ಹೃದಯಾಘಾತವಾಗಿ ಮೃತಪಟ್ಟರೂ ವಿಮಾ ಕಂಪೆನಿ ಪರಿಹಾರ ನೀಡಬೇಕು: ಹೈಕೋರ್ಟ್

Update: 2018-12-29 14:53 GMT

ಬೆಂಗಳೂರು, ಡಿ.29: ಉದ್ಯೋಗದ ಸಮಯದಲ್ಲಿ ಅಪಘಾತದಿಂದ ಮಾತ್ರವಲ್ಲದೆ ಹೃದಯಘಾತ ಸಂಭವಿಸಿ ಸಾವನ್ನಪ್ಪಿದರೂ ಉದ್ಯೋಗಿಗೆ ಪರಿಹಾರವನ್ನು ವಿಮಾ ಕಂಪೆನಿಯೇ ನೀಡಬೇಕೆಂದು ಹೈಕೋರ್ಟ್ ಆದೇಶ ಹೊರಡಿಸಿದೆ. 

ಅಂಜನ್‌ ಕುಮಾರ್ ಎಂಬ ಲಾರಿ ಚಾಲಕ ಉದ್ಯೋಗದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಪ್ರಕರಣದಲ್ಲಿ ಆತನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ವಿಮಾ ಕಂಪೆನಿಯೊಂದು ನಿರಾಕರಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾಹನ ಅಪಘಾತ ಸಂಭವಿಸಿದರೆ ಮಾತ್ರ ಪರಿಹಾರ ಕಲ್ಪಿಸಲು ವಿಮಾ ಕಂಪೆನಿ ಹೊಣೆಯಾಗುತ್ತದೆ. ಹೃದಯಾಘಾತದಿಂದ ಸಾವನ್ನಪ್ಪಿದಾಗ ಚಾಲಕನ ಕುಟುಂಬಕ್ಕೆ ಪರಿಹಾರ ಕಲ್ಪಿಸಲು ತಾನು ಹೊಣೆಗಾರನಾಗುವುದಿಲ್ಲ ಎಂದು ವಿಮಾ ಕಂಪೆನಿ ಪ್ರತಿಪಾದಿಸಿತ್ತು.

ಈ ವಾದವನ್ನು ಸಾರಾಸಗಟಾಗಿ ತಿರಸ್ಕರಿಸಿದ ಹೈಕೋರ್ಟ್, ಡ್ರೈವರ್ ಕೆಲಸ ತುಂಬಾ ಒತ್ತಡದ ಉದ್ಯೋಗ, ಟಯರ್ ಪಂಕ್ಟರ್ ಆಗಿದ್ದರಿಂದ ಚಾಲಕ ಅಂಜನ್‌ ಕುಮಾರ್ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದಾಗ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ್ದಾನೆ. ಆತನ ಆ ದಿನದ ಕೆಲಸ ಪೂರ್ಣಗೊಂಡಿರಲಿಲ್ಲ. ಹೀಗಾಗಿ, ಇದು ಉದ್ಯೋಗದ ಸಮಯದಲ್ಲಿಯೇ ಸಾವು ಸಂಭವಿಸಿದ ಪ್ರಕರಣ ಎಂಬುದಾಗಿ ಪರಿಗಣಿಸಬೇಕಿದೆ ಎಂದು ಹೈಕೋರ್ಟ್ ತೀರ್ಮಾನಿಸಿತು. ಅಲ್ಲದೆ, ಅಂಜನ್ ಕುಮಾರ್ ಡ್ರೈವರ್ ಆಗಿ ಉದ್ಯೋಗ ಮಾಡುತ್ತಿದ್ದಾಗ ಅಪಘಾತ ನಡೆದು ಗಾಯಗೊಂಡು ಸಾವನ್ನಪ್ಪಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಹೃದಯಾಘಾತವು ಒಂದು ಸಹಜ ಪ್ರಕ್ರಿಯೆ. ಹೀಗಾಗಿ, ಇದೊಂದು ಸಹಜ ಸಾವು ಎಂದು ವಿಮಾ ಕಂಪೆನಿ ಮಂಡಿಸಿದ ವಾದ ಒಪ್ಪಲಾಗದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಕಾರ್ಮಿಕ ಆಯುಕ್ತರ ಆದೇಶದಲ್ಲಿ ಮಧ್ಯಪ್ರವೇಶಿಸಲು ಸಕಾರಣ ಕಂಡುಬರುತ್ತಿಲ್ಲ ಎಂದು ತಿಳಿಸಿ ವಿಮಾ ಕಂಪೆನಿಯ ಮೇಲ್ಮನವಿ ವಜಾಗೊಳಿಸಿತು. ಹಾಗೆಯೇ ಅಂಜನ್‌ ಕುಮಾರ್ ಕುಟುಂಬ ಸದಸ್ಯರನ್ನು ಗುರುತಿಸಿ ಅವರ ಹೆಸರಿನಲ್ಲಿ ಕಾರ್ಮಿಕ ಆಯುಕ್ತರು ಘೋಷಿಸಿದ ಪರಿಹಾರ ಮೊತ್ತ ಠೇವಣಿ ಇರಿಸುವಂತೆ ವಿಮಾ ಕಂಪೆನಿಗೆ ಆದೇಶಿಸಿದೆ.

