ಮುಂದಿನ 100 ದಿನಗಳಲ್ಲಿ ರಾಜ್ಯದ ಚಿತ್ರಣವನ್ನೇ ಬದಲಿಸುತ್ತೇವೆ: ಸಿಎಂ ಯಡಿಯೂರಪ್ಪ

Update: 2019-11-05 13:57 GMT

ಬೆಂಗಳೂರು, ನ. 5: ‘ನೆರೆ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತರ ಕಣ್ಣೀರೊರೆಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದ್ದೇವೆ. ರಾಜ್ಯ ಸರಕಾರಕ್ಕೆ 100 ದಿನಗಳ ಒಂದು ಅಗ್ನಿ ಪರೀಕ್ಷೆಯಾಗಿತ್ತು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ತಮ್ಮ ನೇತೃತ್ವದ ಸರಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ‘ದಿನ ನೂರು ಸಾಧನೆ ನೂರಾರು’ ಕಿರು ಹೊತ್ತಿಗೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮುಂದಿನ 100 ದಿನಗಳಲ್ಲಿ ಕರ್ನಾಟಕ ಮತ್ತು ಬೆಂಗಳೂರಿನ ಚಿತ್ರಣವನ್ನೇ ಬದಲಿಸುತ್ತೇವೆ ಎಂದು ಅಭಯ ನೀಡಿದರು.

ರಾಜಧಾನಿ ಬೆಂಗಳೂರು ಸೇರಿದಂತೆ ಕರ್ನಾಟಕವನ್ನು ದೇಶದಲ್ಲೆ ಮಾದರಿ ರಾಜ್ಯ ಮಾಡುವ ನಿಟ್ಟಿನಲ್ಲಿ ಒಂದೂ ಕ್ಷಣವೂ ವಿಶ್ರಾಂತಿ ಪಡೆಯದೆ ಕೆಲಸ ಮಾಡುತ್ತೇವೆ ಎಂದ ಅವರು, ಈ ಬಗ್ಗೆ ಹೊಸ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಮುಂದಿನ ಬಜೆಟ್‌ನಲ್ಲಿ ತಿಳಿಸುತ್ತೇನೆ ಎಂದರು.

ನೆರವಾಗಿದ್ದೇ ಸಾಧನೆ: ರಾಜ್ಯದ ಇತಿಹಾಸದಲ್ಲಿ ಕಂಡು ಕೇಳರಿಯದ ಮಳೆ-ಪ್ರವಾಹ ಬಂದಿತ್ತು. ತಿಂಗಳ ಕಾಲ ನಾನು ಮತ್ತು ಸಂಪುಟ ಸಹೋದ್ಯೋಗಿಗಳ ಹಗಲು-ರಾತ್ರಿ ಎನ್ನದೇ ನೆರೆ ಪೀಡಿತ ಪ್ರದೇಶದಲ್ಲೆ ಇದ್ದು ಸಂತ್ರಸ್ತರಿಗೆ ನೆಮ್ಮದಿ ಬದುಕು ಕಟ್ಟಿಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದೇವೆ. ಈ ಹಿಂದೆ ಹಲವು ಬಾರಿ ನೈಸರ್ಗಿಕ ವಿಕೋಪ ಸಂಭವಿಸಿದೆ. ಆದರೆ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ಯಾರೂ ಕೊಟ್ಟಿಲ್ಲ. ಇದು ಸಾಧನೆಯಲ್ಲವೆ? ಎಂದು ಪ್ರಶ್ನಿಸಿದ ಅವರು, ನೆರೆ ಸಂತ್ರಸ್ತರಿಗೆ ಕೇಂದ್ರ ಸರಕಾರವೂ ಹೆಚ್ಚಿನ ನೆರವು ನೀಡಿದೆ ಎಂದು ಅಂಕಿ-ಸಂಖ್ಯೆ ನೀಡಿದರು.

ಅಭಿವೃದ್ಧಿಯತ್ತ ದೊಡ್ಡ ಹೆಜ್ಜೆ: ನೂರು ದಿನಗಳ ಆಡಳಿತದಲ್ಲಿ ನೆರೆ ಸಂತ್ರಸ್ತರ ಸಂಕಟ ನಿವಾರಿಸಿ ನೆರವಾದ ತೃಪ್ತಿ ಇದೆ. ಜೊತೆಗೆ ಅಭಿವೃದ್ಧಿ ದಿಕ್ಕಿನತ್ತ ದೊಡ್ಡ ಹೆಜ್ಜೆಯನ್ನಿಟ್ಟ ಸಮಾಧಾನವೂ ಇದೆ ಎಂದ ಅವರು, ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿಯ ಚಿತ್ರಣ ಬದಲಾಗಲಿದೆ ಎಂದರು.

