ವಿದ್ಯಾರ್ಥಿಗಳನ್ನು ಪ್ರೇರೇಪಿಸುವುದು ಅಧ್ಯಾಪಕರ ಕರ್ತವ್ಯ: ಪ್ರೊ.ಎನ್.ಆರ್.ಶೆಟ್ಟಿ
ಬೆಂಗಳೂರು, ಫೆ.1: ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯನ್ನು ಉದ್ದೀಪಿಸುವುದು ಹಾಗೂ ನವನವೀನ ಮೂಡುವಂತೆ ಪ್ರೇರೇಪಿಸುವುದು ಅಧ್ಯಾಪಕದ ಅತಿಮುಖ್ಯ ಕರ್ತವ್ಯವಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ.ಎನ್.ಆರ್.ಶೆಟ್ಟಿ ಹೇಳಿದ್ದಾರೆ.
ನಗರದ ಯಲಹಂಕ ಬಳಿಯಿರುವ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ವೈಮಾನಿಕ ತಂತ್ರಜ್ಞಾನ ವಿಭಾಗದ ಫಾಲ್ಕನ್ ವಿದ್ಯಾರ್ಥಿ ಸಂಘಟನೆಯಿಂದ ಆಯೋಜಿಸಿದ್ದ ‘ಉಡಾನ್-2019’ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಆಕಾಶದಲ್ಲಿ ಗಿಡುಗ ಪಕ್ಷಿ ತೀವ್ರತೆಯಿಂದ ಬೇಟೆಯನ್ನು ಹುಡುಕುತ್ತಾ ಇರುತ್ತದೆ. ಬೇಟೆ ಸಿಗುವುದು ಖಚಿತವಾದ ಕೂಡಲೇ ಕ್ಷಣದಲ್ಲಿ ಕೆಳಗಿಳಿದು ತನ್ನ ಆಹಾರವನ್ನು ಆರಿಸಿಕೊಂಡು ಹೋಗುತ್ತದೆ. ಅದೇ ರೀತಿಯಲ್ಲಿ ತಂತ್ರಜ್ಞಾನದ ವಿದ್ಯಾರ್ಥಿಗಳೂ ಸದಾ ತಮ್ಮ ಮನದಲ್ಲಿ ಹೊಸದಾದ ಆವಿಷ್ಕಾರಗಳ ಕಡೆಗೆ ಕೇಂದ್ರೀಕರಿಸಿಕೊಂಡಿರಬೇಕು ಎಂದು ನುಡಿದರು.
ಕಾರ್ಯಕ್ರಮದಲ್ಲಿ ನಗರದ ಹಲವಾರು ಎಂಜಿಯರಿಂಗ್ ಕಾಲೇಜುಗಳಿಂದ ವಿದ್ಯಾರ್ಥಿಗಳು ವೈಮಾನಿಕ ತಂತ್ರಜ್ಞಾನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಏರ್ ಏಷಿಯಾದ ಹಿರಿಯ ಪೈಲೆಟ್ ಹಾಗೂ ತರಬೇತಿದಾರ ಕ್ಯಾಪ್ಟನ್ ಅನಿಲ್ ರಾವ್, ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್ ಪಾಲ್ಗೊಂಡಿದ್ದರು.