ಪ್ರಕರಣವೇನು: ಮುಝೀಬ್‌ ಖಾನ್ ಎಂಬವರ ಬಳಿ ಚಿತ್ರದುರ್ಗದ ಹೊಸ ಟೌನ್ ನಿವಾಸಿ ಅಂಜನ್ ಕುಮಾರ್ ಲಾರಿ ಚಾಲಕರಾಗಿದ್ದರು. 2007ರಲ್ಲಿ ಕಬ್ಬಿಣದ ಅದಿರು ಹೊತ್ತು ನುಗ್ಗೇನಹಳ್ಳಿಯಿಂದ ಮಂಗಳೂರಿಗೆ ಕೊಂಡೊಯ್ಯುತ್ತಿದ್ದ ವೇಳೆ ಬೈರಾಪುರ ಬಳಿ ಲಾರಿ ಪಂಕ್ಚರ್ ಆಗಿತ್ತು. ಇದರಿಂದ ಲಾರಿಯನ್ನು ರಸ್ತೆ ಬದಿ ನಿಲ್ಲಿಸಿದ್ದ ಅಂಜನ್ ಕುಮಾರ್, ಸಮೀಪದ ಹೊಟೇಲ್‌ನಲ್ಲಿ ಆಹಾರ ಸೇವಿಸಿ, ಅಲ್ಲಿನ ಮರವೊಂದರ ಬುಡದಲ್ಲಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದರು.

ಪ್ರಕರಣದಲ್ಲಿ ಪರಿಹಾರ ಕಲ್ಪಿಸಲು ಲಾರಿ ಮಾಲಕ ಹಾಗೂ ವಿಮಾ ಕಂಪೆನಿಗೆ ಆದೇಶಿಸುವಂತೆ ಕೋರಿ ಮೃತನ ಪತ್ನಿ ರೇಣುಕಮ್ಮ ಕಾರ್ಮಿಕ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು. ಅಂಜನ್‌ ಕುಮಾರ್ ಉದ್ಯೋಗದ ಸಮಯದಲ್ಲಿ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿದ ಕಾರಣ ಆತನ ಕುಟುಂಬದವರಿಗೆ ವಾರ್ಷಿಕ ಶೇ.12ರಷ್ಟು ಬಡ್ಡಿದರದಲ್ಲಿ ಒಟ್ಟು 3,84,280ರೂ.ಪರಿಹಾರ ನೀಡುವಂತೆ ಪ್ರಕರಣದಲ್ಲಿ ವಿಮಾ ಕಂಪೆನಿಯಾಗಿದ್ದ ನ್ಯಾಷನಲ್ ಇನ್ಷೂರೆನ್ಸ್ ಕಂಪೆನಿ ಲಿಮಿಟೆಡ್‌ಗೆ ಸೂಚಿಸಿ 2010ರ ಎ.13ರಂದು ಕಾರ್ಮಿಕ ಆಯುಕ್ತರು ಆದೇಶಿಸಿದ್ದರು. ಈ ಆದೇಶ ಪ್ರಶ್ನಿಸಿ ವಿಮಾ ಕಂಪೆನಿ ಹೆಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News