ನೇಣು ಬಿಗಿದು ಯುವಕ ಆತ್ಮಹತ್ಯೆ
ಪುತ್ತೂರು, ಅ. 23: ನಗರದ ಬೊಳುವಾರು ನಿವಾಸಿ ಸುಧೇಶ್ ಕೆ.ಪಿ. (30) ಸೋಮವಾರ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪುತ್ತೂರಿನಲ್ಲಿ ಎಸ್ಕೆಪಿ ಎಂಬ ತರಬೇತಿ ಸಂಸ್ಥೆ ನಡೆಸುತ್ತಿದ್ದ ಸುಧೇಶ್ ಅವರು ಈ ಸಂಸ್ಥೆಯ ಮೂಲಕ ಯುವಕರಿಗೆ ಶೈಕ್ಷಣಿಕ, ಬ್ಯಾಂಕಿಂಗ್ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಗಳನ್ನು ನೀಡುತ್ತಿದ್ದರು. ಇದರೊಂದಿಗೆ ಐಎಎಸ್ ಪರೀಕ್ಷೆಗೆ ಹಾಜರಾಗಿದ್ದರು. ಇದೆಲ್ಲದಕ್ಕೆ ತುಂಬಾ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ. ಯುಪಿಎಸ್ಸಿ ಪರೀಕ್ಷೆಯನ್ನು ಬರೆದಿದ್ದರು. ಹಿಂದಿನ ವರ್ಷ ಮುಖ್ಯ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ, ಸಂದರ್ಶನವನ್ನು ಎದುರಿಸಿದ್ದರು. ವೈಟಿಂಗ್ ಲಿಸ್ಟ್ನಲ್ಲಿ ಹೆಸರು ಕೂಡ ಬಂದಿತ್ತು. ರವಿವಾರ ಹಾಸನಕ್ಕೆ ತರಬೇತಿ ನೀಡಲೆಂದು ತೆರಳಿದ್ದ ಅವರು ಸೋಮವಾರ ಬೆಳಗ್ಗೆಯಷ್ಟೇ ಹಿಂದಿರುಗಿ ಮನೆಗೆ ಬಂದಿದ್ದರು.
ಮಧ್ಯಾಹ್ನ ತನ್ನ ರೂಂನ ಬಾಗಿಲು ಹಾಕಿಕೊಂಡಿದ್ದರು. ಸಾಮಾನ್ಯವಾಗಿ ಓದಲು ಕುಳಿತಾಗ ಹೀಗೆ ಬಾಗಿಲು ಹಾಕಿಕೊಳ್ಳುತ್ತಿದ್ದರು. ಆದರೆ ಸಂಜೆ ವೇಳೆಯೂ ಬಾಗಿಲು ತೆರೆಯದಾಗ ಸಂದೇಹ ಬಂದು ತಾಯಿ ಬಾಗಿಲು ಬಡಿದಿದ್ದಾರೆ. ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಸ್ಥಳೀಯರನ್ನು ಕರೆದಿದ್ದಾರೆ. ಬಾಗಿಲು ಮುರಿದು ಒಳ ಪ್ರವೇಶಿಸಿದ್ದು, ಈ ಸಂದರ್ಭ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.