ಕಾರ್ಕಳದಲ್ಲೂ ಕೂಂಬಿಂಗ್ ಕಾರ್ಯಾಚರಣೆ
Update: 2017-10-26 16:47 GMT
ಉಡುಪಿ, ಅ.26: ಪ್ರಧಾನಿ ನರೇಂದ್ರ ಮೋದಿ ಧರ್ಮಸ್ಥಳಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಕೂಂಬಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
ಇಂದು ಕಾರ್ಕಳ ತಾಲೂಕಿನ ಹೊಸ್ಮಾರು- ನಾರಾವಿ-ಮುಳಿಕಾರು ಭಾಗದಲ್ಲಿ ಬೆಳಗ್ಗೆ 6:30ರಿಂದ ಕೂಂಬಿಂಗ್ ನಡೆಸಲಾಗುತ್ತಿದೆ ಎಂದು ಎಎನ್ಎಫ್ ಮೂಲಗಳು ತಿಳಿಸಿವೆ. ಒಟ್ಟು ಎಂಟು ಎಎನ್ಎಫ್ ತಂಡಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿವೆ.
ಒಂದೊಂದು ತಂಡಗಳಲ್ಲೂ 10 ಮಂದಿ ಸಿಬ್ಬಂದಿ, ಸಹಾಯಕ ಕಮಾಂಡೆಂಟ್, ಇನ್ಸ್ಪೆಕ್ಟರ್, ಎಸ್ಐಗಳು ಇದ್ದು ಕೂಂಬಿಂಗ್ನಲ್ಲಿ ನಿರತರಾಗಿದ್ದಾರೆ. ಮೋದಿ ಅವರು ಅ.29ರಂದು ಧರ್ಮಸ್ಥಳಕ್ಕೆ ಆಗಮಿಸಲಿದ್ದು, ಅ.28 ಮತ್ತು 29ರಂದು ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ಸಹ ತಪಾಸಣೆಗೆ ಒಳಪಡಿಸಲಾಗುವುದು ಎಂದು ಈ ಮೂಲಗಳು ತಿಳಿಸಿವೆ. ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಹಾಗೂ ಆಸುಪಾಸಿನಲ್ಲಿ ಕೂಂಬಿಂಗ್ ನಡೆಯುತ್ತಿದೆ.