ಅಯೋಧ್ಯೆ ಶ್ರದ್ಧೆ- ಭಕ್ತಿಯ ಚಟುವಟಿಕೆಗಳ ಕೇಂದ್ರವಾಗಲಿ: ಡಾ. ವೀರೇಂದ್ರ ಹೆಗ್ಗಡೆ

Update: 2019-12-27 09:58 GMT

ಮಂಗಳೂರು, ಡಿ.27: ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯ ಸಮಸ್ಯೆ ಬಗೆಹರಿದಿರುವುದು ಸಂತಸದ ವಿಚಾರವಾಗಿದ್ದು, ಆದಷ್ಟು ಬೇಗ ಮಂದಿರ ನಿರ್ಮಾಣವಾಗಲಿ. ಜತೆಗೆ ಅದು ಶ್ರದ್ಧೆ ಹಾಗೂ ಭಕ್ತಿಯ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಿಸಿದ್ದಾರೆ.

ನಗರದ ಸಂಘ ನಿಕೇತನದಲ್ಲಿ ವಿಶ್ವ ಹಿಂದು ಪರಿಷತ್ ಕೇಂದ್ರೀಯ ವಿಶ್ವಸ್ಥ ಮಂಡಳಿ ಮತ್ತು ಅಂತಾರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಬೈಠಕ್ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದರು.

ಧರ್ಮಸ್ಥಳಕ್ಕೆ ಏಳು ದಿನಗಳಲ್ಲಿ 640 ಸಂತರು ಅಯೋಧ್ಯೆಯಿಂದ ಆಗಮಿಸಿದ್ದಾರೆ. ಆ ಕ್ಷೇತ್ರ ಸಂತರ ನಾಡಾಗಿ ಗುರುತಿಸಿರು ವುದರಿಂದ ಅಯೋಧ್ಯೆ ಅಂತಾರಾಷ್ಟ್ರೀಯವಾಗಿ ಗುರುತಿಸುವಂತಹ ಚಟುವಟಿಕೆಗಳ ಕೇಂದ್ರವಾಬೇಕು ಎಂದು ಅವರು ಹೇಳಿದರು.

ಮತಾಂತರವನ್ನು ಉಲ್ಲೇಖಿಸಿ ಮಾತನಾಡಿದ ಡಾ. ವೀರೇಂದ್ರ ಹೆಗ್ಗಡೆ, ಹಿಂದೆಲ್ಲಾ ಬಡತನ, ಸಾಮಾಜಿಕ ಸಮಸ್ಯೆಗಳ ಕಾರಣಕ್ಕಾಗಿ ಅನುಕಂಪದ ನೆಲೆಯಲ್ಲಿ ಮತಾಂತರ ನಡೆಯುತ್ತಿತ್ತು. ಇತರ ಧರ್ಮಗಳವರು ಮನೆ ಮನೆಗಳಿಗೆ ತೆರಳಿ ಸಹಕಾರದ ಮೂಲಕ ಸಮಸ್ಯೆಗೊಳಗಾದವರನ್ನು ತಮ್ಮ ಧರ್ಮಗಳಿಗೆ ಮತಾಂತರ ನಡೆಸುವ ಕಾರ್ಯ ನಡೆಯುತ್ತಿತ್ತು. ಆದರೆ, ಈಗ ಗ್ರಾಮೀಣ ವಿಕಾಸ ಯೋಜನೆಗಳು ಸಮಾಜದಲ್ಲಿನ ಬಡ ವರ್ಗಕ್ಕೆ ಆರ್ಥಿಕ ಸಬಲತೆಯನ್ನು ನೀಡಿರುವುದರಿಂದ ಬಡತನ, ಅಸಹಾಯಕತೆಯಿಂದಾಗಿ ಕರ್ನಾಟಕದಲ್ಲಿ ಮತಾಂತರ ಆಗುತ್ತಿಲ್ಲ. ಮಾತ್ರವಲ್ಲದೆ ಅನುಕಂಪದ ನೆಲೆಯಲ್ಲಿ ಇಂತಹ ಮತಾಂತರ ಇಂದು ಸಾಧ್ಯವಿಲ್ಲ ಎಂದು ಹೇಳಿದರು.

