ದ.ಕ ಜಿಲ್ಲೆಗೆ ಶೀಘ್ರದಲ್ಲಿ ಪ್ಲಾಸ್ಟಿಕ್ ಪಾರ್ಕ್ ಗೆ ಅನುಮತಿ ಪತ್ರ- ಅನಂತ್ ಕುಮಾರ್

Update: 2017-10-16 13:10 GMT

ಮಂಗಳೂರು, ಅ.16: ಮಂಗಳೂರಿನಲ್ಲಿ ಒಂದು ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಪ್ಲಾಸ್ಟಿಕ್ ಪಾರ್ಕ್ ನಿರ್ಮಾಣಕ್ಕೆ ಶೀಘ್ರದಲ್ಲಿ ಕೇಂದ್ರ ಸರಕಾರದಿಂದ ಅನುಮತಿ ಪತ್ರ ನೀಡಲಾಗುವುದು ಎಂದು ಕೇಂದ್ರ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.

ಭಾರತ ಸರಕಾರದ ಇಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹಾಗೂ ನೀತಿ ಆಯೋಗದ ವತಿಯಿಂದ ನಗರದ ಪುರಭವನದಲ್ಲಿ ಇಂದು ಹಮ್ಮಿಕೊಂಡ ಮುದ್ರಾ ಪ್ರೋತ್ಸಾಹ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಈ ಪ್ಲಾಸ್ಟಿಕ್ ಪಾರ್ಕ್ ಯೋಜನೆಯಲ್ಲಿ 36 ಉದ್ದಿಮೆಗಳು ಕಾರ್ಯನಿರ್ವಹಿಸಲು ಸಮ್ಮತಿಸಿ ಸೂಚಿಸಿವೆ. ಇದರಿಂದ ಸುಮಾರು 30 ಸಾವಿರ ಜನರಿಗೆ ಉದ್ಯೋಗವಾಕಾಶ ದೊರೆಯಲಿದೆ ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಿಸಲಾಗುವ ಪ್ಲಾಸ್ಟಿಕ್ ಪಾರ್ಕ್‌ಗೆ ಸಂಬಂಧಿಸಿದಂತೆ ಆರಂಭಿಕ ಹಂತದ ಕೆಲಸ ಕಾರ್ಯ ನಡೆಯುತ್ತಿದೆ ಈ ಹಿನ್ನೆಲೆಯಲ್ಲಿ ಸಂಸದ ನಳಿನ್ ಕುಮಾರ್‌ರ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಮುಂದಿನ ವಾರವೇ ಈ ಯೋಜನೆಗೆ ಕೇಂದ್ರ ಸರಕಾರದಿಂದ ಅನುಮತಿ ಪತ್ರ ಒದಗಿಸಿ ಕೊಡುವುದಾಗಿ ಅನಂತ್ ಕುಮಾರ್ ತಿಳಿಸಿದ್ದಾರೆ.

ಅಭಿವೃದ್ಧಿಯಲ್ಲಿ ಪ್ರಧಾನಿ ಮೋದಿ ತಾರತಮ್ಯ ಮಾಡಿಲ್ಲ ಇದರಿಂದಾಗಿ ಕರ್ನಾಟಕ ಮುದ್ರಾ ಯೋಜನೆಯ ಅನುಷ್ಠಾನದಲ್ಲಿ ದೇಶದಲ್ಲಿ ಒಂದನೆ ಸ್ಥಾನದಲ್ಲಿದೆ ಎಂದು ಅನಂತ್ ಕುಮಾರ್ ತಿಳಿಸಿದ್ದಾರೆ.

