ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಿ, ಇಲ್ಲದಿದ್ದರೆ ಪಕ್ಷ ಬಿಡಿ: ಸಿದ್ದರಾಮಯ್ಯ
Update: 2019-04-06 10:23 GMT
ಬೆಂಗಳೂರು, ಎ. 6: ಕಾಂಗ್ರೆಸ್ ಕಾರ್ಯಕರ್ತರು ಕಟ್ಟು ನಿಟ್ಟಾಗಿ ಮೈತ್ರಿ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಇಷ್ಟ ಇಲ್ಲದಿದ್ದರೆ, ಪಕ್ಷ ಬಿಡಲಿ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಬಂಡಾಯ ಎದ್ದಿರುವ ಕಾರ್ಯಕರ್ತರಿಗೆ ಎಚ್ಚರಿಕೆ ನೀಡಿದರು.
ಶನಿವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮೈಸೂರು ಜಿಲ್ಲೆ ಚಾಮರಾಜ ಕ್ಷೇತ್ರದ ಹರೀಶಗೌಡ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮೈತ್ರಿ ಹೈಕಮಾಂಡ್ ಮಟ್ಟದಲ್ಲಾಗಿದ್ದು, ಎಲ್ಲರೂ ಒಪ್ಪಿ ಕೆಲಸ ಮಾಡಬೇಕು. ಯಾರಿಗಾದರೂ ಮೈತ್ರಿ ಒಪ್ಪಿಗೆ ಇಲ್ಲವಾದಲ್ಲಿ ಪಕ್ಷವನ್ನು ಬಿಡಬಹುದು ಎಂದು ಹೇಳಿದರು.
ದೇಶದ ದೃಷ್ಟಿಯಿಂದ ಮೈತ್ರಿಯನ್ನು ಎಲ್ಲರೂ ಒಪ್ಪಿಕೊಳ್ಳಬೇಕು. ಒಪ್ಪಿಗೆ ಇಲ್ಲದಿದ್ದರೆ ಈಗಲೇ ಪಕ್ಷ ಬಿಟ್ಟು ಹೋಗಲಿ. ನಮ್ಮಲ್ಲಿ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ ನಾವೆಲ್ಲರೂ ಒಪ್ಪಿಕೊಂಡಿದ್ದೇವೆ. ಈ ಬಾರಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿ, ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.