವನ್ನು ಇತ್ತೀಚೆಗೆ ಕಾಲೇಜಿನಲ್ಲಿ ಏರ್ಪಡಿಸಲಾಗಿತ್ತು.
ಶಿಬಿರವನ್ನು ಉದ್ಘಾಟಿಸಿದ ಸದಾನಂದ ನಾವಡ ಮಾತನಾಡಿ, ಬದ್ಧತೆ, ಶಿಸ್ತು ಮತ್ತು ಕಠಿಣ ಪರಿಶ್ರಮಗಳು ಯಶಸ್ವಿ ಉದ್ಯಮಿಯಾಗಲು ಅತ್ಯಂತ ಅಗತ್ಯ. ಯಾವುದೇ ಉದ್ಯಮದ ಯಶಸ್ಸಿಗೆ ನಾವೀನ್ಯತೆಯೊಂದೇ ಕೀಲಿಕೈ ಎಂದು ಅಭಿಪ್ರಾಯಪಟ್ಟರು.
ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆ ಕಾರ್ಯದರ್ಶಿ ರತ್ನಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಉದ್ಯೋಗದಾತರಾಗಬೇಕಲ್ಲದೆ ಉದ್ಯೋಗವನ್ನು ಅರಸುವವ ರಾಗಬಾರದು ಎಂದು ಹೇಳಿದರು.
ಪ್ರಾಂಶುಪಾಲ ಪ್ರೊ.ತಿರುಮಲೇಶ್ವರ ಭಟ್ ಮಾತನಾಡಿದರು. ಕಾರ್ಯ ಕ್ರಮದ ಸಂಯೋಜಕಿ ಅರುಣ್ ಉಪಾಧ್ಯಾಯ ಸ್ವಾಗತಿಸಿದರು. ದೇವಿಪ್ರಕಾಶ್ ವಂದಿಸಿದರು. ಸೌಮ್ಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.