ಕೆಲ ನಿರ್ಧಾರಗಳನ್ನು ಹಿರಿಯ ಅಧಿಕಾರಿಗಳೇ ಕೈಗೊಳ್ಳುತ್ತಾರೆ: ಕೋಟ ಶ್ರೀನಿವಾಸ ಪೂಜಾರಿ

Update: 2019-12-26 15:03 GMT

ಮಂಗಳೂರು, ಡಿ.26: ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಕೆಲವೊಂದು ಸನ್ನಿವೇಶಗಳಲ್ಲಿ ಕೆಲ ನಿರ್ಧಾರಗಳನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಂಗಳೂರು ಗೋಲಿಬಾರ್‌ಗೆ ಸಂಬಂಧಿಸಿಗೆ ಪ್ರತಿಕ್ರಿಯಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಈ ಸಮರ್ಥನೆ ನೀಡಿದ ಅವರು, ಎಲ್ಲವನ್ನೂ ಮುಖ್ಯಮಂತ್ರಿಗಳನ್ನು ಕೇಳಲಾಗುವುದಿಲ್ಲ ಎಂದು ಹೇಳಿದರು.

ಸ್ವಾಭಾವಿಕವಾಗಿ ಶಾಂತಿ, ಸುವ್ಯವಸ್ಥೆ ಹಿನ್ನೆಲೆಯಲ್ಲಿ ಸರಕಾರ ಕ್ರಮ ಕೈಗೊಳ್ಳುತ್ತದೆ. ಫೈರಿಂಗ್, ಸೆಕ್ಷನ್ ಸೇರಿ ಇಲಾಖೆಯ ಹಿರಿಯ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಶಾಂತಿ ಕಾಪಾಡಲು ಕಠಿಣ ಹೆಜ್ಜೆ ಇಡೋ ಬಗ್ಗೆ ಸಭೆಯಲ್ಲಿ ನಾವು ಚರ್ಚಿಸಿದ್ದೆವು ಎಂದು ಅವರು ಹೇಳಿದರು.

ಸಿದ್ದರಾಮಯ್ಯ, ಯು.ಟಿ.ಖಾದರ್, ಗುಂಡೂರಾವ್ ಮಾತುಗಳನ್ನ ನಾನು ಕೇಳಿದ್ದೇನೆ. ಅಮಾಯಕರ ಮೇಲೆ ಯಾಕೆ ಫೈರಿಂಗ್ ಮಾಡಿದ್ರೀ ಅಂತ ಕೇಳಿದ್ದಾರೆ. ಆದ್ರೆ ಶಾಂತಿ ಕಾಪಾಡೋ ಹಿನ್ನೆಲೆಯಲ್ಲಿ ಕಠಿಣ ಕ್ರಮ ಅಗತ್ಯ. ಶಸ್ತ್ರಾಸ್ತ್ರ ಕೊಠಡಿ ಒಳಗೆ ನುಗ್ಗುವುದು ಶಾಂತಿ ಚಳುವಳಿಯಾ ? ಕಲ್ಲು ತೂರಾಟ, ಪೊಲೀಸ್ ದಿಗ್ಬಂಧನ ಶಾಂತಿಯಾ ? ಇದನ್ನ ನಾವು ಖಂಡಿಸಲ್ಲ, ನಿಮ್ಮ ಆತ್ಮವನ್ನ ಒಮ್ಮೆ ಕೇಳಿಕೊಳ್ಳಿ ಎಂದವರು ಕಾಂಗ್ರೆಸ್ ನಾಯಕರ ಹೆಸರು ಪ್ರಸ್ತಾಪಿಸಿ ಮಾತನಾಡಿದರು.

ಪರಿಹಾರ ಕೊಡುವ ಬಗ್ಗೆ ಜಂಟಾಟ ಇಲ್ಲ. ಆದರೆ ಮೃತ ಪಟ್ಟವರು ಆರೋಪಿಗಳೆಂಬ ಹೇಳಿಕೆ ಹಿನ್ನೆಲೆಯಲ್ಲಿ ಸದ್ಯ ತಡೆಹಿಡಿರು ವುದು ಸತ್ಯ. ಪರಿಶೀಲನೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಸರಕಾರ ಯಾವತ್ತೂ ನ್ಯಾಯದ ಪರ ಇದೆ ಎಂದವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೀನುಗಾರರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್

 ರೈತರಿಗೆ ವಿತರಿಸಲಾದ ಕಿಸಾನ್ ಕ್ರೆಡಿಟ್ ಕಾರ್ಡ್ ಮಾದರಿಯಲ್ಲೇ ಮೀನುಗಾರರಿಗೂ ಕಾರ್ಡ್ ವಿತರಿಸುವ ಯೋಜನೆ ಮೀನುಗಾರಿಕಾ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಟ್ಟಡದಲ್ಲಿರುವ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲ ಹಂತದಲ್ಲಿ 25 ಸಾವಿರ ಮೀನುಗಾರರಿಗೆ ಈ ಕಾರ್ಡ್ ವಿತರಿಸಲಾಗುವುದು. ಈಗಾಗಲೇ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಆರ್ಥಿಕ ಇಲಾಖೆಯೊಂದಿಗೆ ಚರ್ಚೆ ನಡೆಸಿದ್ದು, ಶೀಘ್ರ ಈ ಯೋಜನೆ ಜಾರಿಯಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಮೊದಲ ವಾರದಲ್ಲಿ ತುಮಕೂರಿಗೆ ಆಗಮಿಸಲಿದ್ದು, ಈ ಸಂದರ್ಭ ಅವರು ಕಾರ್ಡ್ ವಿತರಣೆ ಮಾಡುವರು. ಈ ಕಾರ್ಡ್ ಮೂಲಕ ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ಪಡೆದುಕೊಳ್ಳಲು ಸಹಕಾರಿಯಾಗಲಿದೆ ಎಂದರು.

ಎಲ್ಲ ಮೀನುಗಾರಿಕಾ ಜೆಟ್ಟಿ ಹಾಗೂ ಬಂದರುಗಳ ಅಭಿವೃದ್ಧಿಗೆ ಕೇಂದ್ರದಿಂದ ವಿಶೇಷ ಅನುದಾನ ತರಲು ಪ್ರಯತ್ನಿಸಲಾಗುತ್ತಿದೆ. ಈ ಮೂಲಕ ಮೀನುಗಾರರ ಎಲ್ಲ ಬೇಡಿಕೆಗಳ ಈಡೇರಿಕೆಗೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಸಚಿವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News