ಮುಂಬರುವ ದಿನಗಳಲ್ಲಿ ಕೃಷಿ, ನೀರಾವರಿ, ವಸತಿ, ಕೈಗಾರಿಕೆ ಮತ್ತು ಬೆಂಗಳೂರು ನಗರದ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದ ಬಿಎಸ್‌ವೈ, ಸರಕಾರದ ಸಾಧನೆಗೆ ಅಂಕ ಕೊಡುವ ಅಧಿಕಾರ ರಾಜ್ಯದ ಜನರಿಗಿದೆಯೇ ಹೊರತು ಬೇರೆ ಯಾರಿಗೂ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಸಚಿವ ಸಂಪುಟ ಸಹೋದ್ಯೊಗಿಗಳಿಗೂ ನಾನು ಯಾವುದೇ ಅಂಕ ನೀಡಲು ಹೋಗುವುದಿಲ್ಲ. ಅವರು ನನ್ನ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದಾರೆ ಎಂದ ಬಿಎಸ್‌ವೈ, ಕಳಸಾ-ಬಂಡೂರಿ ಯೋಜನೆಗೆ ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದೆ. ಮೂರು ಹೊಸ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದರು.

ಗುರಿ ಸಾಧನೆ: ಸಾರಿಗೆ ಹೊಸತುಪಡಿಸಿದರೆ ವಾಣಿಜ್ಯ ತೆರಿಗೆ, ಅಬಕಾರಿ ಸೇರಿದಂತೆ ಎಲ್ಲ ಇಲಾಖೆಗಳು ತೆರಿಗೆ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧನೆ ಮಾಡಿವೆ ಎಂದ ಅವರು, ಕೃಷಿ ಮತ್ತು ಕೂಲಿ ಕಾರ್ಮಿಕರ ಬದುಕನ್ನು ಉತ್ತಮಗೊಳಿಸುವ ಸಂಕಲ್ಪ ಮಾಡಿದ್ದೇವೆ ಎಂದರು.

ಎಸ್ಸಿ-ಎಸ್ಟಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದ ಜನರ ಕಲ್ಯಾಣಕ್ಕೆ ನಮ್ಮ ಸರಕಾರ ಆದ್ಯತೆ ನೀಡಿದ್ದು, ರಾಜ್ಯದ ಜನತೆ ನೆಮ್ಮದಿಯಿಂದ, ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸುವ ಕೆಲಸ ಮಾಡಿದ್ದೇವೆ ಎಂದು ಯಡಿಯೂರಪ್ಪ ನುಡಿದರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಾ.ಅಶ್ವಥ್‌ ನಾರಾಯಣ, ಸಚಿವರಾದ ಮಾಧುಸ್ವಾಮಿ, ಕೆ.ಎಸ್.ಈಶ್ವರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್, ಸಿ.ಸಿ.ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್, ಶಾಸಕ ರೇಣುಕಾಚಾರ್ಯ ಹಾಗೂ ಅಧಿಕಾರಿಗಳು ಹಾಜರಿದ್ದರು.

‘ಸಂತ್ರಸ್ತರಿಗೆ ನೆರವಾಗುವಲ್ಲಿ ಕೇಂದ್ರ, ಕರ್ನಾಟಕವನ್ನು ನಿರ್ಲಕ್ಷಿಸಿದೆ ಎಂಬ ಆರೋಪದಲ್ಲಿ ಹುರುಳಿಲ್ಲ. ಕೇಂದ್ರದ ಸಹಕಾರವಿಲ್ಲದಿದ್ದರೆ ನಾವು ಏನೂ ಮಾಡಲು ಸಾಧ್ಯವಿರಲಿಲ್ಲ. 1,200 ಕೋಟಿ ರೂ.ನೆರವು ನೀಡಿದೆ. ಇದೀಗ ನೆರೆ ಸಂತ್ರಸ್ತರ ಗುಳೆ ತಪ್ಪಿಸಲು ಖಾತ್ರಿ ಯೋಜನೆಯಡಿ ಹೆಚ್ಚು ಉದ್ಯೋಗ ಸೃಜನೆಗೆ ಕೇಂದ್ರಕ್ಕೆ ಮನವಿ ಮಾಡಲಾಗಿದೆ’

-ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ

ಎಸಿಬಿಗೆ ಮತ್ತಷ್ಟು ಬಲ

ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ಕ್ಕೆ ಮತ್ತಷ್ಟು ಬಲ ತುಂಬುವ ಮೂಲಕ ಭ್ರಷ್ಟಾಚಾರ ನಿಗ್ರಹಕ್ಕೆ ಕ್ರಮ ಕೈಗೊಳ್ಳಲಾಗುವುದು. ಮೋಡ ಬಿತ್ತನೆಗೆ 90ಕೋಟಿ ರೂ. ಟೆಂಡರ್ ಅನುಮೋದನೆ ಸುಳ್ಳು. ಮಳೆ-ಪ್ರವಾಹ ಸ್ಥಿತಿ ಹಿನ್ನೆಲೆಯಲ್ಲಿ ಮೋಡ ಬಿತ್ತನೆ ಸ್ಥಗಿತಗೊಳಿಸಲಾಗಿದೆ

-ಯಡಿಯೂರಪ್ಪ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News