ಪರ್ಲಡ್ಕ ಮನೆ ಕಳವು ಪ್ರಕರಣ: ಆರೋಪಿಗಳ ಬಂಧನ; ಸೊತ್ತು ವಶ

Update: 2017-10-11 16:52 GMT

ಪುತ್ತೂರು, ಅ. 11: ಪುತ್ತೂರು ನಗರದ ಹೊರವಲಯದ ಪರ್ಲಡ್ಕ ಬೈಪಾಸ್ ರಸ್ತೆಯಲ್ಲಿನ ಮನೆಯೊಂದರಿಂದ ಕಳೆದ ಮೂರು ತಿಂಗಳ ಹಿಂದೆ  ಮನೆ ಕಳವು ಪ್ರಕರಣವನ್ನು ಪತ್ತೆಹಚ್ಚಿದ ಪುತ್ತೂರು ನಗರ ಪೊಲೀಸರು ಮೂವರು ಆರೋಪಿಗಳಿಂದ 8 ಲಕ್ಷ ರೂ.  ಮೌಲ್ಯದ 245 ಗ್ರಾಂ ಚಿನ್ನಾಭರಣ ಮತ್ತು ರೂ.60 ಸಾವಿರ ಮೌಲ್ಯದ ಕೈಗಡಿಯಾರವನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಮಹಮ್ಮದ್ ಆಶೀಕ್(26) ಈ ಹಿಂದೆಯೇ ಬಂಧನ ಕ್ಕೊಳಗಾಗಿದ್ದು, ಇದೀಗ ಪೊಲೀಸರು ಮಂಜೇಶ್ವರ ಉಪ್ಪಳದ ಹಿರೋಗಲ್ಲಿ ನಿವಾಸಿ   ಜಂಷೀದ್ (22ವ) ಮತ್ತು ಬಾಯಾರುಪದವು ನಿವಾಸಿ  ಇಬ್ರಾಹಿಂ ಮುಜಾಮಿನ್ (21ವ) ಎಂಬಾತನ್ನು ಕಸ್ಟಡಿಗೆ ತೆಗೆದುಕೊಂಡು ಕಳವುಗೈದ ಸ್ವತ್ತುಗಳ ಸ್ವಾಧೀನ ಪಡಿಸಿಕೊಂಡಿದ್ದಾರೆ.

ಪರ್ಲಡ್ಕ ಬೈಪಾಸ್ ನಿವಾಸಿ ಉಮ್ಮರ್ ಫಾರೂಕ್ ಅವರು ವಿದೇಶದಲ್ಲಿದ್ದು, ಕಳೆದ 2017ರ ಜೂನ್ 26ರಂದು ಅವರ ಪರ್ಲಡ್ಕ ಬೈಪಾಸ್‌ನಲ್ಲಿರುವ ಮನೆಯಿಂದ ಚಿನ್ನಾಭರಣ ಕಳವಾಗಿತ್ತು. ಮನೆಯಲ್ಲಿ ವಾಸ್ತವ್ಯವಿದ್ದ ಅವರ ಪತ್ನಿ ಅಫ್ರೀನಾ ಅವರು ಅಂದು ಮಧ್ಯಾಹ್ನ ರಂಝಾನ್ ಹಬ್ಬದ ಹಿನ್ನಲೆಯಲ್ಲಿ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದರು. ಸಂಜೆ ಅವರು ಮನೆಗೆ ಹಿಂತಿರುಗಿ ಬರುವ ವೇಳೆಗೆ ಮನೆ ಕಳವು ನಡೆದಿತ್ತು. ಮನೆಯ ಹಿಂಭಾಗದ ಬಾಗಿಲು ಒಡೆದು ಒಳ ಪ್ರವೇಶಿಸಿದ ಕಳ್ಳರು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿದ್ದರು. ಘಟನೆಯ ಕುರಿತು ಅಫ್ರೀನಾ ಅವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಕಳೆದ ಸೆ.24ರಂದು ಕಾರ್ಯಾಚರಣೆ ನಡೆಸಿ ಪ್ರಕರಣದ ಪ್ರಮುಖ ಆರೋಪಿಯಾದ ಸುಳ್ಯ ತಾಲ್ಲೂಕಿನ ಜಾಲ್ಸೂರು ಗ್ರಾಮದ ಸೋಣಂಗೇರಿ ನಿವಾಸಿ ಮಹಮ್ಮದ್ ಆಶೀಕ್(26) ಎಂಬಾತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಪ್ರಕರಣದಲ್ಲಿ ಬಾಯಾರುಪದವಿನ ಇಬ್ರಾಹಿಂ ಮುಜಾಮಿನ್ ಮತ್ತು ಉಪ್ಪಳದ  ಜಂಷೀದ್ ಭಾಗಿಯಾಗಿರುವ ಅಂಶ ತಿಳಿದು ಬಂದಿತ್ತು.

