ಹೆರಿಗೆಯಾದ ಎರಡನೆ ದಿನಕ್ಕೆ ಮಹಿಳೆ ಮೃತ್ಯು : ದೂರು ದಾಖಲು
ಭಟ್ಕಳ: ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆಯಾದ ಎರಡೇ ದಿನಕ್ಕೆ ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಮೃತ ಮಹಿಳೆಯನ್ನು ಶಿರೂರಿನ ಮಾಲತಿ ಸುಧಾಕರ ಆಚಾರಿ (36) ಎಂದು ಗುರುತಿಸಲಾಗಿದೆ.
ಈಕೆಯು ಮುಂಡಳ್ಳಿಯ ಆಚೆಹಿತ್ಲ ಎನ್ನುವಲ್ಲಿಯ ನಿವಾಸಿಯಾಗಿದ್ದು ಕಳೆದ 10 ವರ್ಷದ ಹಿಂದೆ ಶಿರೂರಿಗೆ ಮದುವೆ ಮಾಡಿಕೊಡಲಾಗಿತ್ತು ಎನ್ನಲಾಗಿದೆ. ಎರಡನೇ ಹೆರಿಗೆಗಾಗಿ ತಾಯಿ ಮನೆಗೆ ಬಂದಿದ್ದ ಇವರನ್ನು ಅ.29ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಂದೇ ಸಿಸೇರಿಯನ್ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಹೆರಿಗೆಯಾದ ನಂತರ ಆರೋಗ್ಯವಾಗಿಯೇ ಇದ್ದ ಈಕೆಯನ್ನು ಅ. 31ರಂದು ಬೆಳಗ್ಗೆ 6 ಗಂಟೆಯ ಸಮಯ ಎಬ್ಬಿಸಿದಾಗ ಸಾವನ್ನಪ್ಪಿರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿತ್ತು. ಆಕೆಗೆ 9 ವರ್ಷದ ಮಗಳಿದ್ದು, ಇದು ಎರಡನೇ ಹೆರಿಗೆಯಾಗಿದೆ. ಈಕೆಯ ಸಾವಿನ ಬಗ್ಗೆ ತನಿಖೆಯ ಅಗತ್ಯವಿದೆ ಎಂದು ಕುಟುಂಬದವರು ತಿಳಿಸಿದ್ದರಿಂದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಣಿಪಾಲದ ಆಸ್ಪತ್ರೆಗೆ ಒಯ್ಯಲಾಗಿದೆ.
ಈ ಕುರಿತು ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಮೃತ ಮಹಿಳೆಯ ಸಹೋದರ ರಾಘವೇಂದ್ರ ಆಚಾರಿ ದೂರು ನೀಡಿದ್ದು ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.