ಗೋವಾ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಬೋಟುಗಳು: ಕೋಸ್ಟ್ ಗಾರ್ಡ್‌ನಿಂದ 18 ಮೀನುಗಾರರ ರಕ್ಷಣೆ

Update: 2019-10-26 16:18 GMT

ಮಲ್ಪೆ, ಅ.26: ಕಾರವಾರ ಮತ್ತು ಗೋವಾದ ಗಡಿಯ ಸಮುದ್ರದಲ್ಲಿ ಬಿರು ಗಾಳಿಗೆ ಸಿಲುಕಿಕೊಂಡಿದ್ದ ಮಲ್ಪೆಯ ರಾಜ್ ಕಿರಣ್ ಮತ್ತು ಮಂಗಳೂರಿನ ಮಹೇಲಿ ಬೋಟ್ನಲ್ಲಿದ್ದ ಒಟ್ಟು 18 ಮೀನುಗಾರರನ್ನು ಕೋಸ್ಟ್ ಗಾರ್ಡ್ ನವರು ಇಂದು ಅಪರಾಹ್ನದ ಸುಮಾರಿಗೆ ರಕ್ಷಿಸಿದ್ದಾರೆ.

ಮಲ್ಪೆಯ ಆಶಾ ಮೆಂಡನ್ ಎಂಬವರ ರಾಜ್ ಕಿರಣ್ ಬೋಟು ಅ.16 ರಂದು ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದು, ಕಾರವಾರ ಸಮೀಪ ಮೀನುಗಾರಿಕೆ ನಡೆಸುವಾಗ ಅ.25ರಂದು ಬೆಳಗ್ಗೆ 8ಗಂಟೆ ಸುಮಾರಿಗೆ ಬೋಟಿನ ಸ್ಟೇರಿಂಗ್ ತುಂಡಾಯಿತ್ತೆನ್ನಲಾಗಿದೆ.
 ಇದರಿಂದ ಬೋಟು ಮತ್ತು ಅದರಲ್ಲಿದ್ದ ಒಂಭತ್ತು ಮಂದಿ ಮೀನುಗಾರರು ಅಪಾಯದಲ್ಲಿ ಸಿಲುಕಿಕೊಂಡಿದ್ದರು. ಈ ಬಗ್ಗೆ ಮಲ್ಪೆ ಕರಾವಳಿ ಕಾವಲು ಪಡೆ ಠಾಣೆಗೆ ಬಂದ ದೂರಿನಂತೆ ಮಂಗಳೂರು ಮತ್ತು ಕಾರವಾರ ಕೋಸ್್ಟ ಗಾರ್ಡ್‌ಗೆ ಮಾಹಿತಿ ರವಾನಿಸಲಾಗಿತ್ತು.

ಇದರ ಜೊತೆ ಮಂಗಳೂರಿನ ಮಹೇಲಿ ಬೋಟ್ ಕೂಡ ಅಪಾಯದಲ್ಲಿ ಸಿಲುಕಿಕೊಂಡಿದ್ದು, ಅದರಲ್ಲಿಯೂ 9 ಮಂದಿ ಮೀನುಗಾರರಿದ್ದರು. ಅ.26 ರಂದು ಅಪರಾಹ್ನ 2:30ರ ಸುಮಾರಿಗೆ ಎರಡೂ ಬೋಟಿನಲ್ಲಿದ್ದ 18 ಮಂದಿ ಮೀನುಗಾರರನ್ನು ಕೋರ್ಸ್ಟ್‌ಗಾರ್ಡ್‌ನವರು ರಕ್ಷಿಸಿ ಮುಂದಿನ ಕ್ರಮಕ್ಕಾಗಿ ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ. ಎಲ್ಲ ಮೀನುಗಾರರು ಸುರಕ್ಷಿತ ವಾಗಿದ್ದಾರೆ ಎಂದು ಕರಾವಳಿ ಕಾವಲು ಪಡೆಯ ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ರಾಜ್ಯ ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಾರವಾರ ಜಿಲ್ಲಾಧಿಕಾರಿಗೆ ತುರ್ತು ಸೂಚನೆ ನೀಡಿ, ರಾಜ್ಯ ಮುಖ್ಯ ಕಾರ್ಯ ದರ್ಶಿ ವಿಜಯ ಭಾಸ್ಕರ್ ಮೂಲಕ ಗೋವಾ ಸರಕಾರದ ಮುಖ್ಯ ಕಾರ್ಯ ದರ್ಶಿಯನ್ನು ಸಂಪರ್ಕಿಸಿದ್ದರು. ಸಂಕಷ್ಟದಲ್ಲಿರುವ ಮೀನುಗಾರರ ರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳುವಂತೆ ಮತ್ತು ಅಗತ್ಯ ಬಿದ್ದರೆ ಹೆಲಿಕಾಪ್ಟರ್ ಸೇವೆ ಬಳಸಿ ಕೊಳ್ಳಲು ಸಚಿವರು ಸೂಚಿಸಿದ್ದರು ಎಂದು ತಿಳಿದುಬಂದಿದೆ.

ಅಪಾಯದಲ್ಲಿ ಮತ್ತೆ ಎರಡು ಬೋಟುಗಳು

ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಮತ್ತೆ ಎರಡು ಬೋಟು ಗಳು ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಸಂಪರ್ಕವನ್ನು ಕಳೆದುಕೊಂಡಿವೆ.

ಮಲ್ಪೆಯ ಮಿಥುನ್ ಕುಮಾರ್ ಎಂಬವರ ಗಂಗಾ ಗಣೇಶ್ ಮತ್ತು ಮಲ್ಪೆಯ ಸಂತೋಷ್ ಕುಮಾರ್ ಎಂಬವರ ಸುವರ್ಣ ಜ್ಯೋತಿ ಎಂಬ ಎರಡು ಆಳ ಸಮುದ್ರ ಮೀನುಗಾರಿಕಾ ಬೋಟುಗಳು ಅ.19ರಂು ಮೀನು ಗಾರಿಕೆಗೆ ತೆರಳಿದ್ದವು.

ಸಮುದ್ರ ಮಧ್ಯೆ ಉಂಟಾಗಿರುವ ಭಾರೀ ಗಾಳಿಯಿಂದಾಗಿ ಈ ಎರಡು ಬೋಟುಗಳು ಸಂಪರ್ಕ ಕಳೆದುಕೊಂಡಿವೆ. ಈ ಎರಡು ಬೋಟುಗಳಲ್ಲಿ ತಲಾ ಆರರಂತೆ ಒಟ್ಟು 12 ಮೀನುಗಾರರಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಲ್ಪೆ ಕರಾವಳಿ ಕಾವಲು ಪಡೆಗೆ ನೀಡಿದ ದೂರಿನಂತೆ ಮಂಗಳೂರು ಹಾಗೂ ಕಾರವಾರ ಕೋಸ್ಟ್ ಗಾರ್ಡ್‌ನವರಿಗೆ ಮಾಹಿತಿ ರವಾನಿಸಲಾಗಿದೆ. ಈ ಎರಡು ಬೋಟುಗಳಿಗಾಗಿ ಈಗ ಭರದ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News