ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ

Update: 2019-04-03 16:45 GMT

ಬೆಂಗಳೂರು, ಎ3: ಮದ್ಯ ಸೇವನೆ ವಿಚಾರವಾಗಿ ವ್ಯಕ್ತಿಯೋರ್ವನನ್ನು ಕೊಲೆ ಮಾಡಿರುವ ದುರ್ಘಟನೆ ಇಲ್ಲಿನ ಜಾಲಹಳ್ಳಿಯ ರಾಮಚಂದ್ರಾಪುರದಲ್ಲಿ ನಡೆದಿದೆ.

ನಗರದ ರಾಮಚಂದ್ರಾಪುರದ ದೇವ್‌ಪ್ರಸಾದ್(36) ಕೊಲೆಯಾದ ವ್ಯಕ್ತಿ ಎಂದು ತಿಳಿದುಬಂದಿದೆ. ಹಲ್ಲೆ, ಕೊಲೆ ಪ್ರಕರಣ ಸಂಬಂಧ ಆರೋಪಿ ಶ್ರೀನಿವಾಸಮೂರ್ತಿ ಎಂಬಾತನನ್ನು ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಬಂಧಿಸಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಕಲಾಕೃಷ್ಣಾ ಸ್ವಾಮಿ ತಿಳಿಸಿದ್ದಾರೆ.

ದೇವ್‌ಪ್ರಸಾದ್ ಹಾಗೂ ಶ್ರೀನಿವಾಸಮೂರ್ತಿ ಹತ್ತುವರ್ಷಗಳಿಂದ ಸ್ನೇಹಿತರಾಗಿದ್ದರು. ಇಬ್ಬರು ಜೊತೆಯಲ್ಲೇ ಕೆಲಸಕ್ಕೆ ಹೋಗುತ್ತಿದ್ದರು. ಎ.1ರಂದು ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಇಬ್ಬರು ಬೆಳಗ್ಗೆ 11ರ ವೇಳೆ ಮದ್ಯಪಾನ ಮಾಡಲು ಹೋಗಿದ್ದಾರೆ.

ಮದ್ಯ ತರಲು ಶ್ರೀನಿವಾಸಮೂರ್ತಿ 500 ರೂ.ಗಳನ್ನು ಕೊಟ್ಟು ದೇವ್‌ಪ್ರಸಾದ್‌ನನ್ನು ಮದ್ಯದಂಗಡಿಗೆ ಕಳುಹಿಸಿದ್ದ. ಮದ್ಯ ತೆಗೆದುಕೊಂಡು ಬಂದ ನಂತರ ಇಬ್ಬರು ಸೇರಿ ಕುಡಿದು ಅಮಲಿನಲ್ಲಿ ಮದ್ಯ ಖರೀದಿಸಿ ಉಳಿದ ಚಿಲ್ಲರೆ ಹಣದ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

ಜಗಳ ವಿಕೋಪಕ್ಕೆ ತಿರುಗಿದಾಗ ದೇವ್‌ಪ್ರಸಾದ್‌ಗೆ ದೊಣ್ಣೆಯಿದ ಹೊಡೆದು ಮುಖಕ್ಕೆ ಬಲವಾಗಿ ಶ್ರೀನಿವಾಸಮೂರ್ತಿ ಗುದ್ದಿದ್ದ ಪರಿಣಾಮ ಮೂಗಿನಿಂದ ರಕ್ತ ಸೋರಿಕೆಯಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಸಂಬಂಧ ವಿದ್ಯಾರಣ್ಯಪುರ ಠಾಣಾ ಪೊಲೀಸರು ಸ್ಥಳಕ್ಕೆ ಧಾವಿಸಿ, ಆರೋಪಿಯನ್ನು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News