ಐಕಳ: ರಸ್ತೆಯಂಚಿನ ಮೋರಿಗಿಳಿದ ಬಸ್

Update: 2019-10-24 06:37 GMT

ಬಜ್ಪೆ, ಅ.24: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ಸೊಂದು ಮುಖ್ಯರಸ್ತೆಯಿಂದ  ರಸ್ತೆಯ ಅಂಚಿನ ಮೋರಿಗೆ ಇಳಿದ ಘಟನೆ ಮೂರುಕಾವೇರಿ ಸಮೀಪದ ಐಕಳ ಎಂಬಲ್ಲಿ ಗುರುವಾರ ಬೆಳಗ್ಗೆ ನಡೆದಿದೆ.

ಕಿನ್ನಿಗೋಳಿಯಿಂದ ಮೂಡಬಿದಿರೆಗೆ ತೆರಳುತ್ತಿದ್ದ ಬಸ್ಸು ಮೂರು ಕಾವೇರಿಯ ಐಕಳ ಸಮೀಪ ಮೂಡಬಿದಿರೆ ಕಡೆಯಿಂದ ಬರುತ್ತಿದ್ದ ವಾಹನವೊಂದಕ್ಕೆ ಸೈಡ್ ಕೊಡುವ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸಮೀಪದ ಮೋರಿಗೆ ಇಳಿದಿದೆ. ಬೆಳಗ್ಗಿನ ಸಮಯವಾದ್ದರಿಂದ ಬಸ್ಸಿನಲ್ಲಿ ಶಾಲಾ ಮಕ್ಕಳು ಸೇರಿ ಸಾಕಷ್ಟು ಪ್ರಯಾಣಿಕರಿದ್ದರು. ಘಟನೆಯಲ್ಲಿ ಬಸ್ಸಿನಲ್ಲಿ ಇದ್ದ ಪ್ರಯಾನಿಕರಿಗೆ ಅಲ್ಪಸ್ವಲ್ಪ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.

ಮೂರುಕಾವೇರಿಯ ಕಮ್ಮಜೆ ಹಾಗೂ ಐಕಳ ಸಮೀಪದ ರಸ್ತೆಯು ತೀರಾ ತಿರುವಿನಿಂದ ಕೂಡಿದೆ.ಅಲ್ಲದೆ ರಸ್ತೆಯ ಅಂಚುಗಳ ಸಮೀಪ ಅಲ್ಲಲ್ಲಿ ಹೊಂಡಗಳಿವೆ. ಇದರಿಂದ ರಸ್ತೆಯಲ್ಲಿ ಸಾಗುವಂತಹ ವಾಹನ ಸವಾರರಿಗೆ ಬಹಳಷ್ಟು ತೊಂದರೆಯಾಗಿದೆ. ಈ ಪ್ರದೇಶದಲ್ಲಿ ಈ ಹಿಂದೆ ಕೂಡ ಕೆಲವೊಂದು ಅಪಘಾತಗಳು ನಡೆದಿವೆ. ಅಲ್ಲದೆ ರಸ್ತೆಯ ಅಂಚುಗಳಿಗೆ ಯಾವುದೇ ತಡೆಬೇಲಿ ಕೂಡ ಇಲ್ಲವಾಗಿದೆ. ಇಲ್ಲಿನ  ಕೆಲ ಕಡೆಗಳ ಲ್ಲಿ ರಸ್ತೆಯ ಅಂಚುಗಳ ಸಮೀಪ ಅಪಾಯಕಾರಿಯಾಗಿದ್ದರೂ ರಸ್ತೆಗಳ ಅಂಚುಗಳ ಸಮೀಪ ತಡೆ ಬೇಲಿಯನ್ನು ನಿರ್ಮಿಸಿಲ್ಲ ಎಂದು ಸ್ಥಳೀಯ ವಾಹನ ಸವಾರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News