ಕೇಂದ್ರ ಸರ್ಕಾರದ ಆರ್.ಸಿ.ಇ.ಪಿ ಒಪ್ಪಂದಕ್ಕೆ ವಿರೋಧ: ರೈತ ಸಂಘ ಹಸಿರು ಸೇನೆ ಪ್ರತಿಭಟನೆ

Update: 2019-10-31 13:17 GMT

ಪುತ್ತೂರು: ಕೇಂದ್ರ ಸರ್ಕಾರ ರೈತ ವಿರೋಧಿ ನೀತಿಗಳ ಮೂಲಕ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ರೈತರ ಸಾಲ ಮನ್ನಾ ಬೇಡಿಕೆಯನ್ನು ಈಡೇರಿಸದ ಸರ್ಕಾರ ಕೇವಲ ಕಿಸಾನ್ ಸಮ್ಮಾನ್ ಹೆಸರಿನಲ್ಲಿ ರೂ.6 ಸಾವಿರ ಭಿಕ್ಷೆ ನೀಡುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಇದೀಗ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಮಾಡುವ ಮೂಲಕ ರೈತರ ಶವ ಪೆಟ್ಟಿಗೆಗೆ ಅಂತಿಮ ಮೊಳೆ ಹೊಡೆಯುವ ಕೆಲಸಕ್ಕೆ ಮುಂದಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರುಸೇನೆಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಕುಪ್ಪೆಪದವು ಅವರು ಆರೋಪಿಸಿದರು. 

ಕೇಂದ್ರ ಸರ್ಕಾರದ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‍ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದ ನೀತಿಯನ್ನು ವಿರೋಧಿಸಿ ರಾಜ್ಯ ರೈತ ಸಂಘ, ಹಸಿರು ಸೇನೆಯ ಜಿಲ್ಲಾ ಸಮಿತಿಯ ವತಿಯಿಂದ ಗುರುವಾರ ಪುತ್ತೂರು ಉಪವಿಭಾಗಾಧಿಕಾರಿಗಳ ಕಚೇರಿ ಎದುರು ನಡೆದ ಜಿಲ್ಲಾ ಮಟ್ಟದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. 

ಈಗಾಗಲೇ ಹಳದಿರೋಗ, ಕೊಳೆರೋಗದಿಂದಾಗಿ ಅಡಿಕೆ ನೆಲಕಚ್ಚಿದೆ. ಸುಂಕ ರಹಿತವಾದ ಮುಕ್ತ ವ್ಯಾಪಾರ ಒಪ್ಪಂದ ಜಾರಿಯಾದರೆ ಮಲೇಶಿಯಾ ಮೊದಲಾದ ಕಡೆಗಳಿಂದ ಯಥೇಚ್ಚವಾಗಿ ಅಡಿಕೆ,ಕಾಳು ಮೆಣಸು ಮೊದಲಾದ ಕೃಷಿ ಉತ್ಪನ್ನಗಳು ಆಮದಾಗಿ ನಾವು ಬೆಳೆಯುವ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದಾಗಬಹುದು, ಹೈನುಗಾರಿಕೆಗೂ ದೊಡ್ಡ ಹೊಡೆತ ಬೀಳಬಹುದು ಎಂದು ಎಚ್ಚರಿಸಿದರು. 

ಇಂತಹ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದ್ದರೂ ಯಾವ ಸಂಸದರೂ ಮಾತನಾಡುತ್ತಿಲ್ಲ, ನಮ್ಮ ಭಾಗದ ಸಂಸದರು ಜೀವಂತ ಇದ್ದಾರೆಯೋ ಗೊತ್ತಿಲ್ಲ ಎಂದ ಅವರು ಈ ಒಪ್ಪಂದದಿಂದ ಕೃಷಿ ವಲಯವನ್ನು ಹೊರಗಿಡಬೇಕು ಎಂದು ಆಗ್ರಹಿಸಿದರು. 

ರೈತಸಂಘ -ಹಸಿರುಸೇನೆಯ ಜಿಲ್ಲಾ ಗೌರವಾಧ್ಯಕ್ಷ ಧನಕೀರ್ತಿ ಬಲಿಪ ಅವರು ಮಾತನಾಡಿ, ಕೇಂದ್ರ ಸರ್ಕಾರಕ್ಕೆ ರಾಜಕೀಯ ಇಚ್ಚಾಶಕ್ತಿ ಬಿಟ್ಟರೆ ರೈತರ ಬಗ್ಗೆ ಕಾಳಜಿ ಇಲ್ಲ. ಇಚ್ಚಾಶಕ್ತಿ ಇಲ್ಲದ ಆಡಳಿತ ವ್ಯವಸ್ಥೆ ಹಾಗೂ ಜನವಿರೋಧಿ ನೀತಿಗಳು ನಮ್ಮ ಪಾಲಿನ ದುರಂತ ಎಂದರು. ತೆರಿಗೆ ಇಲ್ಲದೆ ಕೃಷಿ ಹಾಗೂ ಹೈನುಗಾರಿಕೆ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ನೀತಿಯನ್ನು ಪ್ರತಿಯೊಬ್ಬ ರೈತರು ಉಗ್ರವಾಗಿ ಖಂಡಿಸಬೇಕು, ನಮ್ಮ ಧ್ವನಿಯನ್ನು ಕೇಂದ್ರಕ್ಕೆ ತಲುಪಿಸುವ ವ್ಯವಸ್ಥೆಯಾಗಬೇಕು. ಈ ಒಪ್ಪಂದ ಜಾರಿಯಾದಲ್ಲಿ ದೇಶದ ಕೃಷಿಕರಿಗೆ ಹಾಗೂ ಹೈನುಗಾರರಿಗೆ ಉಳಿಗಾಲವಿಲ್ಲ ಎಂದು ಅವರು ಎಚ್ಚರಿಸಿದರು. 

