ಪೊಲೀಯೊ ವಿರುದ್ಧ ಸೈಕಲ್ ಜಾಗೃತಿ
ಪಡುಬಿದ್ರೆ, ಅ. 22: ಅ.24ರಂದು ನಡೆಯುವ ವಿಶ್ವ ಪೋಲಿಯೊ ದಿನದ ಅಂಗವಾಗಿ 3182 ಇದರ ವಲಯ 5ರ ರೋಟರಿ ಮಾಜಿ ಉಪರಾಜ್ಯಪಾಲ ಗುರುರಾಜ್ ಪೋಲಿಯೊ ಮುಕ್ತ ಭಾರತ ಎಂಬ ಅಭಿಯಾನದಡಿ 110 ಕಿಮೀ ಸೈಕಲ್ ಜಾಥಾ ನಡೆಸಿದರು.
ಶಂಕರಪುರದಿಂದ ಮುಂಜಾನೆ ಆರಂಭಗೊಂಡ ಜಾಥಾವು ಮಣಿಪುರ, ಕಾರ್ಕಳ, ನಿಟ್ಟೆ, ಬೆಳ್ಮಣ್, ಪಡುಬಿದ್ರಿ, ಕಾಪು, ಶಿರ್ವ ಮೂಲಕ ಶಂಕರಪುರ ತಲು ಪಿದರು. ಪಡುಬಿದ್ರೆಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ರಮೀರ್ ಹುಸೈನ್, ಜಿಲ್ಲಾ ಪಂಚಾಯತ್ ಸದಸ್ಯ ಶಶಿಕಾಂತ್ ಪಡುಬಿದ್ರೆ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗುರುರಾಜ್, ಪೋಲಿಯೊ ರೋಗ ಒಂದು ರೀತಿ ವೈರಾಣುಗಳಿಂದ ಬರುತ್ತದೆ. ಇಡೀ ಜಗತ್ತಿನಲ್ಲಿ ಮೂರು ರಾಷ್ಟ್ರಗಳನ್ನು ಬಿಟ್ಟರೆ ಉಳಿದ ಎಲ್ಲಾ ದೇಶಗಳು ಪೋಲಿಯೊ ಮುಕ್ತವಾಗಿವೆ. ಭಾರತದಲ್ಲಿ ಇನ್ನು ಮುಂದಕ್ಕೆ ಪೋಲಿಯೊ ಬರದಂತೆ ತಡೆಗಟ್ಟುವುದು ನಮ್ಮೆಲ್ಲರ ಕರ್ತವ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಿಕಟಪೂರ್ವ ಅದ್ಯಕ್ಷ ಅಬ್ದುಲ್ ಹಮೀದ್, ಪೂರ್ವಾಧ್ಯಕ್ಷ ಬುಡಾನ್ ಸಾಹೇಬ್, ಕರುಣಾಕರ ನಾಯಕ್, ಸಂತೋಷ್ ಪಡುಬಿದ್ರೆ, ವೆಂಕಟೇಶ್ ಎಂ.ಟಿ, ಸುಧಾಕರ್ ಕಣ್ಣಂಗಾರ್ ಮುಂತಾದವರು ಉಪಸ್ಥಿತರಿದ್ದರು.