ಮೂಡುಬಿದಿರೆ: ಕ್ವಾರಿಗೆ ಬಿದ್ದು ಬಾಲಕ ಮೃತ
ಮೂಡುಬಿದಿರೆ: ಮೀನು ಹಿಡಿಯಲು ಹೋದ ಬಾಲಕನೋರ್ವ ಆಯತಪ್ಪಿ ಕ್ವಾರಿಗೆ ಬಿದ್ದು ಮೃತಪಟ್ಟ ಘಟನೆ ವೇಣೂರು ಠಾಣಾ ವ್ಯಾಪ್ತಿಯ ಹೊಸಂಗಡಿ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಹೊಸಗಂಡಿ ಪೇರಿ ನಿವಾಸಿ, ಕೂಲಿ ಕಾರ್ಮಿಕ ರವಿ-ಗಿರಿಜಾ ದಂಪತಿಯ ಪುತ್ರ ಅಭಿಷೇಕ್ (12) ಮೃತ ಬಾಲಕ. ಹೊಸಂಗಡಿ ಪ್ರಾಥಮಿಕ ಶಾಲೆಯಲ್ಲಿ 6ನೇ ತರಗತಿ ವ್ಯಾಸಂಗ ಮಾಡುತ್ತಿದ್ದ.
ಅಭಿಷೇಕ್ ತನ್ನ ತಮ್ಮ ಹಾಗೂ ಇತರ ಮೂವರ ಜೊತೆ ಶುಕ್ರವಾರ ಸಂಜೆ ಗಾಳವಿಡಿದು ಕ್ವಾರಿಯಲ್ಲಿ ಮೀನು ಹಿಡಿಯಲು ಹೋಗಿದ್ದ. ಮೀನು ಹಿಡಿಯುವ ಸಂದರ್ಭ ಆಯತಪ್ಪಿ ಕ್ವಾರಿಗೆ ಬಿದ್ದಿದ್ದ ಎನ್ನಲಾಗಿದೆ. ಆತನ ಜೊತೆಗಿದ್ದ ಮಕ್ಕಳು ಹೆದರಿ ಮನೆಯವರಿಗೆ ವಿಷಯ ತಿಳಿಸಿರಲಿಲ್ಲ. ಗಿರಿಜಾ ಅವರು ಸಂಜೆ ಕೂಲಿ ಕೆಲಸ ಮಾಡಿ ಮನೆಗೆ ಮರಳಿದಾಗ ಅಭಿಷೇಕ್ ಇಲ್ಲದಿರುವುದನ್ನು ಕಂಡು ಸ್ಥಳೀಯರೊಂದಿಗೆ ಮೂಡುಬಿದಿರೆ ಅಸುಪಾಸು ಹುಡಿಕಾಡಿದ್ದಾರೆ. ಕ್ವಾರಿ ಬಳಿ ಹುಡುಕುವಾಗ ಬಾಲಕನ ಅಂಗಿ, ಗಾಳ ಇರುವುದು ಕಂಡುಬಂದಿದೆ. ಬಳಿಕ ಸ್ಥಳೀಯರು ನೀರಿನಲ್ಲಿ ಹುಡುಕಾಡಿದಾಗ ಬಾಲಕನ ಮೃತದೇಹ ಪತ್ತೆಯಾಗಿದೆ.