50 ವರ್ಷಗಳ ಹಿಂದೆ ಶಿಕ್ಷಣಕ್ಕಾಗಿ ಎಲ್ಲರೂ ಕಾನ್ವೆಂಟ್‌ಗಳಿಗೆ ಹೋಗುವ ಪರಿಸ್ಥಿತಿ ಇತ್ತು. ಆದರೆ ಈಗ ಹಿಂದೂ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಇದಲ್ಲದೆ ವೈದ್ಯಕೀಯ ಸೇವೆಯಲ್ಲಿಯೂ ಹಿಂದೂ ಸಂಸ್ಥೆಗಳು ಮುಂದೆ ಸಾಗಿವೆ. ಹಾಗಾಗಿ ಸೇವೆ ಹಿಂದೂಗಳ ಪ್ರಮುಖ ಗುರಿಯಾಗಬೇಕು. ಶಿಕ್ಷಣ, ಆರೋಗ್ಯದೊಂದಿಗೆ ಸಂಸ್ಕಾರಕ್ಕೆ ಹೆಚ್ಚಿನ ಒತ್ತು ನೀಬೇಕು ಎಂದು ಅವರು ಹೇಳಿದರು.

ಗ್ರಾಮೀಣ ವಿಕಾಸ ಯೋಜನೆಯಡಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ದೇವಸ್ಥಾನಗಳ ಶುಚಿತ್ವ ಕಾರ್ಯ ನಡೆಸಲಾಗುತ್ತಿದೆ. ಧರ್ಮಸ್ಥಳ ಕ್ಷೇತ್ರವು ಅತ್ಯಂತ ಶುಚಿತ್ವದ ದೇವಾಲಯವಾಗಿ ಇಂಡಿಯಾ ಟುಡೇಯಿಂದ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವರ್ಷದಲ್ಲಿ ಎರಡು ದಿನಗಳನ್ನು ಆಗಸ್ಟ್ 15 ಹಾಗೂ ಜನವರಿ 14ರಂದು ದೇವಸ್ಥಾನಗಳ ಶುದ್ಧೀಕರಣ ದಿನವನ್ನಾಗಿ ಆಚರಿಸಲಾಗುತ್ತಿದೆ. ಉತ್ತರ ಭಾರತದಲ್ಲಿಯೂ ಈ ಪ್ರಕ್ರಿಯೆ ನಡೆಯಬೇಕು ಎಂದು ಡಾ. ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.

ಆಶೀರ್ವಚನ ನೀಡಿದ ಉಡುಪಿ ಪೇಜಾವರದ ಕಿರಿಯ ವಿಶ್ವ ಪ್ರಸನ್ನ ಸ್ವಾಮೀಜಿ, ವಿಎಚ್‌ಪಿ ದೇಶದಲ್ಲಿ ಆರಂಭಗೊಂಡ ದಿನದಂದೇ ನನ್ನ ಜನನವಾಗಿದ್ದು, ನನ್ನ ಜೀವನವನ್ನು ವಿಎಚ್‌ಪಿಯ ಜತೆ ಕಾರ್ಯನಿರ್ವಹಿಲು ಸಮರ್ಪಿಸುವುದಾಗಿ ಹೇಳಿದರು.

ವಿಎಚ್‌ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ವಿಷ್ಣು ಸದಾಶಿವ್ ಪ್ರಾಸ್ತಾವಿಕವಾಗಿ ಮಾತನಾಡಿ, ಬೈಠಕ್‌ನಲ್ಲಿ ಚರ್ಚೆಯಾಗಬೇಕಿರುವ ವಿಷಯಗಳ ಬಗ್ಗೆ ಗಮನ ಸೆಳೆದರು.

ನಮ್ಮದೇ ಹಿಂದೂ ಸಮಾಜದವರನ್ನು ನಮ್ಮಿಂದ ಬೇರ್ಪಡಿಸಿ ಮತಾಂತರ ಮಾಡುವುದನ್ನು ನಾವು ತಡೆಯಲು ಸಾಧ್ಯವಾಗಿಲ್ಲ. ಧರ್ಮ ನಿರಪೇಕ್ಷತೆಯ ಹೆಸರಿನಲ್ಲಿ ಹಿಂದೂಗಳ ಮೇಲೆ ಆಕ್ರಮಣಕಾರಿ ಷಡ್ಯಂತ್ರಗಳು ನಡೆಯುತ್ತಲೇ ಇವೆ. ಆದರೆ 2014ರಿಂದೀಚೆಗೆ ಸಂಕುಚಿತವಾಗಿದ್ದ ಹಿಂದೂ ಧರ್ಮದವರು ತಮ್ಮನ್ನು ತಾವು ಹಿಂದೂಗಳೆಂದು ಕರೆಸಿಕೊಳ್ಳಲು ಹೆಮ್ಮೆ ಪಡುವಂತಾಗಿದೆ. ಇದು ವಿಎಚ್‌ಪಿಯ ಶಕ್ತಿ ಸಾಮರ್ಥ್ಯದಿಂದ ಸಾಧ್ಯವಾಗಿರುವಂತದ್ದು. ಜನಜಾಗೃತಿಯ ಮೂಲಕ ಹಿಂದೂಗಳ ಭಾವನೆಗಳನ್ನು ಜನರ ಮುಂದಿಟ್ಟು ನಾವು ಯಶಸ್ಸು ಕಾಣಬೇಕಾಗಿದೆ ಎಂದು ಅವರು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ವಿಎಚ್‌ಪಿ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ವಿಎಚ್‌ಪಿ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಶೋಕ್ ಕುಮಾರ್ ಚೌಧುರಿ, ಉಪಾಧ್ಯಕ್ಷರಾದ ಜೀವೇಶ್ವರ ಮಿಶ್ರಾ, ಬೀನಾ ಭಟ್, ಓಂ ಪ್ರಕಾಶ್ ಶಿಂಧೆ, ಜಗನ್ನಾಥ ಶಾಹಿ, ಚಂಪತ್ ರಾಯ್, ಮುಖ್ಯ ಟ್ರಸ್ಟಿ ರಮೇಶ್ ಮೋದಿ, ಕೋಶಾಧಿಕಾರಿ ಗೋಪಾಲ್ ಜುಂಜನ್‌ವಾಲ, ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಂದೆ, ಸಂಘಟನಾ ಕಾರ್ಯದರ್ಶಿ ವಿನಾಯಕ ರಾವ್ ದೇಶಪಾಂಡೆ, ದಕ್ಷಿಣ ಕರ್ನಾಟಕ ಅಧ್ಯಕ್ಷರಾದ ವಿಜಯಲಕ್ಷಿ ಉಪಸ್ಥಿತರಿದ್ದರು.

