ಮಾ.8ರಿಂದ ಉರ್ದು ಅಕಾಡೆಮಿಯ ವಿಚಾರ ಸಂಕಿರಣ: ಅಕಾಡೆಮಿ ಅಧ್ಯಕ್ಷ ಮುಬೀನ್ ಮುನವ್ವರ್

Update: 2019-03-07 13:12 GMT

ಬೆಂಗಳೂರು, ಮಾ.7: ಚಿಕ್ಕಬಳ್ಳಾಪುರ, ಬೆಂಗಳೂರು ಹಾಗೂ ಮೈಸೂರು ಜಿಲ್ಲೆಗಳಲ್ಲಿ ಮಾ.8 ರಿಂದ 10ರವರೆಗೆ ಕವಿಗೋಷ್ಠಿ ಹಾಗೂ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ರಾಜ್ಯ ಉರ್ದು ಅಕಾಡೆಮಿ ಅಧ್ಯಕ್ಷ ಮುಬೀನ್ ಮುನವ್ವರ್ ತಿಳಿಸಿದರು.

ಗುರುವಾರ ನಗರದ ರಿಚ್ಮಂಡ್ ರಸ್ತೆಯಲ್ಲಿರುವ ಉರ್ದು ಅಕಾಡೆಮಿಯ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಾ.8ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕಬಳ್ಳಾಪುರದ ಅಲೀಪುರದಲ್ಲಿ ಆಯೋಜಿಸಿರುವ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣವನ್ನು ಮೌಲಾನ ಸೈಯ್ಯದ್ ಮುಹಮ್ಮದ್ ಅಲಿ ಆಬಿದಿ ಉದ್ಘಾಟಿಸಲಿದ್ದು, ಕೆನಡಾ ದೇಶದ ಕವಿ ಹಾಗೂ ಹೃದ್ರೋಗ ತಜ್ಞ ಡಾ.ಸೈಯ್ಯದ್ ತಾಖಿ ಆಬಿದಿ ವಿಷಯ ಮಂಡನೆ ಮಾಡಲಿದ್ದಾರೆ ಎಂದರು.

ಬೆಂಗಳೂರಿನ ಇನ್ಫೆಂಟ್ರಿ ರಸ್ತೆಯಲ್ಲಿರುವ ಗುಲಿಸ್ತಾನ್ ಶಾದಿ ಮಹಲ್‌ನಲ್ಲಿ ಮಾ.9ರಂದು ಬೆಳಗ್ಗೆ 10.30ಕ್ಕೆ ಆಯೋಜಿಸಿರುವ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣವನ್ನು ಮೌಲಾನ ಸೈಯ್ಯದ್ ತನ್ವೀರ್ ಹಾಶ್ಮಿ ಉದ್ಘಾಟಿಸಲಿದ್ದು, ಡಾ.ಸೈಯ್ಯದ್ ತಾಖಿ ಆಬಿದಿ ವಿಷಯ ಮಂಡನೆ ಮಾಡಲಿದ್ದಾರೆ. ಅಲ್ಲದೇ ಇದೇ ವೇಳೆ ಸದಖ್ತಾ ಎಂಬ ಪುಸ್ತಕವನ್ನು ಲೋಕಾರ್ಪಣೆಗೊಳಿಸಲಾಗುವುದು ಎಂದು ಅವರು ಹೇಳಿದರು.

ರಾತ್ರಿ 9.30ಕ್ಕೆ ಆಯೋಜಿಸಿರುವ ಕವಿಗೋಷ್ಠಿಯಲ್ಲಿ ನಮ್ಮ ರಾಜ್ಯ ಹಾಗೂ ದೇಶದ ವಿವಿಧ ಭಾಗಗಳ ಕವಿಗಳು ಪಾಲ್ಗೊಳ್ಳಲಿದ್ದಾರೆ. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ನಾನು ವಹಿಸಲಿದ್ದು, ಶಫಿಕ್ ಆಬಿದಿ ಸಂಚಾಲಕರಾಗಿರುತ್ತಾರೆ ಎಂದು ಮುಬೀನ್ ಮುನವ್ವರ್ ತಿಳಿಸಿದರು.

