ಡಿ. 28, 29ರಂದು ಮಾಣಿಯಲ್ಲಿ ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Update: 2019-12-25 12:04 GMT

ಬಂಟ್ವಾಳ, ಡಿ. 25: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಮಾಣಿಯ ನಾಗರಿಕರಿಂದ ರೂಪಿತವಾದ ಸ್ವಾಗತ ಸಮಿತಿಯು ಜಂಟಿಯಾಗಿ ಏರ್ಪಡಿಸಿರುವ ಬಂಟ್ವಾಳ ತಾಲೂಕು 20ನೇ ಕನ್ನಡ ಸಾಹಿತ್ಯ ಸಮ್ಮೇಳನ ಡಿ. 28, 29ರಂದು ಎರಡು ದಿನಗಳ ಕಾಲ ಮಾಣಿಯ ಬಾಲ ವಿಕಾಸ ಆಂಗ್ಲ ಮಾಧ್ಯಮ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಸ್ವಾಗತ ಸಮಿತಿಯ ಸಂಚಾಲಕ ಕೆ.ಎನ್.ಗಂಗಾಧರ ಆಳ್ವ ತಿಳಿಸಿದ್ದಾರೆ.

ಬುಧವಾರ ಮಾಣಿ ಬಾಲ ವಿಕಾಸ ಶಾಲೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೇಖಕಿ, ಐಪಿಎಸ್ ಅಧಿಕಾರಿ ಡಾ. ಧರಣೀದೇವಿ ಮಾಲಗತ್ತಿ ಸಮ್ಮೇಳನಾಧ್ಯಕ್ಷತೆ ವಹಿಸಿಕೊಳ್ಳಲಿದ್ದು, ಉರ್ದಿಲಗುತ್ತು ಇಂದುಹಾಸ ರೈ ವೇದಿಕೆ, ಅರ್ಬಿ ಶ್ರೀನಿವಾಸ ಶೆಟ್ಟಿ ಸಭಾಂಗಣದಲ್ಲಿ ಎರಡು ದಿನ ನಡೆಯುವ ವೈವಿಧ್ಯಮಯ ಕಾರ್ಯಕ್ರಮಗಳನ್ನು ವಿದ್ವಾಂಸ ಡಾ. ಪ್ರಭಾಕರ ಶಿಶಿಲ ಶನಿವಾರ ಸಂಜೆ 4.35ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಉದ್ಘಾಟಿಸುವರು ಎಂದ ಹೇಳಿದರು.

ಹೊಸ ಕೃತಿಗಳನ್ನು ಶಾಸಕ ರಾಜೇಶ್ ನಾಯ್ಕ್ ಬಿಡುಗಡೆಗೊಳಿಸಲಿದ್ದು, ಶನಿವಾರ ಬೆಳಗ್ಗೆ 10ಕ್ಕೆ ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ ರಾಷ್ಟ್ರಧ್ವಜಾರೋಹಣ ನೆರವೇರಿಸುವರು. ಮಾಣಿ ರಾಜಕಮಲ್ ಆಡಿಟೋರಿಯಂನಿಂದ ಸಮ್ಮೇಳನ ಸಭಾಂಗಣವರೆಗೆ ಮಧ್ಯಾಹ್ನ  3ಕ್ಕೆ ಭುವನೇಶ್ವರಿ ಮೆರವಣಿಗೆ ನಡೆಯಲಿದ್ದು, ಮಾಣಿ ಉಳ್ಳಾಲ್ತಿ ದೈವಸ್ಥಾನ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಪುಷ್ಪಾರ್ಚನೆ ನೆರವೇರಿಸಿದರೆ, ಮೆರವಣಿಗೆಯನ್ನು ಸೂರಿಕುಮೇರು ಸಂತ ಜೋಸೆಫರ ದೇವಾಲಯ ಧರ್ಮಗುರು ವಂ.ಗ್ರೆಗರಿ ಪಿರೇರಾ ಉದ್ಘಾಟಿಸುವರು. ವಸ್ತು ಪ್ರದರ್ಶನವನ್ನು ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ, ಪುಸ್ತಕ ಪ್ರದರ್ಶನವನ್ನು ನಂದಾವರ ಕ್ಷೇತ್ರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ಭಂಡಾರಿ ಉದ್ಘಾಟಿಸುವರು ಎಂದು ಮಾಹಿತಿ ನೀಡಿದರು.

