ಆಚಾರ, ವಿಚಾರ, ಸಂಸ್ಕಾರಕ್ಕೆ ಸಮುದಾಯ ಒತ್ತು ನೀಡಬೇಕು-ಕೇಂದ್ರ ಸಚಿವ ಡಿ.ವಿ

Update: 2019-12-30 15:20 GMT

ಪುತ್ತೂರು: ಸಮಾಜದ ಪ್ರತಿಯೊಂದು ಮನೆಯಿಂದ ಕಡ್ಡಾಯವಾಗಿ ವರ್ಷಕ್ಕೆ ಒಮ್ಮೆಯಾದರೂ ಜೊತೆಯಾಗಿ ಸೇರಿದಾಗ ಸಮಾಜದ ವರ್ಚಸ್ಸು ಬೆಳೆಯುತ್ತದೆ. ಜೊತೆಗೆ ಆಚಾರ, ವಿಚಾರ, ಸಂಸ್ಕಾರಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವ ಒಕ್ಕಲಿಗ ಗೌಡ ಸೇವಾ ಸಂಘದ ಸಲಹ ಸಮಿತಿ ಗೌರವಾಧ್ಯಕ್ಷ ಡಿ.ವಿ.ಸದಾನಂದ ಗೌಡ ಹೇಳಿದರು.

ಅವರು ರವಿವಾರ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಯುವ ಒಕ್ಕಲಿಗ ಗೌಡ ಸೇವಾ ಸಂಘ, ಗೌಡ ಮಹಿಳಾ ಸಂಘ, ಒಕ್ಕಲಿಗ ಸ್ವಸಹಾಯ ಟ್ರಸ್ಟ್‍ನ ಸಹಯೋಗದಲ್ಲಿ ತೆಂಕಿಲ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆದ ಶ್ರೀ ಸಾಮೂಹಿಕ ಸತ್ಯನಾರಾಯಣ ಪೂಜೆ, ಒಕ್ಕಲಿಗ ಗೌಡ ಸಂಘದ ವಾರ್ಷಿಕ ಸಮಾವೇಶ, ಗೌಡ ಮಹಿಳಾ ಸಂಘದ ಪದಪ್ರದಾನ, ಸಾಂಸ್ಕøತಿಕ ಸಂಭ್ರಮ ಕಾರ್ಯಕ್ರಮದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮನಸ್ಸಿನ ಒಳಗಿನ ಭಾವನಾತ್ಮಕ ಸಂಬಂಧಕ್ಕೆ ಯಾರೂ ಬೆಲೆ ಕಟ್ಟಲಾಗುವುದಿಲ್ಲ. ಅದನ್ನು ಬೆಳೆಸುವಲ್ಲಿ ನಮ್ಮ ಆಚಾರ, ವಿಚಾರ, ಸಂಸ್ಕಾರಕ್ಕೆ ಒತ್ತು ಕೊಡುವ ಕೆಲಸ ಮಾಡಬೇಕೆಂದರು. ಈ ಮೂರು ವಿಚಾರಗಳನ್ನು ಮೈಗೂಡಿಸಿಕೊಂಡು ಬಂದಾಗ ವೈಕ್ತಿತ್ವ ಬೆಳೆಯುತ್ತದೆ. ಆಗ ಸಮಾಜ ಆತನನ್ನು ಒಪ್ಪಿಕೊಳ್ಳುತ್ತಾನೆ. ಸಾಮಾಜಿಕ ವ್ಯವಸ್ಥೆಯಲ್ಲಿ ತನ್ನದೇ ಆದ ವರ್ಚಸ್ಸನ್ನು ಮಾಡಲು ಆಗುತ್ತದೆ ಎಂದರು. ಡಾ. ಬಾಲಗಂಗಾಧರನಾಥ ಸ್ವಾಮೀಜಿಯವರು ದ.ಕ.ಜಿಲ್ಲೆಯಲ್ಲಿ ಪಾದಾರ್ಪಣೆ ಮಾಡಿದ ಬಳಿಕ ಈ ಸಮುದಾಯಕ್ಕೆ ಹೊಸ ಶಕ್ತಿ ಚೈತನ್ಯ ತುಂಬಿತ್ತು. ಅದೇ ರೀತಿ ಕುರುಂಜಿ ವೆಂಕಟ್ರಮಣ ಗೌಡರ ಮಾರ್ಗದರ್ಶನ ಸೂತ್ರ ಗಳಿಂದ ನಾಡಿನಲ್ಲಿ ನೂರಾರು ಗೌಡ ಸಮಾಜ ಶಕ್ತಿ ಶಾಲಿಯಾಗಿ ಬೆಳೆಯಲು ಕಾರಣಿಭೂತವಾಯಿತು ಎಂದರು. ಇವತ್ತು ಜಗತ್ತು ಸಣ್ಣದಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮನುಷ್ಯನ ಮನಸ್ಸು ದೊಡ್ಡದಾಗಬೇಕಾಗಿದೆ. ಆಗ ಸಾಮಾಜಿಕ ವ್ಯವಸ್ಥೆ ಸರಿಯಾಗುತ್ತದೆ ಎಂದರು.

ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಆಶೀರ್ವಚನ ನೀಡಿ ಮಾತನಾ ಡುತ್ತಾ ಎಲ್ಲೋ ಒಂದು ಕಡೆ ಸಮಾಜ ಅರೆ ಪ್ರಜ್ಞೆ ಸ್ಥಿತಿಲ್ಲಿದೆಯೋ ಅಥವಾ ಪ್ರಜ್ಞಾ ಸ್ಥಿತಿಯಲ್ಲಿದೆಯೋ ಎಂಬ ಪ್ರಶ್ನೆ ಮೂಡುತ್ತದೆ. ಸಂಘ ಬಿಟ್ಟು ಮನಷ್ಯ ಇಲ್ಲ. ಮನುಷ್ಯ ಬಿಟ್ಟು ಸಂಘವಿಲ್ಲ ಎಂಬ ಕಾಲಗಟ್ಟದಲ್ಲಿ ಬದುಕಿನ ಯತಾರ್ಥ ಜ್ಞಾನ ತಿಳಿದು ಕೊಳ್ಳುವ ಪ್ರಯತ್ನ ಮಾಡಬೇಕು. ಅದನ್ನು ಪಡೆಯುಲು ಸಮಾಜದ ಸಭೆಗಳಲ್ಲಿ ಭಾಗವಹಿಸಿದಾಗ ಸಮಾಜ ಸೇವೆಯ ಪ್ರೇರಣೆಗಳು ದೊರಕುತ್ತದೆ. ಸಮಾಜ ಸೇವೆ ದೇವರ ಸೇವೆ ಇದ್ದಂತೆ. ಇದರಿಂದ ಯತಾರ್ಥ ಜ್ಞಾನ ತಿಳಿದು ಕೊಳ್ಳಬಹುದು ಎಂದರು. 

ಶಾಸಕ ಸಂಜೀವ ಮಠಂದೂರು ಮಾತನಾಡಿ ದ.ಕ.ಜಿಲ್ಲೆಯಲ್ಲಿ ಒಕ್ಕಲುತನ ಮಾಡುವ ದೊಡ್ಡ ಸಮಾಜ ಎಂದರೆ ಅದು ಒಕ್ಕಲಿಗ ಗೌಡರಾಗಿದ್ದಾರೆ. ಪುತ್ತೂರಿನ ಪ್ರಥಮ ಶಾಸಕ ಕೂಜುಗೋಡು ವೆಂಕಟ್ರಮಣ ಗೌಡರ ಸ್ಮರಣಾರ್ಥ ಅವರ ಪುತ್ಥಳಿಯನ್ನು ಪುತ್ತೂರಿನಲ್ಲಿ ಸ್ಥಾಪನೆ ಮಾಡುವ ಕುರಿತು ಅವರ ಪುತ್ರ ಮತ್ತು ಸಮಾಜದ ಹಿರಿಯರ ಮನವಿಯಂತೆ ಧೃಡ ಹೆಜ್ಜೆ ಇಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಪುತ್ಥಳಿ ಸ್ಥಾಪನೆಗೆ ನಗರಸಭೆ ಪೌರಾಯುಕ್ತರಿಗೆ ಸ್ಥಳ ಸೂಚಿಸಿಲು ತಿಳಿಸಿದ್ದೇನೆ ಎಂದು ತಿಳಿಸಿದರು. 

