ಮಕ್ಕಳಿಗೆ ರೋಟಾ ವೈರಸ್ ಲಸಿಕೆ ತಪ್ಪದೆ ಹಾಕಿಸಲು ಕರೆ
ಬೆಂಗಳೂರು, ಸೆ. 7: ಮಕ್ಕಳಲ್ಲಿ ಉಂಟಾಗುವ ಅತಿಸಾರ ಭೇದಿಯ ವಿರುದ್ಧ ರಕ್ಷಣೆ ನೀಡುವ ಸಲುವಾಗಿ ರೋಟಾ ವೈರಸ್ ಲಸಿಕೆಯನ್ನು ಪ್ರಥಮ ಬಾರಿಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯಕರಾದ ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟಾ ವೈರಸ್ ಲಸಿಕೆ ಕಾರ್ಯಕ್ರಮದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಗು ಜನಿಸಿದ 6, 10 ಹಾಗೂ 14 ವಾರಕ್ಕೆ ಲಸಿಕೆ ಹಾಕಿಸಬೇಕು. ಒಂದು ವೇಳೆ, ಈ ಹಂತಗಳಲ್ಲಿ ಲಸಿಕೆ ಹಾಕಿಸಲು ತಪ್ಪಿದಲ್ಲಿ ಮಗುವಿಗೆ 1 ವರ್ಷ ತುಂಬುವುದರೊಳಗೆ ಲಸಿಕೆ ಹಾಕಿಸಬಹುದಾಗಿದೆ. ಈ ಲಸಿಕೆ ಹಾಕಿಸುವುದರಿಂದ ಮಗುವಿನ ಜೀವಕ್ಕೆ ಅಪಾಯವನ್ನುಂಟು ಮಾಡುವ ಅತಿಸಾರ ಭೇದಿ ಕಾಯಿಲೆಯಿಂದ ರಕ್ಷಿಸಬಹುದಾಗಿದೆ. ಪೋಷಕರಲ್ಲಿ ಈ ಕುರಿತು ಆರೋಗ್ಯ ಅಧಿಕಾರಿಗಳು ಹಾಗೂ ಅಂಗನವಾಡಿ ಕಾರ್ಯಕರ್ತರು ಅರಿವು ಮೂಡಿಸಬೇಕು ಎಂದು ಸೂಚಿಸಿದರು.
ಆರೋಗ್ಯ ಇಲಾಖೆ ಅಧಿಕಾರಿ ಡಾ. ಶ್ರೀನಿವಾಸ್, ಆರ್ಸಿಎಚ್ ಅಧಿಕಾರಿ ಸಯ್ಯದ್ ಸಿರಾಜುದ್ದಿನ್ ಮದನಿ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.