ಬಂಧಿತ ಆರೋಪಿ ಮಹಮ್ಮದ್ ಆಶೀಕ್‌ನಿಂದ ಕೃತ್ಯಕ್ಕೆ ಬಳಸಿದ  ಕಾರು, ರೂ.60 ಸಾವಿರ ಮೌಲ್ಯದ ಒಂದು ಕೈಗಡಿಯಾರ ಮತ್ತು ಕಳವುಗೈಯಲಾದ ಚಿನ್ನಾಭರಣಗಳ ಪೈಕಿ ಆತನ ವಶದಲ್ಲಿದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡ ಪೊಲೀಸರು ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆಗಾಗಿ ಮತ್ತೆ ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ತೆಗೆದುಕೊಂಡಿದ್ದರು.

ವಿಚಾರಣೆಯ ವೇಳೆ ಆರೋಪಿ ಮಹಮ್ಮದ್ ಆಶೀಕ್ ನೀಡಿದ ಮಾಹಿತಿಯಂತೆ ಉಳಿದ ಇಬ್ಬರು ಆರೋಪಿಗಳ ಪತ್ತೆಗಾಗಿ ಬಲೆಬೀಸಿದ ಪುತ್ತೂರು ಪೊಲೀಸರು ಆರೋಪಿಗಳು ಪ್ರಕರಣವೊಂದಕ್ಕೆ ಸಂಬಂಧಿಸಿ ಕೇರಳದ ಕಣ್ಣೂರು ಸೆಂಟ್ರಲ್ ಜೈಲಿನಲ್ಲಿರುವ ಕುರಿತು ಮಾಹಿತಿ ಸಂಗ್ರಹಿಸಿ, ಬಾಡಿ ವಾರಂಟ್ ಮೂಲಕ ಅವರನ್ನು ಮೂರು ದಿನದ ಅವಧಿಗೆ ಕಸ್ಟಡಿಗೆ ತೆಗೆದುಕೊಂಡು ಕಳವು ಮಾಡಿರುವ ಚಿನ್ನಾಭರಣಗಳನ್ನು ಅವರಿಂದ ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ಎಸ್ಪಿ ಸುಧೀರ್‌ಕುಮಾರ್ ರೆಡ್ಡಿ ಮತ್ತು ಡಿವೈಎಸ್ಪಿ ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಠಾಣೆಯ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಅಪರಾಧ ವಿಭಾಗದ ಎಸ್‌ಐ ವೆಂಕಟೇಶ್ ಭಟ್, ಎಸ್‌ಐ ಓಮನಾ ,ಪ್ರೊಬೆಶನರಿ ಎಸ್‌ಐಗಳಾದ ಮಂಜುನಾಥ್ ,ರವಿ.ಜಿ.ಎ,ಅಬ್ರಾರ್ ಪಾಷಾ, ಎಎಸ್‌ಐ ಚಿದಾನಂದ ರೈ, ಹೆಡ್‌ಕಾನ್‌ಸ್ಟೇಬಲ್‌ಗಳಾದ ಸ್ಕರಿಯ,ಮಂಜುನಾಥ್,ಕೃಷ್ಣಪ್ಪ,ಕಾನ್‌ಸ್ಟೇಬಲ್‌ಗಳಾದ ಪ್ರಶಾಂತ್ ಶೆಟ್ಟಿ, ಪ್ರಸನ್ನ ಅವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಅವರ ವಶದಲ್ಲಿದ್ದ ಸ್ವತ್ತುಗಳ ಸ್ವಾಧೀನ ಪಡಿಸಿಕೊಳ್ಳುವ ಕಾರ್ಯಾಚರಣೆ ನಡೆಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News