ಕೃಷಿಯುತ್ಪನ್ನಗಳ ಆನ್‌ಲೈನ್ ಮಾರಾಟದಿಂದ ರೈತರಿಗೆ ಶೇ.38 ಹೆಚ್ಚು ಲಾಭ

Update: 2017-10-14 14:12 GMT

ಬ್ರಹ್ಮಾವರ, ಅ.14: ರಾಜ್ಯ ಸರಕಾರ ಕೃಷಿಯುತ್ಪನ್ನಗಳನ್ನು ಎಪಿಎಂಸಿ ಮೂಲಕ ಆನ್‌ಲೈನ್‌ನಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೇ ನೇರವಾಗಿ ಮಾರಾಟ ಮಾಡುವ ವ್ಯವಸ್ಥೆ ಕೈಗೊಂಡ ಮೇಲೆ ರೈತರಿಗೆ ಸಿಗುವ ಧಾರಣೆಯಲ್ಲಿ ಶೇ.38ರಷ್ಟು ಹೆಚ್ಚಳವಾಗಿದೆ. ಇದು ಕೇಂದ್ರ ಸರಕಾರದ ಮೆಚ್ಚುಗೆಗೂ ಪಾತ್ರ ವಾಗಿದ್ದು, ಉಳಿದ ರಾಜ್ಯಗಳಲ್ಲೂ ಇದನ್ನು ಜಾರಿಗೊಳಿಸಲು ಮುಂದಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ, ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರ, ಡಿಪ್ಲೋಮಾ ಕೃಷಿ ಕಾಲೇಜು ಬ್ರಹ್ಮಾವರ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶು ಸಂಗೋಪನೆ, ಮೀನುಗಾರಿಕಾ ಇಲಾಖೆ ಸೇರಿದಂತೆ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ದಲ್ಲಿ ಇಂದು ಪ್ರಾರಂಭಗೊಂಡ ‘ಕೃಷಿ ಮೇಳ-2017’ನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೃಷಿಯಾಧಾರಿತ ದೇಶದಲ್ಲಿ ನಾವಿಂದು ಸ್ವಾವಲಂಬಿಗಳಾಗಿದ್ದರೂ, ಭವಿಷ್ಯ ವನ್ನು ಅವಲೋಕಿಸುವಾಗ ಯುವಕರು ಕೃಷಿಯತ್ತ ಮುಖ ಮಾಡದೆ ಇರುವುದು ಚಿಂತೆಗೆ ಕಾರಣವಾಗುತ್ತಿದೆ. ರಾಜ್ಯ ಸರಕಾರ ಬೆಳೆದವನಿಗೆ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಆನ್‌ಲೈನ್ ಮಾರುಕಟ್ಟೆ ಆರಂಭಿಸಿದ್ದು, ರಾಜ್ಯದ ರೈತರಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ ಎಂದು ಅಭಿಪ್ರಾಯಪಟ್ಟರು.

ರಾಜ್ಯ ಸರಕಾರ ‘ಕೃಷಿ ಭಾಗ್ಯ’ದಂತೆ ರೈತ ಪರವಾದ ಹಲವು ಕಾರ್ಯಕ್ರಮ ಗಳನ್ನು ಜಿಲ್ಲೆಯಲ್ಲೂ ಜಾರಿಗೊಳಿಸಿದೆ. ಪ್ರಸಕ್ತ ಸಾಲಿನಲ್ಲಿ ಘಟಕಕ್ಕೆ 22,000 ರೂ. ನಂತೆ ಸಬ್ಸಿಡಿ ದೊರೆಯುವ ಒಟ್ಟು 266 ಕೃಷಿ ಹೊಂಡ ಘಟಕಗಳನ್ನು ಜಿಲ್ಲೆಗೆ ಮಂಜೂರು ಮಾಡಲಾಗಿದೆ. ಕೃಷಿ ಯಂತ್ರೋಪಕರಣಗಳಿಗೆ 2 ಕೋಟಿ ರೂ. ಸಬ್ಸಿಡಿ, ಬ್ರಹ್ಮಾವರ ಹೋಬಳಿಗೆ ಸ್ಪ್ರಿಂಕ್ಲರ್ ಖರೀದಿಗೆ ಮೂರು ಕೋಟಿ ರೂ. ಮಂಜೂರಾಗಿದೆ ಎಂದರು.

ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯ ಪ್ರತೀ ಗ್ರಾಪಂ ವ್ಯಾಪ್ತಿಯಡಿ ಒಂದು ಎಕರೆ ತೆಂಗಿನ ತೋಟದ ಅಭಿವೃದ್ಧಿಗೆ 50 ಸಾವಿರ ರೂ. ಅನುದಾನ, ಅಡಿಕೆ ತೋಟದ ಅಭಿವೃದ್ಧಿಗೆ 1.20 ಲಕ್ಷ ರೂ. ಅನುದಾನ ಪಡೆಯಬಹುದು. ರೈತರು ಉದ್ಯೋಗ ಚೀಟಿ ಪಡೆಯುವ ಮೂಲಕ ತಮ್ಮ ತೋಟದಲ್ಲಿ ತಾವೇ ದುಡಿದು ಉದ್ಯೋಗ ಖಾತರಿ ಯೋಜನೆಯ ಉಪಯೋಗ ಪಡೆದುಕೊಳ್ಳ ಬಹುದು ಎಂದು ಸಚಿವರು ವಿವರಿಸಿದರು.