ರೈತ ಮುಖಂಡ ಕುಮಾರ ಸುಬ್ರಹ್ಮಣ್ಯ ಶಾಸ್ತ್ರಿ ಅವರು ಮಾತನಾಡಿ, ತೋಟಗಾರಿಕಾ ಬೆಲೆಗಳನ್ನು ಬೆಳೆಯುವ ರೈತರಿಗೆ ಹಾಗೂ ಹೈನುಗಾರರಿಗೆ ಈ ಒಪ್ಪಂದ ಮರಣ ಶಾಸನವಾಗಲಿದ್ದು, ನ.4ರಂದು ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಮಾಡಲು ಮುಂದಾಗುವ ಮೂಲಕ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಲು ಮುಂದಾಗಿದೆ ಎಂದು ಆರೋಪಿಸಿದರು. ರೈತರ ಜಾಗೃತರಾಗದಿದ್ದರೆ ನೇಣಿಗೆ ಕುಣಿಕೆ ಹಾಕುವ ವ್ಯವಸ್ಥೆ ಆಗಲಿದೆ ಎಂದು ಅವರು ಎಚ್ಚರಿಸಿದರು. 

ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ಜಿಲ್ಲಾ ಸಮಿತಿಯ ಅಧ್ಯಕ್ಷ ಶ್ರೀಧರ್ ಶೆಟ್ಟಿ ಬೈಲುಗುತ್ತು ಮತ್ತು ಕಡಬ ತಾಲೂಕು ಸಮಿತಿಯ ಅಧ್ಯಕ್ಷ ವಿಕ್ಟರ್.ಡಿ.ಸೋಜಾ ಅವರು ಮಾತನಾಡಿದರು. 

ರಾಜ್ಯ ರೈತ ಸಂಘ ಹಸಿರು ಸೇನೆಯ ಜಿಲ್ಲಾ ಸಮಿತಿಯ ಗೌರವಾಧ್ಯಕ್ಷ ಮುರುವ ಮಹಾಬಲ ಭಟ್, ಪ್ರಧಾನ ಕಾರ್ಯದರ್ಶಿಗಳಾದ ಈಶ್ವರ ಭಟ್ ಬಡಿಲ ಮತ್ತು ಹೊನ್ನಪ್ಪ ಗೌಡ, ಜಿಲ್ಲಾ ಸಂಚಾಲಕ ಕುಳವೂರು ದಯಾನಂದ ಶೆಟ್ಟಿ, ಬಂಟ್ವಾಳ ತಾಲ್ಲೂಕು ಸಮಿತಿಯ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಇದಿನಬ್ಬ, ಬೆಳ್ತಂಗಡಿ ತಾಲ್ಲೂಕು ಸಮಿತಿಯ ಅಧ್ಯಕ್ಷ ಕೇಶವ ಪೂಜಾರಿ, ಕಾರ್ಯದರ್ಶಿ ನವೀನ್ ಮೆಂತೆರೊ, ಮಂಗಳೂರು ತಾಲೂಕು ಸಮಿತಿಯ ಅಧ್ಯಕ್ಷ ಮನೋಹರ್ ಶೆಟ್ಟಿ, ಸುಳ್ಯ ತಾಲೂಕು ಸಮಿತಿಯ ಕಾರ್ಯದರ್ಶಿ ಸಿರಿಲ್ ಕ್ರಾಸ್ತಾ, ವಿಟ್ಲ ಸಮಿತಿಯ ಅಧ್ಯಕ್ಷ ಸುದೇಶ್ ಭಂಡಾರಿ, ಪುತ್ತೂರು ತಾಲೂಕು ಸಮಿತಿಯ ಉಪಾಧ್ಯಕ್ಷ ಜಯಪ್ರಕಾಶ್ ರೈ ನೂಜಿಬೈಲು, ವಲಯ ಸಮಿತಿಗಳ ಪ್ರಮುಖರಾದ ವಿನೋದ್ ಶೆಟ್ಟಿ ಪದಡ್ಕ, ಶೇಖರ್ ರೈ ಕುಂಬ್ರ, ನಾರಾಯಣ ಭಟ್ ವಿಟ್ಲ, ಇದಿನಬ್ಬ ಪುಣಚ ಮತ್ತಿತರರು ಉಪಸ್ಥಿತರಿದ್ದರು.

ಪ್ರತಿಭಟನೆ ನಂತರ ಉಪವಿಭಾಗಾಧಿಕಾರಿ ಕಚೇರಿ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News