ಕುಂಜತ್ತಬೈಲ್: ವಿದ್ಯುತ್ ಆಘಾತಕ್ಕೀಡಾಗಿದ್ದ ಇಬ್ಬರ ರಕ್ಷಣೆ
ಮಂಗಳೂರು, ಅ.21: ವಿದ್ಯುತ್ ಆಘಾತಕ್ಕೀಡಾಗಿ ಬಜ್ಪೆ ವಿಮಾನ ನಿಲ್ದಾಣ ರಸ್ತೆಯ ಕುಂಜತ್ತಬೈಲ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಇಬ್ಬರನ್ನು ಕೋಸ್ಟಲ್ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ.
ಬಾದಾಮಿಯ ನೀರ್ಲೆಕೇರಿ ಗ್ರಾಮದ ವೆಂಗಪ್ಪ (47) ಮತ್ತು ಸಿದ್ದಣ್ಣ (21) ರಕ್ಷಿಸಲ್ಪಟ್ಟವರು.
ಕೋಸ್ಟರ್ಲ್ಗಾರ್ಡ್ನ ಅಸಿಸ್ಟೆಂಟ್ ಕಮಾಂಡೆಂಟ್ ಅಭಿಷೇಕ್ ವಾಧ್ವಾ ಬುಧವಾರ ಬೆಳಗ್ಗೆ 10 ಗಂಟೆಗೆ ಬಜ್ಪೆ ವಿಮಾನ ನಿಲ್ದಾಣ ರಸ್ತೆಯಾಗಿ ವಾಹನದಲ್ಲಿ ತೆರಳುತ್ತಿದ್ದಾಗ ಕುಂಜತ್ತಬೈಲ್ ಬಳಿ ಇಬ್ಬರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ತಕ್ಷಣ ಅವರನ್ನು ರಿಕ್ಷಾದಲ್ಲಿ ಹಾಕಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ವೆಂಗಪ್ಪ ತೊಕ್ಕೊಟ್ಟು ಬಳಿ ವಾಸವಾಗಿದ್ದರೆ, ಸಿದ್ದಣ್ಣ ಬಂಟ್ವಾಳದಲ್ಲಿ ಸರಕಾರಿ ಪಾಲಿಟೆಕ್ನಿಕ್ನ ಡಿಪ್ಲೊಮಾ ವಿದ್ಯಾರ್ಥಿಯಾಗಿದ್ದಾನೆ. ಇಬ್ಬರೂ ಇದೀಗ ಚೇತರಿಸಿಕೊಂಡಿದ್ದು, ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಸಿದ್ದಣ್ಣ ಸಂಜೆ ಕಾಲೇಜಿಗೆ ಹೋಗುತ್ತಿದ್ದರೆ ಹಗಲು ಹೊತ್ತು ದುಡಿಯುತ್ತಿದ್ದರು ಎನ್ನಲಾಗಿದೆ. ವಿದ್ಯುತ್ ಆಘಾತಗೊಂಡು ಅಸ್ವಸ್ಥಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿರಬೇಕು ಎಂದು ಶಂಕಿಸಲಾಗಿದೆ. ಕೋಸ್ಟಲ್ಗಾರ್ಡ್ ಅಧಿಕಾರಿಯ ಮಾನವೀಯತೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.