ಅಂದು ಸಂಜೆ ಕೃಷಿ ಸಂಸ್ಕೃತಿ, ಅಡಕೆ ಕೃಷಿ ಸವಾಲು, ಪರಿಹಾರ ಗೋಷ್ಠಿ, ಮೌನೇಶ ವಿಶ್ವಕರ್ಮ ನಿರ್ದೇಶನದ ನಮ್ಮ ಬಾಪು ನಾಟಕ, ಕೆ.ವಿ.ರಮಣ್ ನಿರ್ದೇಶನದ ನಾಟ್ಯಾಯನ, ಭಾನುವಾರ ಡಿ.30ಕ್ಕೆ ಉದಯೋನ್ಮುಖ ಸಾಹಿತ್ಯ ಕುರಿತ ಗೋಷ್ಠಿ, ಜನಪದ ಸಂಸ್ಕೃತಿ, ಯಕ್ಷಗಾನ ಕುರಿತ ಗೋಷ್ಠಿ, ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲಾ ವಿದ್ಯಾರ್ಥಿಗಳಿಂದ ಯಕ್ಷಗಾನ ನರಕಾಸುರ ಮೋಕ್ಷ, ಸಾಹಿತ್ಯ ಪ್ರಸ್ತುತಿ, ಯಕ್ಷಗಾನ ಭಾಗವತಿಕೆ ಅನನ್ಯತೆ ಕುರಿತ ಗೋಷ್ಠಿ, ವಿದ್ಯಾ ಮನೋಜ್ ತಂಡದಿಂದ ಭರತನಾಟ್ಯ, ಮರೆಯಲಾಗದ ಮಹಾನುಭಾವರು ನುಡಿನಮನ, ಸಾಧಕರಿಗೆ ಸನ್ಮಾನ, ಸಮ್ಮೇಳನಾಧ್ಯಕ್ಷರ ಸಾಹಿತ್ಯ ಪರಿಚಯ ನಡೆಯಲಿದ್ದು, ಬಳಿಕ ಸಮಾರೋಪ ನಡೆಯಲಿದೆ. ಮಾಜಿ ಸಚಿವ ಬಿ.ರಮಾನಾಥ ರೈ ಸಹಿತ ಗಣ್ಯರು ಭಾಗವಹಿಸಲಿದ್ದು, ಸಮಾರೋಪ ಭಾಷಣವನ್ನು ಮಂಗಳೂರು ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ ಪ್ರಿನ್ಸಿಪಾಲ್ ಪ್ರೋ. ಬಾಲಕೃಷ್ಣ ಶೆಟ್ಟಿ ಮಾಡಲಿದ್ದಾರೆ ಎಂದರು. ಸಮ್ಮೇಳನದಲ್ಲಿ ಭಾಗವಹಿಸುವ ಎಲ್ಲರಿಗೂ ಮುಕ್ತ ಅವಕಾಶವಿದ್ದು, ಊಟೋಪಚಾರ ವ್ಯವಸ್ಥೆ ಕಲ್ಪಿಸಲಾಗಿದೆ ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷೆ, ಜಿಪಂ ಸದಸ್ಯೆ ಮಂಜುಳಾ ಮಾಧವ ಮಾವೆ, ಸಂಚಾಲಕರಾದ ಗಂಗಾಧರ ಆಳ್ವ ಅನಂತಾಡಿ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಸಿ, ಕಸಾಪ ತಾಲೂಕು ಅಧ್ಯಕ್ಷ ಕೆ. ಮೋಹನ ರಾವ್,  ಸ್ವಾಗತ ಸಮಿತಿಯ ಜತೆ ಕಾರ್ಯದರ್ಶಿಗಳಾದ ಬಾಲಕೃಷ್ಣ ಆಳ್ವ ಕೊಡಾಜೆ, ವಿಜಯಲಕ್ಷ್ಮೀ ವಿ. ಶೆಟ್ಟಿ, ಕೋಶಾಧಿಕಾರಿ ಬಿ.ಜಗನ್ನಾಥ ಚೌಟ ಬದಿಗುಡ್ಡೆ, ತಾಪಂ ಸದಸ್ಯೆ ಮಂಜುಳಾ ಕುಶಲ, ಕಸಾಪ ತಾಲೂಕು ನಿಕಟಪೂರ್ವ ಅಧ್ಯಕ್ಷ ಜಯಾನಂದ ಪೆರಾಜೆ, ಗೌರವ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ವಿವಿಧ ಸಮಿತಿಗಳ ಪ್ರಮುಖರಾದ ಗಂಗಾಧರ ರೈ, ದಿನಕರ ಪೂಜಾರಿ, ಸಚಿನ್ ರೈ ಮಾಣಿಗುತ್ತು, ಇಬ್ರಾಹಿಂ ಕೆ. ಮಾಣಿ, ಮೌನೇಶ ವಿಶ್ವಕರ್ಮ, ಲತೀಫ್ ನೇರಳಕಟ್ಟೆ, ಉದಯಕುಮಾರ್ ರೈ, ನರಸಿಂಹ ಮಾಣಿ, ಮಹೇಶ್ ಮಾಣಿ, ಕೃಷ್ಣ ಶರ್ಮಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News