ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರಗಳವು

Update: 2019-11-05 16:33 GMT

ಮಂಗಳೂರು, ನ.5: ಮೂಡುಶೆಡ್ಡೆಯ ಶಿವನಗರದಲ್ಲಿ ಮಂಗಳವಾರ ಬೈಕ್ ಸವಾರನೊಬ್ಬ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯೊಬ್ಬರ ಕುತ್ತಿಗೆಯಿಂದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದಾನೆ.

ಶಿವನಗರದ ಮನೋರಮಾ ಭಟ್ (65) ಅವರು ಮಧ್ಯಾಹ್ನ 12:45ರ ವೇಳೆಗೆ ಸಮೀಪದ ಅಂಗಡಿಗೆ ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಬೈಕ್‌ನಲ್ಲಿ ಬಂದ ಅಪರಿಚಿತ ಯುವಕ ಮನೋರಮಾ ಭಟ್ ಅವರಲ್ಲಿ ವ್ಯಕ್ತಿಯೊಬ್ಬರ ವಿಳಾಸ ಕೇಳಿದ್ದನು. ತನಗೆ ಗೊತ್ತಿಲ್ಲ ಎಂದು ಹೇಳಿದಾಗ ಅಪರಿಚಿತ ಯುವಕ ಆಕೆಯ ಕುತ್ತಿಗೆಯಲ್ಲಿದ್ದ 48,000 ರೂ. ವೌಲ್ಯದ 22 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ.

ಈ ಬಗ್ಗೆ ಮನೋರಮಾ ಭಟ್ ಅವರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News