ತೆಂಕನಿಡಿಯೂರು: ಎಸ್ಎಲ್ಆರ್ಎಂ ನಿವಹರ್ಣೆಗೆ ಮಾಹಿತಿ
ಉಡುಪಿ, ಫೆ.12: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ರಾಷ್ಟ್ರೀಯ ಸೇವಾ ಯೋಜನೆ ಮತ್ತು ಸ್ನಾತಕೋತ್ತರ ಸಮಾಜಕಾರ್ಯ ವಿಭಾಗ ಹಾಗೂ ಜಿಲ್ಲಾ ಪಂಚಾಯತ್ನ ಜಂಟಿ ಆಶ್ರಯದಲ್ಲಿ ಘನ ಮತ್ತು ದ್ರವ ಸಂಪನ್ಮೂಲ ನಿರ್ವಹಣೆ ಕುರಿತು ಮಾಹಿತಿ ಕಾರ್ಯಗಾರ ಸೆಮವಾರ ಕಾಲೇಜಿನಲ್ಲಿ ನಡೆಯಿತು.
ಉಡುಪಿ ಜಿಪಂ ಸ್ವಚ್ಛ ಭಾರತ್ ಮಿಷನ್ನ ಮೀರಾ ರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿ, ಘನ ಮತ್ತು ದ್ರವ ತ್ಯಾಜ್ಯಗಳನ್ನು ಸಂಪನ್ಮೂಲವನ್ನಾ ಗಿಸುವ ಮೂಲಕ ‘ವೇಸ್ಟ್ ಟು ವೆಲ್ತ್’ ಪರಿಕಲ್ಪನೆ ಸಾಕಾರಗೊಳಿಸಬಹುದು. ಪ್ಲಾಸ್ಟಿಕ್ ಸುಡುವುದರಿಂದ ಪೋರಾನ್ಸ್ ಮತ್ತು ಡೈಯಾಕ್ಸಿನ್ನಂಥ ಹಾನಿಕಾರಕ ಅನಿಲವು ಉತ್ಪತ್ತಿಯಾಗಿ ವಾತಾವರಣ ಸೇರುವ ಮೂಲಕ ಶ್ವಾಸಕೋಶಕ್ಕೆ ಸಂಬಂಧಿಸಿದ ಅಪಾಯಕಾರಿ ರೋಗಗಳಿಗೆ ಕಾರಣವಾಗುತ್ತಿದೆ. ಆದುದರಿಂದ ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರ ಜವಾಬ್ದಾರಿಯೂ ಇದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್. ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೈಪ್ಕಾಂಪೊಸ್ಟ್ ಮತ್ತು ಪೂರಕ ವಿಧಾನಗಳನ್ನು ಅಳವಡಿಸಿ ಕೊಳ್ಳುವ ಕಸದ ಉತ್ಪತ್ತಿಯನ್ನು ಕಡಿಮೆಗೊಳಿಸುವ ಮೂಲಕ ಇತರರಿಗೂ ಇದನ್ನು ಅಳವಡಿಸಲು ಪ್ರೇರಣೆ ನೀಡಿದರೆ ದೇಶದ ಸ್ವಚ್ಛತೆಯ ವಿಷಯಕ್ಕೆ ನೀಡಿದ ಅತಿ ದೊಡ್ಡ ಕೊಡುಗೆಯಾಗುವುದು. ಪರಿಸರ ಸಂರಕ್ಷಣೆ ಕೆಲವು ಜನರಿಗೆ ಸೀಮಿತವಾದ ವಿಷಯವಲ್ಲ. ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ತಮ್ಮ ತಮ್ಮ ಪಾತ್ರವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿದರೆ ಸ್ವಚ್ಛ ಬಾರತದ ಕನಸು ಅತಿ ಶೀಘ್ರದಲ್ಲಿ ನನಸಾಗುವುದು ಎಂದರು.
ಐಕ್ಯೂಎಸಿ ಸಂಚಾಲಕ ಡಾ. ಸುರೇಶ್ ರೈ ಕೆ. ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನೆ ಯೋಜನಾಧಿಕಾರಿ ಪ್ರೊ. ಪ್ರಸಾದ್ ರಾವ್ ಎಂ. ಸ್ವಾಗತಿಸಿ ಸಮಾಜಕಾರ್ಯ ಸಂಯೋಜಕ ಡಾ. ದುಗ್ಗಪ್ಪ ಕಜೆಕಾರ್ ವಂದಿಸಿದರು.