ಪುತ್ತೂರಿನಲ್ಲಿ ಬಿಜೆಪಿ ಪ್ರತಿಭಟನೆ: ಸಚಿವ ಬೇಗ್ ಪ್ರತಿಕೃತಿ ದಹನ
ಪುತ್ತೂರು, ಅ. 14: ರಾಜ್ಯ ಸಚಿವ ರೋಶನ್ ಬೇಗ್ ಪ್ರಧಾನಿ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಿ ಬಿಜೆಪಿ ಯುವ ಮೋರ್ಚಾ ಆಶ್ರಯದಲ್ಲಿ ಶನಿವಾರ ಸಂಜೆ ಪುತ್ತೂರು ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು ಹಾಗೂ ಸಚಿವ ರೋಶನ್ ಬೇಗ್ ಅವರ ಪ್ರತಿಕೃತಿ ದಹಿಸಲಾಯಿತು.
ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತಮ ಆಡಳಿತವನ್ನು ನೋಡು ಸಹಿಸಲಾರದೆ ಅವರ ವಿರುದ್ಧ ಇಂತಹ ಕೀಳು ಮಟ್ಟದ ಹೇಳಿಕೆಯನ್ನು ಸಚಿವರು ಮಾಡಿದ್ದಾರೆ. ಓರ್ವ ಜವಾಬ್ದಾರಿಯುತ ಸಚಿವರಾಗಿ ಇಂತಹ ಕೀಳು ಮಟ್ಟದ ಹೇಳಿಕೆ ಅವರಿಗೆ ಶೋಭೆಯಲ್ಲ ಎಂದರು.
ಈ ಹಿಂದೆಯೂ ಮೋದಿ ಅವರ ಪತ್ನಿಯ ಬಗ್ಗೆ, ದಾಂಪತ್ಯದ ಬಗ್ಗೆ, ತಾಯಿಯ ಬಗ್ಗೆ, ಉಡುಪು ಬಗ್ಗೆ ಸಾಕಷ್ಟು ಅಪಪ್ರಚಾರಗಳನ್ನು ನಡೆಸಲಾಗಿತ್ತು. ಇದರಿಂದ ಪ್ರಯೋಜನವಾಗಿಲ್ಲ ಎಂದು ಇದೀಗ ಇಂತಹ ಕೀಳು ಭಾಷೆಯನ್ನು ಪ್ರಯೋಗಿಸಿ ತಮ್ಮ ಮಟ್ಟದ ಪ್ರದರ್ಶನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಯುವ ಮೊರ್ಚಾದ ರಾಜು ಉಪಾಧ್ಯಕ್ಷ ಶಿವರಂಜನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ಜೀವಂಧರ ಜೈನ್, ಪ್ರಧಾನ ಕಾರ್ಯದರ್ಶಿ ರಾಮದಾಸ್ ಹಾರಾಡಿ, ಯುವ ಮೊರ್ಚಾ ಅಧ್ಯಕ್ಷ ಸುನಿಲ್ ದಡ್ಡು, ನಗರ ಯುವ ಮೋರ್ಚಾ ಅಧ್ಯಕ್ಷ ಅನೀಶ್ ಬಡೆಕ್ಕಿಲ, ಪುತ್ತೂರು ಮಂಡಲ ಪ್ರಧಾನ ಕಾರ್ಯದರ್ಶಿ ಗಳಾದ ಶಂಭು ಭಟ್, ಕೇಶವ ಗೌಡ ಬಜತ್ತೂರು, ನಗರಸಭೆ ಉಪಾಧ್ಯಕ್ಷ ವಿಶ್ವನಾಥ ಗೌಡ, ಮಂಡಲ ಉಪಾಧ್ಯಕ್ಷ ನಿತೀಶ್ ಕುಮಾರ್ ಶಾಂತಿವನ, ಸಂಘಪರಿವಾರದ ಮುಖಂಡ ಅರುಣ್ ಕುಮಾರ್ ಪುತ್ತಿಲ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ತಾಪಂ ಸದಸ್ಯರಾದ ಲಕ್ಷ್ಮಣ ಗೌಡ ಬೆಳ್ಳಿಪ್ಪಾಡಿ, ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ್, ಮಹಿಳಾ ಮೋರ್ಚಾ ಗ್ರಾಮಾಂತರ ಮಂಡಲ ಅಧ್ಯಕ್ಷೆ ಉಷಾ ನಾರಾಯಣ್, ಎಬಿವಿಪಿ ನಗರ ಅಧ್ಯಕ್ಷೆ ಹರಿಣಿ ಪುತ್ತೂರಾಯ, ನಗರಸಭಾ ಸದಸ್ಯ ರಾಜೇಶ್ ಬನ್ನೂರು, ಪ್ರಮುಖರಾದ ಪುರುಷೋತ್ತಮ ಗೌಡ ಮುಂಗ್ಲಿಮನೆ, ಜಗದೀಶ್ ಪುಣಚ, ಸುರೇಶ್ ರೈ, ಯತಿರಾಜ್ ರೈ ನೀರ್ಪಾಡಿ, ವಿರೂಪಾಕ್ಷ, ಮತ್ತಿತರರು ಉಪಸ್ಥಿತರಿದ್ದರು.