ಅಡಿಗರು ತನ್ನ ಮಾತುಗಳಲ್ಲಿ ಕವಿಹೃದಯ ರೂಪಿಸಿದವರು : ತೋಳ್ಪಾಡಿ
ಪುತ್ತೂರು,ಅ.21: ಸಿದ್ದ ಶೈಲಿಯಲ್ಲಿ ಬರೆದವರು ಎಂದಿಗೂ ಪರಿಪೂರ್ಣ ಕಾವ್ಯ ರಚನೆ ಮಾಡಲು ಸಾಧ್ಯವಿಲ್ಲ. ನಮ್ಮ ಮಾತುಗಳಿಂದ ಬರೆದಲ್ಲಿ ಮಾತ್ರ ಪರಿಪೂರ್ಣ ಕಾವ್ಯ ರಚನೆ ಸಾಧ್ಯ. ಅಡಿಗರು ತನ್ನ ಮಾತುಗಳ ಬರಹದ ಮೂಲಕ ಕವಿಹೃದಯ ರೂಪಿಸಿದವರು ಎಂದು ಚಿಂತಕ ಲಕ್ಷ್ಮೀಶ ತೋಳ್ಪಾಡಿ ಹೇಳಿದರು.
ಅವರು ಪುತ್ತೂರು ಕರ್ನಾಟಕ ಸಂಘ ಮತ್ತು ವಸುಧಾ ಪ್ರತಿಷ್ಠಾನ ಉಪ್ಪಿನಂಗಡಿ ಇದರ ಸಂಯೋಜನೆಯಲ್ಲಿ ಪುತ್ತೂರಿನ ಅನುರಾಗ ವಠಾರದಲ್ಲಿ ನಡೆದ `ಅಡಿಗರ ಕಾವ್ಯ ಪುನರಾವಲೋಕನ' ಕಾರ್ಯಕ್ರಮದಲ್ಲಿ ಅಡಿಗರ ಕಾವ್ಯಾನುಸಂದಾನ ನಡೆಸಿದರು. ಕವಿ ವಿಚಲಿತರಾಗದಿದ್ದಲ್ಲಿ ಹೊಸ ಮಾತುಗಳ ಹುಟ್ಟು ಸಾಧ್ಯವಾಗಲಾರದು. ಬೇರೆಯವರ ಪ್ರಭಾವವಿಲ್ಲದೆ ತನ್ನ ಕಾವ್ಯಗಳಲ್ಲಿ ತನ್ನದೇ ಮಾತುಗಳನ್ನು ಹುಡುಕಾಟ ನಡೆಸಿರುವ ಅಡಿಗರು ಮೇರು ಕವಿ ಎಂದರು.
ಕನ್ನಡ ವಿಶ್ವವಿದ್ಯಾನಿಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಎ. ವಿವೇಕ್ ರೈ ಅಧ್ಯಕ್ಷತೆ ವಹಿಸಿದ್ದರು. ಪೆರ್ನಾಜೆ ಸೀತಾರಾಘವ ಪ.ಪೂ. ಕಾಲೇಜ್ನ ಪ್ರಾಂಶುಪಾಲ ಕೆ.ಆರ್. ಗೋಪಾಲಕೃಷ್ಣ ಅಡಿಗ ಕವನಗುಂಜನ ಮಾಡಿದರು.
ವಸುಧಾ ಪ್ರತಿಷ್ಠಾನದ ಸಂಚಾಲಕ ಡಾ. ತಾಳ್ತಜೆ ವಸಂತ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಉಪನ್ಯಾಸಕ ಡಾ. ರೋಹಿಣಾಕ್ಷ ನಿರೂಪಿಸಿದರು.