‘ವರ್ಣ ಸಿಂಚನ’ ಕಲಾ ಪ್ರದರ್ಶನ ಉದ್ಘಾಟನೆ

Update: 2017-10-14 15:32 GMT

ಉಡುಪಿ, ಅ.14: ಉಡುಪಿಯ ಆರ್ಟಿಸ್ಟ್ ಫೋರಂ ವತಿಯಿಂದ ಉಡುಪಿ ದೃಷ್ಠಿ ಗ್ಯಾಲರಿಯಲ್ಲಿ ಆಯೋಜಿಸಲಾದ ಕಲಾವಿದ ಪೆರ್ಮುದೆ ಮೋಹನ್ ಕುಮಾರ್ ಅವರ ನಾಲ್ಕು ದಿನಗಳ ಏಕವ್ಯಕ್ತಿ ಕಲಾಕೃತಿಗಳ ಪ್ರದರ್ಶನ ‘ವರ್ಣ ಸಿಂಚನ’ವನ್ನು ಹಿರಿಯ ಕಲಾವಿದ ಗುರುರಾಜ್ ಮಾರ್ಪಳ್ಳಿ ಶನಿವಾರ ಉದ್ಘಾಟಿಸಿದರು.

ಈ ಚಿತ್ರ ಕಲಾಕೃತಿಗಳಲ್ಲಿ ಪ್ರಯಾಣದ ಭಾವನೆ ಅಡಕವಾಗಿದೆ. ಆರ್ಟಿಸ್ಟ್ ಫೋರಂ ಕಳೆದ ಹಲವು ವರ್ಷಗಳಿಂದ ಕಲೆಯ ಪ್ರದರ್ಶನ ಪ್ರಸ್ತುತತೆಯನ್ನು ಉಳಿಸಿಕೊಂಡು ಬರುತ್ತಿದೆ ಎಂದು ಗುರುರಾಜ್ ಮಾರ್ಪಳ್ಳಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಆರ್ಟಿಸ್ಟ್ ಫೋರಂನ ಕಾರ್ಯದರ್ಶಿ ಸಕು ಪಾಂಗಾಳ ಮಾತನಾಡಿ, ಮಾನಸಿಕ ಶಾಂತಿ ಹಾಗೂ ನೆಮ್ಮದಿ ಎಂಬುದು ಎಷ್ಟು ಹಣ ಕೊಟ್ಟರೂ ಸಿಗುವುದಿಲ್ಲ. ಅದು ಕೇವಲ ಲಲಿತ ಕಲೆಗಳಿಂದ ಮಾತ್ರ ಪಡೆಯಲು ಸಾಧ್ಯ. ಹಾಗಾಗಿ ಈ ಕಲೆಗಳಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.

ಉದ್ಯಮಿ ದಿನೇಶ್ ಪುತ್ರನ್, ಲಯನ್ಸ್ ಕ್ಲಬ್‌ನ ಇಂದು ರಮಾನಂದ ಭಟ್ ಮುಖ್ಯ ಅತಿಥಿಗಳಾಗಿದ್ದರು. ಆರ್ಟಿಸ್ಟ್ ಫೋರಂನ ಅಧ್ಯಕ್ಷ ರಮೇಶ್ ರಾವ್, ಉಪಾಧ್ಯಕ್ಷ ಪುರುಷೋತ್ತಮ ಅಡ್ವೆ ಉಪಸ್ಥಿತರಿದ್ದರು. ಪೆರ್ಮುದೆ ಮೋಹನ್ ಕುಮಾರ್ ವಂದಿಸಿದರು. ನಾಗರಾಜ್ ಆನೆಹಳ್ಳಿ ಕಾರ್ಯಕ್ರಮ ನಿರೂಪಿಸಿ ದರು. ಈ ಪ್ರದರ್ಶನವು ಅ.17ರವರೆಗೆ ಪ್ರತಿದಿನ ಬೆಳಗ್ಗೆ 10ಗಂಟೆಯಿಂದ ಸಂಜೆ 7ಗಂಟೆಯವರೆಗೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News