ಮುದ್ರಾ ಯೋಜನೆಯ ಸಾಲ ಸೌಲಭ್ಯವನ್ನು ಈ ದೇಶದ ಕಡು ಬಡವರು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವುದು ಮೋದಿಯವರ ಆಶಯವಾಗಿದೆ. ಮೇಕ್ ಇಂಡಿಯಾ  ಎಂದರೆ ದೇಶದಲ್ಲಿ ತಯಾರಾಗುವ ವಸ್ತುಗಳು ದೇಶದಲ್ಲಿಯೇ ಮಾರಾಟ ಮಾಡಬೇಕು ಎನ್ನುವುದಲ್ಲ. ಇಲ್ಲಿ ತಯಾರಾಗುವ ವಸ್ತುಗಳು ವಿದೇಶಿ ಮಾರುಕಟ್ಟೆಯಲ್ಲೂ ಮಾರಾಟವಾಗುವಂತಹ ಗುಣಮಟ್ಟವನ್ನು ಹೊಂದಬೇಕು ಎನ್ನುವುದು ಮೋದಿಯವರ ಉದ್ದೇಶವಾಗಿದೆ.

ಭಾರತದಲ್ಲಿ 2611 ಜನೌಷಧಿ ಕೇಂದ್ರಗಳ ಮೂಲಕ ಬಡಜನರಿಗೆ ರಿಯಾಯಿತಿ ದರದಲ್ಲಿ ಔಷಧಿ ಸಿಗುವಂತಾಗಿದೆ ಎಂದರು. ದ.ಕ ಜಿಲ್ಲೆಯ ಸಂಸದ ನಳಿನ್ ಕುಮಾರ್ ಜನರ ಕೆಲಸಗಳಿಗೆ ನಿರಂತರವಾಗಿ ದುಡಿಯುತ್ತಿರುವ ‘ಅವಿಶ್ರಾಂತ ಚೇತನ ’ಎಂದು ಬಿರುದ ನೀಡಬಹುದು. ದೇಶದ ಎಲ್ಲಾ ಸಂಸದರ ಪೈಕಿ ಗರಿಷ್ಠ ಪ್ರಮಾಣದ ಅನುದಾನವನ್ನು ತಮ್ಮ ಕ್ಷೇತ್ರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.

ದ.ಕ ಜಿಲ್ಲೆಗೆ ಸಿಪೆಟ್ ಘಟಕ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಯಾಘುವ ಸಂದರ್ಭದಲ್ಲಿ ಇಲ್ಲಿನ ಜನರಿಗೆ ಉದ್ಯೋಗ ದೊರೆಯಬೇಕಾದರೆ ಕೌಶಲ್ಯ ರೂಢಿಸಿಕೊಳ್ಳಲು ತರಬೇತಿ ನೀಡುವ ಭಾರತ ಸರಕಾರದ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ವಿಭಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಪೆಟ್ ( ಸೆಂಟ್ರಲ್ ಇನ್ಸಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ) ಘಟಕ ಆರಂಭಿಸಬೇಕಾಗಿದೆ.ಈ ನಿಟ್ಟಿನಲ್ಲಿ ಸಹಕಾರ ನೀಡುವುದಾಗಿ ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗಡೆ ತಿಳಿಸಿದ್ದಾರೆ.

ದೇಶ ಕಟ್ಟುವಲ್ಲಿ ಸಣ್ಣ ಉದ್ದಿಮೆಗಳು ಮಹತ್ವದ ಕೊಡುಗೆ ನೀಡಿವೆ.ಕೋಟ್ಯಾಂತರ ಮಂದಿಗೆ ಉದ್ಯೋಗ ನೀಡಿವೆ.ಈ ಕೆಲಸ ಬೃಹತ್ ಉದ್ದಿಮೆಗಳಿಂದ ನಡೆದಿಲ್ಲ.ದ.ಕ ಜಿಲ್ಲೆಯಲ್ಲಿ ಕೌಶಲ್ಯ ಅಭಿವೃದ್ಧಿಯ ಕೇಂದ್ರ ಆರಂಭಿಸಲು ಎಲ್ಲಾ ರೀತಿಯ ನೆರವು ನೀಡಲು ಸಿದ್ಧನಾಗಿರುವುದಾಗಿ ಅನಂತ್ ಕುಮಾರ್ ತಿಳಿಸಿದ್ದಾರೆ.ಹಿಂದೆ ಜನರು ಮಜಾ ಮಾಡಿ ಎಂದು ಸಾಲ ಮೇಳ ನಡೆಸಲಾಗುತ್ತಿತ್ತು .ಈಗ ಉದ್ಯಮ ಶೀಲತೆ ಹೆಚ್ಚಬೇಕು ಜನರ ಆರ್ಥಿಕಾಭಿವೃದ್ಧಿ ಯಾಗಬೇಕು ಎಂದು ಸಾಲ ನೀಡಲಾಗುತ್ತಿದೆ ಎಂದು ಅನಂತ್ ಕುಮಾರ್ ತಿಳಿಸಿದರು.

