ವಾಯು ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ: ಗೃಹ ಸಚಿವ ಎಂ.ಬಿ ಪಾಟೀಲ್
ಬೆಂಗಳೂರು, ಫೆ.26: ಪುಲ್ವಾಮ ದಾಳಿಗೆ ಭಾರತೀಯ ವಾಯು ಸೇನೆ ಸೂಕ್ತ ಪ್ರತ್ಯುತ್ತರ ನೀಡಿದೆ ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮಂಗಳವಾರ ಇಲ್ಲಿನ ಸದಾಶಿವನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 12 ಯುದ್ಧ ವಿಮಾನಗಳು ಪಾಕ್ ಆಕ್ರಮಿತ ಕಾಶ್ಮೀರ ಭಾಗಕ್ಕೆ ತೆರಳಿ ಬಾಂಬ್ ದಾಳಿ ನಡೆಸಿ ಸುರಕ್ಷಿತವಾಗಿ ವಾಪಸಾಗಿದ್ದಾರೆ. ಒಂದು ಸಾವಿರ ಕೆಜಿ ಪ್ರಮಾಣದ ಬಾಂಬ್ ಎಸೆದು ಉಗ್ರರನ್ನು ನಾಶಪಡಿಸಿದ್ದಾರೆ. ನಮ್ಮ ಯೋಧರ ಪ್ರಾಣ ತ್ಯಾಗಕ್ಕೆ ಸೂಕ್ತ ಪ್ರತೀಕಾರ ತೀರಿಸಿದಂತಾಗಿದೆ ಎಂದರು.
ದಾಳಿ ಬಗ್ಗೆ ರಕ್ಷಣಾ ಇಲಾಖೆ ಹೆಚ್ಚಿನ ಮಾಹಿತಿ ನೀಡಬೇಕು. ನಾನು ದಾಳಿ ಬಗ್ಗೆ ಮಾಧ್ಯಮಗಳಿಂದ ತಿಳಿದಿದ್ದೇನೆ. ಭಾರತೀಯ ವಾಯುಸೇನೆ ಜೈಶ್ ಎ ಸಂಘಟನೆ ತಾಣಗಳ ಮೇಲೆ ದಾಳಿ ಮಾಡಿದೆ. ವಾಯು ಸೇನೆ ದಾಳಿ ನಡೆಸಿರುವ ಸಂಬಂಧ ವಿದೇಶಾಂಗ ಸಚಿವಾಲಯ ಕೂಡ ಸ್ಪಷ್ಟನೆ ನೀಡಿದೆ ಎಂದು ತಿಳಿಸಿದರು.
ಫೆ.14 ರಂದು ಪುಲ್ವಾಮಾದಲ್ಲಿ ಭಾರತೀಯರ ಯೋಧರ ಮೇಲೆ ದಾಳಿ ಆಗಿತ್ತು. ಈ ಘಟನೆಯನ್ನು ಇಡೀ ದೇಶವೇ ವಿರೋಧಿಸಿತ್ತು. ಅಲ್ಲದೆ, ಪಾಕಿಸ್ತಾನ ಭಯೋತ್ಪಾದನೆ ಬೆಂಬಲಿಸುವ ರಾಷ್ಟ್ರವಾಗಿದೆ. ಇದಕ್ಕೆ ಹಲವು ಉದಾಹರಣೆಗಳಿವೆ ಎಂದು ಹೇಳಿದರು.