ಅಲೆವೂರು ಬಡಗುಬೆಟ್ಟು ಗ್ರಾಪಂ ಅಭಿವೃದ್ಧಿಗೆ ಮಾಸ್ಟರ್ಪ್ಲಾನ್ ಸಿದ್ಧ: ಸೊರಕೆ
ಉಡುಪಿ, ಅ.12: ಉಡುಪಿ ನಗರದಲ್ಲಿ ಅಲೆವೂರು ಹಾಗೂ 80 ಬಡಗು ಬೆಟ್ಟು ಗ್ರಾಪಂನ್ನು ಸರ್ವಾಂಗೀಣ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ ಎಂದು ಕಾಪು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ.
ಅಂಬಾಗಿಲು-ಮಣಿಪಾಲ-ಉದ್ಯಾವರ- ಮಲ್ಪೆ ರಿಂಗ್ ರೋಡ್ನ 80 ಬಡಗುಬೆಟ್ಟು ವ್ಯಾಪ್ತಿಯಲ್ಲಿ ಬರುವ 2.35ಕಿ.ಮೀ. ಉದ್ದದ ರಸ್ತೆಯ ಒಂದು ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಅಲೆವೂರು- ಮಣಿಪಾಲ ರಸ್ತೆಯ ಶಾಂತಿನಗರದಲ್ಲಿ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
80ಬಡಗುಬೆಟ್ಟು ಹಾಗೂ ಅಲೆವೂರು ಗ್ರಾಪಂ ವ್ಯಾಪ್ತಿಯಲ್ಲಿ 450 ಕುಟುಂಬಗಳು ಮನೆ ಕಟ್ಟಿಕೊಂಡಿರುವ ಜಾಗವನ್ನು ಡೀಮ್ಡ್ ಫಾರೆಸ್ಟ್ ಎಂಬು ದಾಗಿ ಪರಿವರ್ತಿಸಲಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆಗೆ ಬೇರೆ ಜಾಗವನ್ನು ನೀಡಿ ಈ ಕುಟುಂಬಗಳಿಗೆ ಹಕ್ಕುಪತ್ರ ನೀಡುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿ ಈಗಾಗಲೇ ಘೋಷಿಸಿರುವ ಕೈಗಾರಿಕ ವಲಯವನ್ನು ರದ್ದುಪಡಿಸುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತು ಕತೆ ನಡೆಸಲಾಗಿದೆ. ಕೇಂದ್ರೀಯ ವಿದ್ಯಾಲಯಕ್ಕೆ ಅಲೆವೂರಿನಲ್ಲಿ ಜಾಗ ಗುರುತಿಸ ಲಾಗಿದ್ದು, ಜನವರಿಯಲ್ಲಿ ಇದರ ಕಾಮಗಾರಿ ಆರಂಭಗೊಳ್ಳಲಿದೆ. ಬಡಗು ಬೆಟ್ಟು ಗ್ರಾಪಂ ವ್ಯಾಪ್ತಿಯಲ್ಲಿ ನಿರ್ಮಾಣವಾಗಲಿರುವ ವಿಜ್ಞಾನ ಕೇಂದ್ರಕ್ಕೆೆ 4 ಕೋಟಿ ರೂ. ಅನುದಾನ ಮಂಜೂರಾಗಿದೆ. ಜಿಲ್ಲೆಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜನ್ನು ಮಣಿಪಾಲಕ್ಕೆ ಸಮೀಪದಲ್ಲೇ ಇರುವ ಈ ಎರಡು ಗ್ರಾಪಂ ವ್ಯಾಪ್ತಿಯಲ್ಲಿ ಸ್ಥಾಪಿಸಬೇಕೆಂದು ಒತ್ತಾಯಿಸಲಾಗುವುದು ಎಂದರು.
80ಬಡಗುಬೆಟ್ಟು ಗ್ರಾಪಂ ಅಧ್ಯಕ್ಷ ಶಾಂತರಾಮ್ ಶೆಟ್ಟಿ, ತಾಪಂ ಸದಸ್ಯೆ ಸಂಧ್ಯಾ ಶೆಟ್ಟಿ, ಮಾಜಿ ಜಿಪಂ ಅಧ್ಯಕ್ಷ ಉಪೇಂದ್ರ ನಾಯಕ್, ಅಲೆವೂರು ಗ್ರಾಪಂ ಮಾಜಿ ಅಧ್ಯಕ್ಷ ಹರೀಶ್ ಕಿಣಿ, ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಪ್ರವೀಣ್ ಶೆಟ್ಟಿ, ಗಿರೀಶ್ ಕುಮಾರ್, ಸ್ಥಳೀಯ ಮುಖಂಡರಾದ ಪ್ರಭಾಕರ ಶೆಟ್ಟಿ ಉಪಸ್ಥಿತರಿದ್ದರು. ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸಹಾಯಕ ಕಾರ್ಯನಿರ್ವಹಕ ಅಭಿಯಂತರ ಡಿ.ವಿ. ಹೆಗ್ಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.