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‍ನ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಪುತ್ತೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಆನಂದ ಗೌಡ, ಒಕ್ಕಲಿಗ ಸ್ವಸಹಾಯ ಸಂಘದ ಅಧ್ಯಕ್ಷ ಡಿ.ವಿ ಮನೊಹರ್, ಯುವ ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ರಾಧಾಕೃಷ್ಣ ಗೌಡ ಮಾತನಾಡಿ ಶುಭ ಹಾರೈಸಿದರು. ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಹೆಚ್.ಡಿ.ಶಿವರಾಮ್ ಅಧ್ಯಕ್ಷತೆ ವಹಿಸಿದ್ದರು. 

ಈ ಸಂದರ್ಭದಲ್ಲಿ ಒಕ್ಕಲಿಗ ಗೌಡ ಸೇವಾ ಸಂಘದ ಆಶ್ರಯದಲ್ಲಿ ಗೌಡ ಮಹಿಳಾ ಸಂಘದ ನೂತನ ಪದಾಧಿಕಾರಿಗಳ ಪಟ್ಟಿಯನ್ನು ಸಂಘದ ಅಧ್ಯಕ್ಷೆ ನೇತ್ರಾವತಿ ಕೆ.ಟಿ ಗೌಡ ಘೋಷಣೆ ಮಾಡಿದರು. ಸಂಘದ ನೂತನ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ ಅವರಿಗೆ ಸಂಘದ ಪುಸ್ತಕ ಹಸ್ತಾಂತರಿಸುವ ಮೂಲಕ ಪದಗ್ರಹಣ ಸಮಾರಂಭವನ್ನು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಸಲಾಯಿತು. ನೂತನ ಅಧ್ಯಕ್ಷೆ ಮೀನಾಕ್ಷಿ ಡಿ ಗೌಡ ಅವರು ಮಾತನಾಡಿ ತಾಲೂಕಿನಾದ್ಯಂತ ಸಂಘಟನೆಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಮೀನಾಕ್ಷಿ ಡಿ.ಗೌಡ, ಪ್ರಧಾನ ಕಾರ್ಯದರ್ಶಿ ಗೀತಾ ಎ, ಉಪಾಧ್ಯಕ್ಷರಾಗಿ ಶೋಭಾ ಶಿವಾನಂದ್, ಸಂಧ್ಯಾ ಶಶಿಧರ್, ಖಜಾಂಜಿ ಉಷಾಮಣಿ ದಯಾನಂದ ಕೆ, ಜೊತೆ ಕಾರ್ಯದರ್ಶಿ ದಿವ್ಯಾ ಆನೆಗುಂಡಿ, ವಾರಿಜ ಬೆಳಿಯಪ್ಪ ಗೌಡ ಮತ್ತು ಸದಸ್ಯರನ್ನು  ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಗೌರವಿಸಿದರು. 

ಒಕ್ಕಲಿಗ ಗೌಡ ಸಂಘದ ಮಾಜಿ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಒಕ್ಕಲಿಗ ಗೌಡ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಜಯಂತ್ ವೈ, ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ದಿವ್ಯಪ್ರಸಾದ್, ಗೌಡ ಸಂಘದ ಸಂಚಾಲಕ ರವಿಮುಂಗ್ಲಿಮನೆ, ಗೌರಿ ಬನ್ನೂರು, ವಿಶ್ವನಾಥ ಗೌಡ, ಶಿವರಾಮ ಮತಾವು, ಪ್ರತಿಭಾ ಸುಧಾಕರ್, ಎ.ವಿ.ನಾರಾಯಣ, ಪ್ರಚಾರ ಸಮಿತಿಯ ಪುರುಷೋತ್ತಮ ಮುಂಗ್ಲಿಮನೆ, ಆಹಾರ ಸಮಿತಿಯ ಆನಂದ ಮೂವಪ್ಪು, ವೈದಿಕ ಸಮಿತಿಯ ದೇವದಾಸ್ ಗೌಡ, ಸ್ವಯಂ ಸೇವಕ ಸಮಿತಿಯ ಮಾಧವ ಗೌಡ ಪೆರಿಯತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ್ ಗೌಡ ಕಣಜಾಲು ವಂದಿಸಿದರು. ವಸಂತ ವೀರಮಂಗಲ, ಪರಮೇಶ್ವರ ಗೌಡ, ಉದಯ ಕರ್ಮಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News