ಮುದ್ರಾ ಯೋಜನೆಯಿಂದ ದ.ಕ ಜಲ್ಲೆಗೆ 750 ಕೋಟಿ ಸಾಲ ಮಂಜೂರು:-ಮುದ್ರಾ  ಯೋಜನೆಯ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ 59 ಸಾವಿರ ಫಲಾನುಭವಿಗಳಿಗೆ 750 ಕೋಟಿ ರೂಪಾಯಿ ಸಾಲ ನೀಡಲಾಗಿದೆ.ಸರಕಾರದ ವಿವಿಧ ಯೋಜನೆಯನ್ನು ಜನರ ಬಳಿಗೆ ತಲುಪಿಸಲು ಬ್ಯಾಂಕ್‌ಗಳ ಅಧಿಕಾರಿಗಳು ಶ್ರಮಿಸಿದ್ದಾರೆ.ಮುದ್ರಾ ಯೋಜನೆಯಲ್ಲಿ ಸಾಲ ಮಂಜೂರಾತಿಗೆ ಬ್ಯಾಂಕ್ ಅಧಿಕಾರಿಗಳು ಹಲವು ಸಬೂಬು ನೀಡಿ ಸಾಲ ನಿರಾಕರಿಸುತ್ತಿರುವ ಬಗ್ಗೆ ದೂರುಗಳು ಬರುತ್ತವೆ. ಮೂರು ವರ್ಷದ ಆದಾಯ ತೆರಿಗೆಯ ದಾಖಲೆ ಕೇಳುತ್ತಾರೆ ಈ ರೀತಿ ಆಗಬಾರದು ಮುದ್ರಾ ಸಾಲ ಯೋಜನೆಯಲ್ಲಿ ಸಾಲ ನೀಡಲು ಈ ರೀತಿಯ ನಿಯಮಾವಳಿಗಳಿಲ್ಲ ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳು ತಮ್ಮ ತಪ್ಪನ್ನು ಸರಿಪಡಿಸಿಕೊಂಡು ಸಾಲ ಮಂಜೂರಾತಿ ನೀಡಬೇಕು ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಕಳೆದ ಮೂರೂವರೆ ವರ್ಷದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ 16,500 ಕೋಟಿ ರೂಪಾಯಿ ಅನುದಾನ ಕೇಂದ್ರದಿಂದ ಮಂಜೂರಾಗಿದೆ ಎಂದು ನಳಿನ್ ಕುಮಾರ್ ತಿಳಿಸಿದರು.

ಸಭೆಯ ವೇದಿಕೆಯಲ್ಲಿ ಭಾರತ ಸರಕಾರದ ಆರ್ಥಿಕ ಇಲಾಖೆಯ ನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ,ಪ್ರಭಾರ ಜಿಲ್ಲಾಧಿಕಾರಿ ಕುಮಾರ್,ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಂ.ಆರ್.ರವಿ,ಕಾರ್ಪೋರೇಶನ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸಿ.ಕೆ.ಗೋಪಾಲ್, ಸಿಂಡಿಕೇಟ್ ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಲ್ಲಿಕಾರ್ಜುನ ರಾವ್ ಮೊದಲಾದವರು ಉಪಸ್ಥಿತರಿದ್ದರು. ಆಯ್ಕೆ ಮಾಡಲಾದ ಮುದ್ರಾ ಯೋಜ ನೆಯ ಫಲಾನುಭವಿಗಳಿಗೆ ಸಾಲದ ಚೆಕ್‌ನ್ನು ಸಚಿವರು ಸಭೆಯಲ್ಲಿ ವಿತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News