ವಿಎಚ್‌ಪಿ ದಕ್ಷಿಣ ಕರ್ನಾಟಕ ಕಾರ್ಯಾಧ್ಯಕ್ಷ ಎಂ.ಬಿ. ಪುರಾಣಿಕ್ ಸ್ವಾಗತಿಸಿದರು. ಶರಣ್ ಪಂಪ್‌ವೆಲ್ ವಂದಿಸಿದರು.

'ಮಂದಿರ ನಿರ್ಮಾಣ ತಡವಾಗಲು ರಾಮನ ಜನ್ಮ ಕುಂಡಲಿ ಸಮಸ್ಯೆ'

ರಾಮ ಮಂದಿರ ನಿರ್ಮಾಣಕ್ಕೆ ದೀರ್ಘಾವಧಿ ತಗಲಿದ್ದು ಯಾಕೆ ಎಂಬುದು ನನ್ನನ್ನು ಕೂಡಾ ಸದಾ ಕಾಡುತ್ತಿತ್ತು. ಆದರೆ ಅದಕ್ಕೆ ರಾಮನ ಜನ್ಮ ಕುಂಡಲಿಯ ಸಮಸ್ಯೆಯೇ ಕಾರಣವಾಗಿರಬೇಕು. ಲೋಕ ಕಲ್ಯಾಣಕ್ಕಾಗಿ ರಾಮನ ಜನ್ಮವಾಗಿದ್ದರೂ, ಆತ ಶಿಕ್ಷಣಕ್ಕಾಗಿ ವನವಾಸಕ್ಕೆ ಹೋಗಬೇಕಾಯಿತು. ಆತ ಸಿಂಹಾಸನ ಏರಲು ಸಿದ್ಧತೆ ನಡೆದಾಗ ಮತ್ತೆ 12 ವರ್ಷಗಳ ವನವಾಸವಾಯಿತು. ಬಳಿಕ ರಾಮನಿಗೆ ಎರಡು ಮಕ್ಕಳಾದರೂ ಸೀತೆಯೊಂದಿಗೆ ಸಂಸಾರ ನಡೆಸಲು ಸಾಧ್ಯವಾಗಲಿಲ್ಲ. ಹಾಗಿದ್ದರೂ ರಾಮ ಪ್ರತಿ ಕ್ಷಣವನ್ನೂ ಲೋಕ ಕಲ್ಯಾಣಕ್ಕಾಗಿ ಮೀಸಲಿರಿಸಿದ್ದ. ಇದೇ ರೀತಿ ರಾಮ ಮಂದಿರ ನಿರ್ಮಾಣಕ್ಕೂ ಸಮಯ ತಗುಲಿದೆ. ಇದೀಗ ಕುಂಡಲಿ ನಿರ್ಣಯ ಆಗಿದೆ. ಹೊಸ ಮಂದಿರ ಆದಷ್ಟು ಬೇಗ ಆಗಲಿ.
- ಡಾ. ಡಿ. ವೀರೇಂದ್ರ ಹೆಗ್ಗಡೆ, ರ್ಮಾಧಿಕಾರಿ, ಧರ್ಮಸ್ಥಳ ಕ್ಷೇತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News