ಹಸಿರು ಕ್ರಾಂತಿ, ಕೃಷಿ ಕ್ರಾಂತಿಯಿಂದ ಕೃಷಿಕ್ಷೇತ್ರ ಮುಂದುವರಿದಿರುವುದನ್ನು ಪ್ರಸ್ತಾಪಿಸಿದ ಸಚಿವರು, ಕೃಷಿ ಲಾಭದಾಯಕವಾಗಬೇಕಿದ್ದರೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಮುಂದಾಗಬೇಕು. ಇತ್ತೀಚಿನ ತಂತ್ರಜ್ಞಾನದ ಮಾಹಿತಿಗಳು ಇಂಥ ಕೃಷಿ ಮೇಳಗಳಲ್ಲಿ ಸಿಗುತ್ತವೆ ಎಂದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿವಿ ಕುಲಪತಿ ಡಾ.ಪಿ.ನಾರಾಯಣ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪ್‌ಚಂದ್ರ ಶೆಟ್ಟಿ, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಚಾಂತಾರು ಗ್ರಾಪಂ ಅಧ್ಯಕ್ಷೆ ಸರಸ್ವತಿ ವಿ.ನಾಯ್ಕ, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಶಿವಮೊಗ್ಗ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ರಾದ ಡಾ.ವಿ.ವೀರದ್ರಯ್ಯ, ನೀತು ಯೋಗಿರಾಜ್ ಪಾಟೀಲ್, ವಿವಿಯ ವಿಸ್ತರಣಾ ನಿರ್ದೇಶಕ ಡಾ.ಟಿ.ಹೆಚ್ ಗೌಡ, ವಿವಿ ನಿರ್ದೇಶಕ (ವಿದ್ಯಾರ್ಥಿ ಕಲ್ಯಾಣ) ಡಾ.ವೈ.ವಿಶ್ವನಾಥ ಶೆಟ್ಟಿ, ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ.ಅಂತೋನಿ ಮರಿಯಾ ಇಮ್ಯಾನುಯಲ್, ಉಡುಪಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ., ಬಿವಿಟಿಯ ಕೆ.ಎಂ.ಉಡುಪ ಮತ್ತಿತರು ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ.ಎಸ್.ಯು.ಪಾಟೀಲ್ ಸ್ವಾಗತಿಸಿದರೆ, ಸಂಶೋಧನಾ ನಿರ್ದೇಶಕ ಡಾ.ಎಂ.ಕೆ.ನಾಯ್ಕಾ ಪ್ರಾಸ್ತಾವಿಕ ಮಾತುಗಳಾ ಡಿದರು. ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಡಾ.ಧನಂಜಯ ವಂದಿಸಿದರು. ಸಾಸ್ತಾನದ ಪ್ರಗತಿ ಪರ ರೈತ ವೈಕುಂಠ ಹೇರ್ಳೆ ಹಾಗೂ ಸಂಜೀವ ಕ್ಯಾತ್ಯಪ್ಪನವರ್ ಕಾರ್ಯಕ್ರಮ ನಿರೂಪಿಸಿದರು.

ಕಾಡುಪ್ರಾಣಿಗಳ ಹಾವಳಿ: ಸಚಿವರಿಗೆ ಅಹವಾಲು ಸಲ್ಲಿಸಿದ ರೈತರು
ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಅವರು ತಮ್ಮ ಉದ್ಘಾಟನಾ ಭಾಷಣ ಮುಕ್ತಾಯಗೊಳಿಸುವ ಹಂತದಲ್ಲಿದ್ದಾಗ, ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಜಿಲ್ಲೆಯ ಪ್ರಗತಿ ಪರ ರೈತರೂ, ಭಾಕಿಸಂನ ಜಿಲ್ಲಾಧ್ಯಕ್ಷರೂ ಆಗಿರುವ ಬಿ.ವಿ.ಪೂಜಾರಿ ಪೆರ್ಡೂರು ಎದ್ದುನಿಂತು ಜಿಲ್ಲೆಯ ರೈತರು ಎದುರಿಸುತ್ತಿರುವ ಹಲವು ಸಮಸ್ಯೆಗಳತ್ತ ಸಚಿವರ ಗಮನ ಸೆಳೆದರು.

