ಹವಾಮಾನ ಬದಲಾವಣೆ: ಬೆಂಗಳೂರಿನಲ್ಲಿ ಅಧಿಕವಾದ ಆರೋಗ್ಯ ಸಂಬಂಧಿ ಪ್ರಕರಣಗಳು

Update: 2018-11-26 15:42 GMT

ಬೆಂಗಳೂರು, ನ.26: ನಗರದಲ್ಲಿ ಪ್ರತಿದಿನವೂ ಹವಾಮಾನ ಬದಲಾಗುತ್ತಿದ್ದು, ತಾಪಮಾನದ ಏರಿಳಿತವಾಗುತ್ತಿದೆ. ಇದರಿಂದಾಗಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರಿದ್ದು, ಕಳೆದ ಹದಿನೈದು ದಿನಗಳಿಂದ ನಗರದಲ್ಲಿ ಜ್ವರ, ಗಂಟಲು ನೋವು ಸೇರಿದಂತೆ ಆರೋಗ್ಯ ಸಂಬಂಧಿ ರೋಗಗಳ ಪ್ರಕರಣಗಳ ಸಂಖ್ಯೆ ಅಧಿಕವಾಗಿದೆ.

ಮೋಡ ಕವಿದ ವಾತಾವರಣದ ಜತೆಗೆ ಚಳಿ ಗಾಳಿ ಬೀಸುತ್ತಿದೆ. ಇದರಿಂದ ನಗರದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಹೆಚ್ಚಿದ್ದು, ಇವರಲ್ಲಿ ಬಹುತೇಕರು ಶ್ವಾಸಕೋಶ ಸಂಬಂಧಿ ಸಮಸ್ಯೆ ಹೊಂದಿದವರಾಗಿದ್ದಾರೆ. ನಿತ್ಯ 10ರಲ್ಲಿ 5-6 ಮಂದಿ ಗಂಟಲು ನೋವು, ನೆಗಡಿ, ಕೆಮ್ಮು, ತಲೆನೋವು, ಮೈ ಕೈ ನೋವು, ಅಲರ್ಜಿ, ಅಸ್ತಮಾ, ಕಿವಿ ಸೋಂಕುಗಳಿಂದ ಹಿರಿಯ ಕಿರಿಯರು ಎನ್ನದೆ ವಿವಿಧ ವಯೋಮಾನದವರು ಬಳಲುತ್ತಿದ್ದಾರೆ. ಮುಂಜಾಗ್ರತೆ ವಹಿಸದ ಕಾರಣ ಶ್ವಾಸಕೋಶ ಸಮಸ್ಯೆ ಹೊಂದಿರುವವರು ಸಿಪಿಒಡಿ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ವೈದ್ಯರು ಹೇಳುತ್ತಿದ್ದಾರೆ.

ನಗರದ ವಿಕ್ಟೋರಿಯಾ, ಕೆ.ಸಿ.ಜನರಲ್, ಬೌರಿಂಗ್ ಮತ್ತು ಲೇಡಿ ಕರ್ಜನ್ ಸೇರಿದಂತೆ ನಾನಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವವರಲ್ಲಿ ಶೇ.30-40ರಷ್ಟು ಜನರು ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇನ್ನು ಮಕ್ಕಳ ಆಸ್ಪತ್ರೆಯಾದ ವಾಣಿವಿಲಾಸ ಹಾಗೂ ಇಂದಿರಾಗಾಂಧಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಮಕ್ಕಳು ವಿವಿಧ ವೈರಾಣು ಜ್ವರಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿಯೂ ಶೇ. 20-25ರಷ್ಟು ಮಕ್ಕಳು ಎಚ್1ಎನ್1 ರೋಗ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ವೈದ್ಯರು ಹೇಳಿದ್ದು, ಇದಕ್ಕೆ ಹವಾಮಾನ ಬದಲಾವಣೆ ಹಾಗೂ ವಾತಾವರಣದಲ್ಲಿನ ಧೂಳು ಪ್ರಮುಖ ಕಾರಣವಾಗಿದೆ ಎಂದು ಅಂದಾಜಿಸಲಾಗಿದೆ.

ಚಿಕಿತ್ಸೆಗೆ ಬರುವ ಹೆಚ್ಚಿನ ರೋಗಿಗಳಲ್ಲಿ ಜ್ವರ ಮತ್ತು ಮೈ ಕೈ ನೋವು ಕುರಿತು ಮಾಹಿತಿ ನೀಡುತ್ತಾರೆ. ಆದರೆ ಉಸಿರಾಟದ ತೊಂದರೆ ಇರುವ ಬಗ್ಗೆ ತಿಳಿಸುವುದೇ ಇಲ್ಲ. ಇದರಿಂದ ರೋಗ ಶೀಘ್ರ ಪತ್ತೆಗೆ ತೊಂದರೆ ಆಗುತ್ತಿದೆ. ಆರಂಭದಲ್ಲೆ ರೋಗ ಎಲ್ಲ ಲಕ್ಷಣಗಳನ್ನು ತಿಳಿಸಿದರೆ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ. ಇದರಿಂದ ರೋಗ ಉಲ್ಬಣಿಸುವುದಿಲ್ಲ ಜತೆಗೆ ಎಲ್ಲರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡುವ ಅಗತ್ಯ ಇರುವುದಿಲ್ಲ ಎಂದು ತಜ್ಞರು ಅಭಿಪ್ರಾಯಿಸಿದ್ದಾರೆ.

ಪ್ರತಿದಿನ 80-90 ಮಂದಿಯನ್ನು ಪರೀಕ್ಷೆ ಮಾಡಿದಾಗ ಅವರಲ್ಲಿ 5 ರಿಂದ 10 ಮಂದಿ ಶ್ವಾಸಕೋಶ ಹಾಗೂ ಉಸಿರಾಟದ ತೊಂದರೆ ಹೊಂದಿರುವುದು ಕಂಡು ಬರುತ್ತಿದೆ. ಜನರು ರೋಗ ಲಕ್ಷಣದ ಬಗ್ಗೆ ಜಾಗೃತಿ ಹೊಂದಿರಬೇಕು. ಯಾರಿಗಾದರೂ ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡರೆ ಕೂಡಲೇ ವೈದ್ಯರಲ್ಲಿ ಚಿಕಿತ್ಸೆ ಪಡೆಯಬೇಕು. ಸೋಂಕು ಮತ್ತೊಬ್ಬರಿಗೆ ಹರಡದಂತೆ ಎಚ್ಚರ ವಹಿಸುವುದರೊಂದಿಗೆ ಸಂಪೂರ್ಣ ಗುಣ ಹೊಂದುವವರೆಗೂ ಮನೆಯಲ್ಲಿದ್ದು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯ ಡಾ.ಸುದರ್ಶನ ಬಲ್ಲಾಳ್ ಸಲಹೆ ನೀಡಿದ್ದಾರೆ.

ಮುನ್ನೆಚ್ಚರಿಕಾ ಕ್ರಮಗಳು:

- ಎಲ್ಲ ವಯೋಮಾನದವರೂ ಬೆಚ್ಚನೆಯ ಉಡುಪು ಧರಿಸಬೇಕು.

- ಬಿಸಿ ಮತ್ತು ತಾಜಾ ಆಹಾರವನ್ನು ಸೇವನೆ ಮಾಡಬೇಕು.

- ಕುದಿಸಿದ ನೀರನ್ನು ಕುಡಿಯಬೇಕು.

- ಕೆಮ್ಮುವಾಗ, ಸೀನುವಾಗ ಕರವಸ್ತ್ರವನ್ನು ಬಳಕೆ ಮಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News