ವಿವಾಹಿತೆ ಆತ್ಮಹತ್ಯೆ ಪ್ರಕರಣ: ಓರ್ವ ಸೆರೆ
ಬಂಟ್ವಾಳ, ನ. 29: ವಿವಾಹಿತೆಯೋರ್ವರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.
ಕರ್ಪೆ ಮುಗೇರು ನಿವಾಸಿ, ಮೃತರ ಮಾವ ಭುಜಬಲಿ ಕಂಬಳಿ (66) ಬಂಧಿಸಿತ ಆರೋಪಿ.
ಬಂಟ್ವಾಳ ಗ್ರಾಮಾಂತರ ಠಾಣೆಯ ಸಿದ್ಧಕಟ್ಟೆ ಕರ್ಪೆ ಮುಗೇರು ಎಂಬಲ್ಲಿ ಗುರುವಾರ ಬೆಳಗ್ಗೆ ಮುಗೇರು ನಿವಾಸಿ ಅಭಯ್ ಕುಮಾರ್ ಜೈನ್ ಎಂಬವರ ಪತ್ನಿ ಪ್ರತಿಭಾ (35) ಮನೆ ಸಮೀಪದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದಲ್ಲಿ ಮೃತ ಮಹಿಳೆಯ ತಂದೆ ನೀಡಿದ ದೂರಿನಂತೆ ಮಾವ ಭುಜಬಲಿ ವಿರುದ್ಧ ಐಪಿಸಿ ಸೆ. 306ರನ್ವಯ ಪ್ರಕರಣ ದಾಖಲಾಗಿತ್ತು.
ಅಭಯ್ ಕುಮಾರ್ ಜೈನ್ ಅವರೊಂದಿಗೆ ಪ್ರತಿಭಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಮನೆಯಲ್ಲಿ ಅವರ ಪತಿಯ ತಮ್ಮ, ತಮ್ಮನ ಪತ್ನಿಯೂ ಇದ್ದರು. ಗುರುವಾರ ಬೆಳಗ್ಗೆ ಸುಮಾರು ಐದೂವರೆಗೆ ಎದ್ದಿದ್ದ ಪ್ರತಿಭಾ ಬಳಿಕ ಸುಮಾರು 6.30ರ ವೇಳೆ ಶವವಾಗಿ ಬಾವಿಯಲ್ಲಿ ಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.