ಉಡುಪಿ: ಸಿಂಡಿಕೇಟ್ ಬ್ಯಾಂಕ್ 94ನೇ ಸಂಸ್ಥಾಪಕರ ದಿನಾಚರಣೆ
ಉಡುಪಿ, ಅ.31: ರಾಷ್ಟ್ರೀಕೃತ ಸಿಂಡಿಕೇಟ್ ಬ್ಯಾಂಕಿನ 94ನೇ ಸಂಸ್ಥಾಪಕರ ದಿನಾಚರಣೆ ಇಂದು ಉಡುಪಿ ಸಿಂಡಿಕೇಟ್ ಬ್ಯಾಂಕಿನ ಪ್ರಾದೇಶಿಕ ಕಚೇರಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ತಮ್ಮ ತಾಯಿಯ ಇಚ್ಛೆಯಂತೆ ಜನಸಾಮಾನ್ಯರಿಗೆ ಜನರಿಗೆ ಅನುಕೂಲವಾಗಲು,ಸಾಮಾಜಿಕವಾಗಿ ನೆರವಾಗುವ ಉದ್ದೇಶದಿಂದ ಡಾ.ಟಿ.ಎಂ.ಎ ಪೈ ಅವರು ತಮ್ಮ ಇಬ್ಬರು ಸಹೋದರೊಂದಿಗೆ ಸೇರಿ 1928ರಲ್ಲಿ ಚಿನ್ನಾಭರಣ ಅಡವಿಟ್ಟು 8 ಸಾವಿರ ರೂ. ಬಂಡವಾಳದೊಂದಿಗೆ ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆ ಮಾಡಿದ್ದರು ಎಂದು ನೆನಪಿಸಿಕೊಂಡರು.
ಡಾ.ಟಿ.ಎಂ.ಎ.ಪೈ ಮತ್ತು ಸಹೋದರರು ಅತ್ಯುತ್ತಮ ದೂರದೃಷ್ಟಿಯನ್ನು ಹೊಂದಿದ್ದು, ತಮ್ಮ ಅವಿರತ ಶ್ರಮದಿಂದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಬ್ಯಾಂಕಿಂಗ್, ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಗೌರವ ತಂದುಕೊಟ್ಟರು. ಸಣ್ಣ ಉಳಿತಾಯ ಯೋಜನೆಯನ್ನು ದೇಶದಲ್ಲೇ ಮೊದಲ ಬಾರಿಗೆ ಪರಿಚಯಿಸಿ ಸಾಮಾನ್ಯ ಜನರನ್ನು ಬ್ಯಾಂಕಿಂಗ್ ಸೇವೆಯತ್ತ ಸೆಳೆದರು ಎಂದರು.
ಬ್ಯಾಂಕ್ನ ಸಂಸ್ಥಾಪಕರ ಕುಟುಂಬಸ್ಥರಾದ ಅಶೋಕ್ ಪೈ, ಸಂಧ್ಯಾ ಪೈ, ವಿಜಯಲಕ್ಷ್ಮೀ ಮಾತನಾಡಿ, ಸಿಂಡಿಕೇಟ್ ಬ್ಯಾಂಕ್ ಸ್ಥಾಪನೆಯಿಂದ ಎಷ್ಟೋ ಬಡಕುಟುಂಬಗಳು ಜೀವನ ರೂಪಿಸಿಕೊಂಡಿವೆ.ಸಣ್ಣ ರೈತರ ಮನೆಗಳು ಬೆಳಗಿವೆ. ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗಿವೆ ಎಂದರು.
ತೋನ್ಸೆ ಕುಟುಂಬ ಸದಸ್ಯರಾದ ಟಿ.ಸತೀಶ್ ಪೈ, ವಸಂತಿ ಶೆಣೈ, ನಾರಾಯಣ ಪೈ, ಅಶೋಕ್ ಪೈ, ಸಂದ್ಯಾ ಪೈ, ವಿಜಯಲಕ್ಷ್ಮೀ ಇವರನ್ನು ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು.
ತೋನ್ಸೆ ಕುಟುಂಬ ಸದಸ್ಯರಾದ ಟಿ.ಸತೀಶ್ ಪೈ, ವಸಂತಿ ಶೆಣೈ, ನಾರಾಯಣ ಪೈ, ಅಶೋಕ್ ಪೈ, ಸಂದ್ಯಾ ಪೈ, ವಿಜಯಲಕ್ಷ್ಮೀ ಇವರನ್ನು ಸಿಂಡಿಕೇಟ್ ಬ್ಯಾಂಕ್ ವತಿಯಿಂದ ಗೌರವಿಸಲಾಯಿತು. ಸಿಂಡಿಕೇಟ್ ಬ್ಯಾಂಕ್ನ ವಲಯ ಪ್ರಬಂಧಕ ರಾಮ ನಾಯ್ಕಾ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಭಾಸ್ಕರ ಹಂದೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಯಾಂಕ್ನ ಅಧಿಕಾರಿಗಳಾದ ಅರ್ಚನ ನಿರೂಪಿಸಿ, ಸುರೇಶ ವಂದಿಸಿದರು.