ಮೈಸೂರಿನ ಸಯ್ಯಜಿ ರಾವ್ ರಸ್ತೆಯಲ್ಲಿರುವ ಮುಸ್ಲಿಮ್ ಕೋ ಆಪರೇಟಿವ್ ಬ್ಯಾಂಕ್‌ನ ಸಭಾಂಗಣದಲ್ಲಿ ಮಾ.10ರಂದು ಆಯೋಜಿಸಿರುವ ಕವಿಗೋಷ್ಠಿ ಹಾಗೂ ವಿಚಾರ ಸಂಕಿರಣದ ಸಾನಿಧ್ಯವನ್ನು ಮೈಸೂರಿನ ಖಾಝಿ ಹಝ್ರತ್ ಮೌಲಾನ ಮುಹಮ್ಮದ್ ಉಸ್ಮಾನ್ ಶರೀಫ್ ವಹಿಸಲಿದ್ದು, ಶಾಸಕ ತನ್ವೀರ್ ಸೇಠ್ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಉರ್ದು ಅಕಾಡೆಮಿಯ ಒಂದು ಗ್ರಂಥಾಲಯ, ಕಲಿಕಾ ಕೇಂದ್ರ ಹಾಗೂ ಡಿಟಿಪಿ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದ್ದು, ಚಿಕ್ಕಬಳ್ಳಾಪುರದಲ್ಲಿ ಸಚಿವ ಶಿವಶಂಕರರೆಡ್ಡಿ 5 ಲಕ್ಷ ರೂ., ಚನ್ನಗಿರಿಯಲ್ಲಿ ಜಬ್ಬಾರ್ ಖಾನ್ 5 ಲಕ್ಷ ರೂ. ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ಅದೇ ರೀತಿ, ಮೈಸೂರಿನ ಮೇಯರ್ ಹಾಗೂ ಉಪಮೇಯರ್ ಒಂದು ನಿವೇಶನ, ರಾಯಚೂರು ಸಂಸದ ಬಿ.ವಿ.ನಾಯಕ್ 10 ಲಕ್ಷ ರೂ., ಕೋಲಾರ ಸಂಸದ ಕೆ.ಎಚ್.ಮುನಿಯಪ್ಪ 10 ಲಕ್ಷ ರೂ., ಹಾನಗಲ್ ತಾಲೂಕಿಗೆ ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಮಾನೆ 10 ಲಕ್ಷ ರೂ.ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಬೀನ್ ಮುನವ್ವರ್ ಹೇಳಿದರು. 

ಸದಸ್ಯರ ನಾಮನಿರ್ದೇಶನ

ಉರ್ದು ಭಾಷೆಗೆ ಸಲ್ಲಿಸಿರುವ ಸೇವೆ ಮತ್ತು ಬದ್ಧತೆಯನ್ನು ಮಾನದಂಡವನ್ನಾಗಿ ಆಧರಿಸಿ ಫೆ.8ರಂದು ರಾಜ್ಯ ಉರ್ದು ಅಕಾಡೆಮಿಯ ಸರ್ವ ಸದಸ್ಯರ ಸಭೆಯಲ್ಲಿ ಆಯ್ಕೆ ಮಾಡಲಾದ ಚಿಕ್ಕಬಳ್ಳಾಪುರ ಜಿಲ್ಲೆಯ ಮುನೀರ್ ಅಹ್ಮದ್, ಬಾಗಲಕೋಟೆ ಜಿಲ್ಲೆಯ ಸಾದಿಖ್‌ಲಾಲ್ ಸಾಬ್ ಬಂಟನೂರ, ಬೀದರ್ ಜಿಲ್ಲೆಯ ಮುಹಮ್ಮದ್ ಸಾಜಿದ್ ಪಾಷ ಹಾಗೂ ಗುಲ್ಬರ್ಗ ಜಿಲ್ಲೆಯ ಡಾ.ಮುಹಮ್ಮದ್ ಮಜೀದ್ ಅಲಿ ಧಾಗಿಯನ್ನು ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News