ಸಿದ್ದರಾಮಯ್ಯ ಜನಪರ ಆಡಳಿತದ ಬಗ್ಗೆ ಮನೆಮನೆಗೆ ತಿಳಿಸಿ: ಮಿಥುನ್ ರೈ
ಮುಲ್ಕಿ, ಅ. 15: ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಜನಪರ ಆಡಳಿತ ನಡೆಸಿದ್ದು, ಮನೆಮನೆಗೆ ಭೇಟಿ ನೀಡಿ ಜನರಿಗೆ ತಿಳಿಹೇಳ ಬೇಕು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಕಾರ್ಯಕರ್ತರಿಗೆ ತಿಳಿಸಿದರು.
ಅವರು ಪಡುಪಣಂಬೂರು ಗ್ರಾ.ಪಂ. ವ್ಯಾಪ್ತಿಯ ಎಸ್ಕೋಡಿ ಸಮೀಪದ 10ನೇ ತೋಕುರು ಎಂಬಲ್ಲಿ ಮನೆಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಬಳಿಕ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರಿಂದ ಮನೆ ಮನೆಗೆ ಕಾಂಗ್ರೆಸ್ ಭೇಟಿ ಅಭಿಯಾನ ನಡೆಯಿತು.
ಈ ಸಂದರ್ಭ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದನಂಜಯ ಮಟ್ಟು, ಕೆಪಿಸಿಸಿ ಸದಸ್ಯ ವಸಂತ್ ಬೆರ್ನಾಡ್, ದ.ಕ.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಪದ್ಮಾವತಿ ಶೆಟ್ಟಿ, ಹಕೀಂ ಮುಲ್ಕಿ, ಸುಗಂಧಿ ದಿನೇಶ್ ಕೊಂಡಾಣ, ಸವಿತಾ ಶರತ್ ಬೆಳ್ಳಾಯರು, ಮಂಜುನಾಥ್ ಆರ್ ಕೆ, ರಾಜು ಕುಂದರ್, ಸುನಿತಾ ಕಿನ್ನಿಗೋಳಿ, ಅಬ್ದುಲ್ ಅಝೀಝ್ ಹಳೆಯಂಗಡಿ ಮತ್ತಿತರರು ಉಪಸ್ಥಿತರಿದ್ದರು.
ಮನೆಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಎಸ್ಕೋಡಿಯ ಹಿಂದುಳಿದ ವರ್ಗಕ್ಕೆ ಸೇರಿದ ಸುಶ್ಮಾ ಎಂಬವರ ಮನೆಗೆ ಭೇಟಿ ನೀಡಿದಾಗ ಸುಶ್ಮಾ ವಿಪರೀತ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ತನ್ನ ಚಿಕಿತ್ಸಾ ವೆಚ್ಚ ವಾರಕ್ಕೆ ಸುಮಾರು 4,000ರೂ. ಭರಿಸುವ ಬಗ್ಗೆ ಮಿಥುನ್ ರೈ ಅವರಲ್ಲಿ ತಿಳಿಸಿದಾಗ ಮಂಗಳೂರಿನ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ ಸುಶ್ಮಾ ಗುಣಮುಖರಾಗುವವರೆಗೂ ಚಿಕಿತ್ಸೆಯ ಸಂಪೂರ್ಣ ವೆಚ್ಚ ಭರಿಸುವುದಾಗಿ ತಿಳಿಸಿದರು.