ರೈತರು ಬೆಳೆದ ಉತ್ಪನ್ನಗಳ ಬೆಲೆ ಇಳಿಯುತಿದ್ದರೂ, ಕಾರ್ಮಿಕರ ಸಂಬಳ, ರೈತರು ಖರೀದಿಸುವ ವಸ್ತುಗಳ ಬೆಲೆ ಒಂದೇ ಸಮನೆ ಏರುತ್ತಿದೆ. ಇದಕ್ಕಿಂತ ಮುಖ್ಯವಾಗಿ ರೈತರು ಕಾಡುಪ್ರಾಣಿಗಳ ಹಾವಳಿಯಿಂದ ಕಂಗೆಟ್ಟಿದ್ದಾರೆ. ಕಾಡುಹಂದಿ, ಜಿಂಕೆ, ಕಾಡುಕೋಣ, ನವಿಲು ಹಾಗೂ ಮಂಗಗಳು ಹಿಂಡು ಹಿಂಡಾಗಿ ಗದ್ದೆ, ತೋಟಕ್ಕೆ ಮುತ್ತಿಗೆ ಹಾಕಿ ಬೆಳೆದುದೆಲ್ಲವನ್ನೂ ನೆಲಸಮ ಗೊಳಿಸುತ್ತಿವೆ. ಇವುಗಳಿಂದ ರೈತರಿಗೆ ಉಳಿಗಾಲವೇ ಇಲ್ಲವಾಗಿದೆ. ಇದಕ್ಕೆ ಸರಕಾರ ಏನಾದರೂ ಮಾಡಲೇಬೇಕು. ಹಿಂದೊಮ್ಮೆ ‘ಮಂಕಿ ಪಾರ್ಕ್’ ಮಾಡುವ ಪ್ರಸ್ತಾಪ ಇತ್ತಾದರೂ ಅದರ ಬಗ್ಗೆ ಏನೂ ಕೇಳುತ್ತಿಲ್ಲ ಎಂದರು.

ರೈತರ ಅಹವಾಲುಗಳನ್ನು ಆಲಿಸಿದ ಸಚಿವರು. ಬಿಗುವಾದ ವನ್ಯಜೀವಿ ಸಂರಕ್ಷಣಾ ಕಾಯ್ದೆಯಿಂದಾಗಿ ಇಂದು ಪ್ರಾಣಿಗಳನ್ನು ನಿಭಾಯಿಸುವಲ್ಲಿ ಎಚ್ಚರಿಕೆ ವಹಿಸಬೇಕಾಗಿದೆ. ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿ ಕೊಂಡಿದ್ದು, ಈ ಬಗ್ಗೆ ಇಂದೇ ಅರಣ್ಯ ಸಚಿವ ಬಿ.ರಮಾನಾಥ ರೈ ಅವರೊಂದಿಗೆ ಮಾತನಾಡಿ, ಶೀಘ್ರವೇ ಅರಣ್ಯ ಸಚಿವರನ್ನು ಜಿಲ್ಲೆಗೆ ಕರೆಸಿ, ಅಧಿಕಾರಿಗಳು, ರೈತ ಮುಖಂಡರು ಹಾಗೂ ಜನಪ್ರತಿನಿಧಿಗಳ ಸಭೆಯೊಂದನ್ನು ಕಾಡುಪ್ರಾಣಿ ಹಾವಳಿ ಕುರಿತಂತೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಕರೆಯುವುದಾಗಿ ಆಶ್ವಾಸನೆ ನೀಡಿದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಪುನರುಜ್ಜೀವನದ ಕುರಿತು ರೈತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಾರಾಹಿ ಯೋಜನೆಯ ಅನುಷ್ಠಾನದ ಹಿನ್ನೆಲೆಯಲ್ಲಿ ಕಾರ್ಖಾನೆಯನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. ಆದರೆ ಅಲ್ಲಿರುವ ಯಂತ್ರೋಪಕರಣಗಳು ಹಳತಾಗಿರುವುದರಿಂದ ಅವುಗಳನ್ನು ಏಲಂ ಮಾಡಿ, ಹೊಸ ಉಪಕರಣಗಳನ್ನು ಅಳವಡಿಸಿ ಕಾರ್ಖಾನೆಯ ಪುನರಾರಂಭಕ್ಕೆ ತಗಲುವ ವೆಚ್ಚದ ಕುರಿತು ಅಂದಾಜು ಪಟ್ಟಿಯೊಂದನ್ನು ನೀಡುವಂತೆ ಕಾರ್ಖಾನೆ ಆಡಳಿತ ಮಂಡಳಿಗೆ ಜವಾಬ್ದಾರಿ ವಹಿಸಲಾಗಿದೆ.

ವರದಿ ಬಂದ ತಕ್ಷಣ ಅವುಗಳನ್ನು ಪರಿಶೀಲಿಸಿ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದರು. ಸಕ್ಕರೆ ಕಾರ್ಖಾನೆಯ ವಶದಲ್ಲಿರುವ 110 ಎಕರೆ ಜಾಗದಲ್ಲಿ 25 ಎಕರೆಯನ್ನು ಸರಕಾರಿ ವೈದ್ಯಕೀಯ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ನೀಡಿ ಉಳಿದೆಲ್ಲಾ ಜಮೀನು, ರಿಯಲ್ ಎಸ್ಟೇಟ್ ಕೈವಶವಾಗದಂತೆ, ಕಾರ್ಖಾನೆಯ ರೈತರ ಸುಪರ್ದಿಯಲ್ಲೇ ಇರುವಂತೆ ಖಚಿತಪಡಿಸಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News