ಅತ್ಯಾಚಾರ ಪ್ರಕರಣ ಖಂಡಿಸಿ ಬಾಯಿಗೆ ಕಪ್ಪುಬಟ್ಟೆ ಕಟ್ಟಿ ಮೌನ ಪ್ರತಿಭಟನೆ
ಉಡುಪಿ, ಡಿ.3: ಪಶುವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಖಂಡಿಸಿ ಸಾಮಾಜಿಕ ಕಾರ್ಯಕರ್ತರು ಹಾಗೂ ಸಮಾನ ಮನಸ್ಕ ಯುವಕರು ಇಂದು ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಬಾಯಿಗೆ ಕಪ್ಪುಬಟ್ಟೆ ಕಟ್ಟಿಕೊಂಡು ಸಾಂಕೇತಿಕ ಮೌನ ಪ್ರತಿಭಟನೆಯನ್ನು ನಡೆಸಿದರು.
ದೇಶದಾದ್ಯಂತ 1.66 ಲಕ್ಷ ಲೈಂಗಿಕ ಕಿರುಕುಳ, ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇದ್ದು, ದೇಶದಲ್ಲಿ ಮಹಿಳೆಯರಲ್ಲಿ ಭೀತಿ ಹೆಚ್ಚಾಗು ತ್ತಿದೆ. ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಲಯ ಮತ್ತು ಸಮಾಜ ಗಂಭೀರ ವಾಗಿ ಪರಿಗಣಿಸಿ ಕಾನೂನಿನಲ್ಲಿ ಬದಲಾವಣೆಯನ್ನು ತರಬೇಕು. ಇಂತಹ ಪ್ರಕರಣಗಳನ್ನು ತ್ವರಿತ ವಿಚಾರಣೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆಯನ್ನು ವಿಧಿಸಬೇಕು. ಆಗ ಮಾತ್ರ ನಿರಂತರವಾಗಿ ನಡೆಯುವ ಇಂತಹ ಪ್ರಕರಣಗಳನ್ನು ತಡೆಯಬಹುದು ಎಂದು ಸಾಮಾಜಿಕ ಕಾರ್ಯಕರ್ತ ಪ್ರಮೋದ್ ಉಚ್ಚಿಲ್ ತಿಳಿಸಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಕಾರ್ಯಕರ್ತರಾದ ಹಮ್ಮದ್ ಉಡುಪಿ, ಯಾಸಿನ್ ಉಡುಪಿ, ಹಮ್ರಾಜ್ ಕಾಪು, ಹಬೀಬ್ ಉಡುಪಿ, ಶಾಹಿದ್, ಇಮ್ರಾನ್, ಸೂರಿ, ಸಾಹಿಲ್ ಉಡುಪಿ, ಮಾದವ್, ಯಾದವ್, ಸುರೇಂದ್ರ, ಕಾಪು ವಿದ್ಯಾನಿಕೇತನ ಹಾಗೂ ದಂಡತೀರ್ಥ ಕಾಲೇಜುಗಳ ವಿದ್ಯಾರ್ಥಿಗಳು ಹಾಜರಿದ್ದರು.