ನೀಲಿಚಿತ್ರ ವೀಕ್ಷಣೆ ಮಾಡಿರುವ ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನ ಖಂಡನೀಯ: ಜನವಾದಿ ಮಹಿಳಾ ಸಂಘಟನೆ
ಬೆಂಗಳೂರು, ಆ.30: ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿರುವುದಕ್ಕೆ ಖಂಡಿಸಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಈ ಕೂಡಲೇ ಅವರನ್ನು ಸಂಪುಟದಿಂದ ಹೊರ ಹಾಕಬೇಕೆಂದು ಆಗ್ರಹಿಸಿದ್ದಾರೆ.
ಈ ಕುರಿತು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ ಅಧ್ಯಕ್ಷೆ ದೇವಿ, ರಾಜ್ಯದ ಯಡಿಯೂರಪ್ಪಅವರ ಸರಕಾರ ನೀಲಿಚಿತ್ರ ವೀಕ್ಷಣೆ ಮಾಡಿ ಆರೋಪಕ್ಕೆ ಗುರಿಯಾಗಿರುವ ಲಕ್ಷ್ಮಣ ಸವದಿ ಅವರಿಗೆ ಉನ್ನತ ಸ್ಥಾನ ನೀಡಿರುವುದು ಖಂಡನೀಯ ಎಂದು ತಿಳಿಸಿದ್ದಾರೆ.
ಸಂವಿಧಾನ, ಕಾನೂನುಗಳಲ್ಲಿ ಅವಕಾಶವಿಲ್ಲದ ಉಪ ಮುಖ್ಯಮಂತ್ರಿ ಹುದ್ದೆ ಅತೃಪ್ತರನ್ನು ಸಂತ್ರಪ್ತರನ್ನಾಗಿಸುವ ಮಾರ್ಗವಾಗಿ ಬಳಕೆ ಮಾಡಲಾಗುತ್ತಿದೆ. ಆದರೆ, ಯಡಿಯೂರಪ್ಪ ಸರಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಚುನಾವಣೆಯಲ್ಲಿ ಸೋತವರನ್ನು ಕೇವಲ ಮಂತ್ರಿಯಷ್ಟೆ ಅಲ್ಲ ಉಪ ಮುಖ್ಯಮಂತ್ರಿಯನ್ನಾಗಿ ಮಾಡಿದೆ ಎಂದು ಆರೋಪಿಸಿದರು. ಮಹಿಳೆಯರ ಘನತೆಯ ಕುರಿತು ಕಿಂಚಿತ್ತಾದರೂ ಗೌರವ ಇದ್ದರೆ ಲಕ್ಷ್ಮಣ ಸವದಿ ಅವರನ್ನು ತಕ್ಷಣ ಸಚಿವ ಸ್ಥಾನದಿಂದ ಕೈಬಿಡಬೇಕೆಂದು ಅವರು ಒತ್ತಾಯಿಸಿದ್ದಾರೆ.