ಬೆಳೆಕಟಾವು ಸಮೀಕ್ಷೆಗೆ ಗ್ರಾಪಂ ನೌಕರರನ್ನು ಕೈಬಿಡಲು ಆಗ್ರಹಿಸಿ ಮನವಿ
ಉಡುಪಿ, ಅ.14: ಗ್ರಾಪಂ ಬಿಲ್ ಕಲೆಕ್ಟರ್ಗಳನ್ನು ಗ್ರಾಪಂ ವ್ಯಾಪ್ತಿಯ ಬೆಳೆ ಕಟಾವು ಸಮೀಕ್ಷೆಯನ್ನು ನಡೆಸಲು ನಿಯೋಜಿಸಿರುವ ಜಿಲ್ಲಾಧಿಕಾರಿಗಳ ಕ್ರಮ ವನ್ನು ವಿರೋಧಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್ ನೌಕರರ ಸಂಘ (ಸಿಐಟಿಯು)ದ ನಿಯೋಗವು ಶುಕ್ರವಾರ ಜಿಪಂ ಮುಖ್ಯ ಕಾರ್ಯನಿರ್ವಹಣಾ ಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಗ್ರಾಪಂ ವ್ಯಾಪ್ತಿಯ ಬೆಳೆ ಕಟಾವು ಸಮೀಕ್ಷೆಯನ್ನು ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ಜಂಟಿಯಾಗಿ ಸರ್ವೇಕ್ಷಣಾ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಸಬೇಕಾಗಿದ್ದು, ಅಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಗ್ರಾಪಂ ಬಿಲ್ ಕಲೆಕ್ಟರ್ಗಳನ್ನು ನಿಯೋಜಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದರು. ಇದರಿಂದ ಬಿಲ್ ಕಲೆಕ್ಟರ್ಗಳಿಗೆ ಗ್ರಾಪಂನಲ್ಲಿ ಈಗಾಗಲೇ ಹತ್ತು ಹಲವು ಕೆಲಸ ಕಾರ್ಯಗಳನ್ನು ತಮ್ಮ ದೈನಂದಿನ ಬಿಲ್ಲು ವಸೂಲಿಯ ಕೆಲಸದ ಜೊತೆ ನಿರ್ವ ಹಿಸುವುದು ಅಸಾಧ್ಯವಾಗಿದೆ. ಆದುದರಿಂದ ಈ ನಿಯೋಜನೆಯಿಂದ ಗ್ರಾಪಂ ನೌಕರರನ್ನು ಕೈಬಿಡಬೇಕೆಂದು ನಿಯೋಗ ಒತ್ತಾಯಿಸಿತು.
ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಾನಂದ ಕಪಾಸಿ ಈ ಬಗ್ಗೆ ಜಿಲ್ಲಾಧಿಕಾರಿಯವರಲ್ಲಿ ಮಾತುಕತೆ ನಡೆಸಿ ಪರಿ ಹಾರ ಕಂಡುಕೊಳ್ಳಲು ಮುಂದಾದರು. ಕೊನೆಗೆ ಸದ್ಯ ಗ್ರಾಪಂ ನೌಕರರು ಬೆಳೆ ಕಟಾವಿಗೆ ಆಯ್ಕೆಯಾದ ರೈತರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಗಳನ್ನು ಪಡೆದು ಸಮೀಕ್ಷೆ ನಡೆಸುವವರಿಗೆ ಒಪ್ಪಿಸುವ ಜವಬ್ದಾರಿಯನ್ನು ವಹಿಸಿ ಕೊಳ್ಳಬೇಕು. ಈ ಬಗ್ಗೆ ಹೊಸ ಆದೇಶವನ್ನು ಹೊರಡಿಸುವುದಾಗಿ ತಿಳಿಸಿದರು.
ಇದಕ್ಕೆ ನೌಕರರ ಸಂಘ ಒಪ್ಪಿಗೆ ಸೂಚಿಸಿದ್ದು ಮೊಬೈಲ್ ಆ್ಯಪ್ ಮೂಲಕ ಬೆಳೆ ಕಟಾವಿನ ಸಮೀಕ್ಷೆಗೆ ನಿಯೋಜಿಸಿರುವುದನ್ನು ಕೈ ಬಿಟ್ಟಲ್ಲಿ ಇದಕ್ಕೆ ಸಹಕಾರ ನೀಡುವುದಾಗಿ ತಿಳಿಸಿತು. ಆದುದರಿಂದ ಹೊಸ ಆದೇಶ ಬರುವವರೆಗೆ ನೌಕರರು ಬೆಳೆ ಕಟಾವಿನ ಸಮೀಕ್ಷೆಯ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎಂದು ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಬೀಜಾಡಿ ಮತ್ತು ಪ್ರಧಾನ ಕಾರ್ಯ ದರ್ಶಿ ಕೆ.ರಮೇಶ್ ನಾಯ್ಕ್ ತಿಳಿಸಿದ್ದಾರೆ.