‘ಸಾಲಮನ್ನಾ ಯೋಜನೆ’ ಬಗ್ಗೆ ಸುಮಲತಾ ಹೇಳಿಕೆಗೆ ಸಿಎಂ ಆಕ್ಷೇಪ

Update: 2019-04-05 16:18 GMT

ಬೆಂಗಳೂರು, ಎ.5: ರೈತರ ಸಾಲಮನ್ನಾ ಕುರಿತು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಹಣಕಾಸು ಇಲಾಖೆ ಅಧಿಕಾರಿಗಳು ರೈತರ ಸಾಲಮನ್ನಾ ಯೋಜನೆ ಜಾರಿಗೆ ತರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎನ್ನಲಾದ ಅವರ ಹೇಳಿಕೆಯು ಸತ್ಯಕ್ಕೆ ದೂರವಾದುದು. ಈ ಬಗ್ಗೆ ಸ್ವತಃ ಹಣಕಾಸು ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳೇ ಸ್ಪಷ್ಟಪಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಬಗ್ಗೆ ನಾನು ಕೂಡ ಅವರೊಂದಿಗೆ ಚರ್ಚಿಸಿದ್ದು ತಾವು ಅಂಥ ಮಾತುಗಳನ್ನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪಕ್ಷೇತರ ಅಭ್ಯರ್ಥಿಯು ಇಂತಹ ಗೊಂದಲಕಾರಿ ಹೇಳಿಕೆ ನೀಡಿ ನಾಡಿನ ಜನರ ಅದರಲ್ಲೂ ರೈತರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಆರೋಪಿಸಿದ್ದಾರೆ.

ಮಂಡ್ಯದ ಪಕ್ಷೇತರ ಅಭ್ಯರ್ಥಿ ಯಾವುದೇ ಮಾಹಿತಿ ಇಲ್ಲದೆ ಜನರ ದಿಕ್ಕು ತಪ್ಪಿಸುವ ಮಾತಾಡಿದ್ದಾರೆ. ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕುಗಳ 15.58 ಲಕ್ಷ ರೈತರಿಗೆ 6223.48 ಕೋಟಿ ರೂ.ಸಾಲ ಮನ್ನಾ ಮೊತ್ತ ಮಂಜೂರು ಮಾಡಲಾಗಿದೆ. 2019-20ರ ಆಯವ್ಯಯದಲ್ಲಿ 12 ಸಾವಿರ ಕೋಟಿ ರೂ.ಅನುದಾನ ಒದಗಿಸಲಾಗಿದೆ. ಈ ಮಾಹಿತಿ ವೆಬ್ ಸೈಟಿನಲ್ಲಿಯೂ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕೃಷಿಕರ ಕುರಿತು ನನ್ನ ಬದ್ಧತೆಯ ಕುರಿತು ಅವರು ಮಾತನಾಡುವ ಅಗತ್ಯವಿಲ್ಲ. ಕಳೆದ ಎರಡು ಆಯವ್ಯಯಗಳಲ್ಲಿ ಘೋಷಿಸಿ ಜಾರಿಗೊಳಿಸುತ್ತಿರುವ ದೂರದೃಷ್ಟಿಯ ಕಾರ್ಯಕ್ರಮಗಳೆ ನಮ್ಮ ರೈತ ಪರ ಕಾಳಜಿಗೆ ಸಾಕ್ಷಿ. ರೈತರಲ್ಲಿ ಆತ್ಮಸ್ಥೈರ್ಯ ತುಂಬಲು ನಮ್ಮ ಮೈತ್ರಿ ಸರಕಾರ ಕೈಗೊಂಡಿರುವ ಕ್ರಮ ಸಾಲ ಮನ್ನಾ ಒಂದೇ ಅಲ್ಲ. ಬಿತ್ತನೆಯಿಂದ ಬೆಳೆ ಸಂಸ್ಕರಣೆ, ಸಂಗ್ರಹಣೆ ವರೆಗೆ ಎಲ್ಲ ಹಂತದಲ್ಲೂ ನೆರವು ನೀಡಲು ಕೃಷಿ ಮತ್ತು ಪೂರಕ ಚಟುವಟಿಕೆಗಳಿಗೆ 46 ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತ ಒದಗಿಸಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.

ಸುಮ್ಮನೆ ಹುರುಳಿಲ್ಲದ ಗಂಭೀರ ಆರೋಪ ಮಾಡುವ ಮುನ್ನ ವಸ್ತು ಸ್ಥಿತಿ ಅರಿತು ಮಾತನಾಡುವುದು ಸೂಕ್ತ ಎಂದು ಸುಮಲತಾ ಅಂಬರೀಶ್ ವಿರುದ್ಧ ಮುಖ್ಯಮಂತ್ರಿ ಕಿಡಿಗಾರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News